Get Updates
Get notified of breaking news, exclusive insights, and must-see stories!

ಗುಜರಾತ್‌ ಭೂಕಂಪ ನಿಮಿತ್ತ 69ನೇ ಕನ್ನಡ ಸಾಹಿತ್ಯ ಸಮ್ಮೇಳನ ರದ್ದು ?

*ತುಮಕೂರು ಪ್ರತಿನಿಧಿಯಿಂದ

ತುಮಕೂರು : ವಿಘ್ನೕಶ್ವರನ ಮದುವೆಗೇ ನೂರೆಂಟು ವಿಘ್ನವಂತೆ, ಹಾಗೆಯೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳಗಳಿಗೂ ವಿಘ್ನ ತಪ್ಪಿದ್ದಲ್ಲ. ಒಂದಲ್ಲಾ ಒಂದು ಕಾರಣಕ್ಕಾಗಿ ಸಾಹಿತ್ಯ ಸಮ್ಮೇಳನಗಳು ಮುಂದಕ್ಕೆ ಹೋಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲು ಎನಿಸಿಬಿಟ್ಟಿದೆ.

ಈ ಬಾರಿ ತುಮಕೂರಿಗೆ ನಿಗದಿಯಾಗಿದ್ದ 69ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೂ ಮುಂದಕ್ಕೆ ಹೋಗುವುದು ಇಲ್ಲ ರದ್ದಾಗುವುದು ಈಗ ಬಹುತೇಕ ನಿಶ್ಚಿತವಾಗಿದೆ. ಭೂಕಂಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಸಮ್ಮೇಳನವನ್ನು ರದ್ದು ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ತುಮಕೂರು ಜಿಲ್ಲಾ ಪಂಚಾಯ್ತಿಯ ದಾಕ್ಷಾಯಿಣಿ ಅಶ್ವತ್ಧ್‌ ತಿಳಿಸಿದ್ದಾರೆ.

ಬಾಗಲಕೋಟೆ ಸಮ್ಮೇಳನದಲ್ಲಿ ಕೈಗೊಂಡಿದ್ದ ನಿರ್ಣಯದ ರೀತ್ಯ ಫೆಬ್ರವರಿ ಅಂತ್ಯಅಥವಾ ಮಾರ್ಚ್‌ನಲ್ಲಿ ಇಲ್ಲಿ ಸಮ್ಮೇಳನ ನಡೆಯಬೇಕಿತ್ತು. ಆದರೆ, ಇನ್ನೂ ಸ್ವಾಗತ ಸಮಿತಿಯ ರಚನೆಯೂ ಆಗಿಲ್ಲ. ಸ್ವಾಗತ ಸಮಿತಿ ರಚಿಸಲು ಫೆಬ್ರವರಿ 6ರಂದು ಸಂಸದ ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯೂ ರದ್ದಾಯಿತು.

ಈ ಸಭೆಯಲ್ಲಿ ಸಮ್ಮೇಳನವನ್ನು ತುಮಕೂರಿನ ಯಾವ ಸ್ಥಳದಲ್ಲಿ ನಡೆಸಬೇಕು, ಆರ್ಥಿಕ ಸಂಪನ್ಮೂಲದ ಕ್ರೋಡೀಕರಣ ಹೇಗೆ?, ಉಪಸಮಿತಿಗಳ ರಚನೆಯೇ ಮುಂತಾದ ಸಿದ್ಧತೆಗಳ ಸಂಬಂಧ ಚರ್ಚೆ ನಡೆಯಬೇಕಾಗಿತ್ತು. ಆದರೆ, ಹಠಾತ್ತಾಗಿ ಈ ಸಭೆಯನ್ನೇ ರದ್ದು ಪಡಿಸಲಾಯಿತು.

ಸಾಹಿತ್ಯ ಪರಿಷತ್‌ಗೇ ಗೊತ್ತಿಲ್ಲ : ತುಮಕೂರಿನಲ್ಲಿ ನಡೆಯಬೇಕಿದ್ದ ಸಮ್ಮೇಳನ ಮುಂದೂಡುವಂತೆ ಮುಖ್ಯಮಂತ್ರಿಗಳು ಸೂಚಿಸಿರುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಇನ್ನೂ ಸ್ವಾಗತ ಸಮಿತಿಯೂ ರಚನೆಯಾಗದ ಹಿನ್ನೆಲೆಯಲ್ಲಿ ಸಮ್ಮೇಳನ ಮೇ ಅಥವಾ ಜೂನ್‌ನಲ್ಲಿ ನಡೆಯಬಹುದು ಎಂಬುದು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನಿರೀಕ್ಷೆ.

ಇದೇ ತಿಂಗಳ 24ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ಈ ಸಂಬಂಧ ದೃಢ ನಿರ್ಧಾರ ಕೈಗೊಳ್ಳಲಿದೆ ಎಂದು ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಸಾಹಿತ್ಯ ಪರಿಷತ್ತಿನ ಹಿರಿಯ ಪದಾಧಿಕಾರಿಯಾಬ್ಬರು ತಿಳಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಭವನ ಹಾಗೂ ಸ್ಮಾರಕವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಸಲುವಾಗಿ ಫೆ.2ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನೇ ಭೂಕಂಪದ ಹಿನ್ನೆಲೆಯಲ್ಲಿ ಮುಂದೂಡಲಾಗಿರುವಾಗ ಸಾಹಿತ್ಯ ಸಮ್ಮೇಳನ ಮುಂದಕ್ಕೆ ಹೋದರೆ ಅಚ್ಚರಿ ಇಲ್ಲ ಎಂಬುದು ಅವರ ಹೇಳಿಕೆ.

ಬಾಗಲಕೋಟೆಯಲ್ಲಿ ಶಾಂತಾದೇವಿ ಮಾಳವಾಡರ ಅಧ್ಯಕ್ಷತೆಯಲ್ಲಿ ನಡೆದ 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸುಮಾರು 3 ಬಾರಿ ಮುಂದಕ್ಕೆ ಹೋಗಿತ್ತು. ಸಿದ್ಧತೆ ಪೂರ್ಣವಾಗಿಲ್ಲ ಎಂದು, ಶಾಲಾ - ಕಾಲೇಜುಗಳ ಪರೀಕ್ಷೆ ಎಂದು ಮುಂದಕ್ಕೆ ಹೋಗಿದ್ದ ಬಾಗಲಕೋಟೆ ಸಮ್ಮೇಳನ, ನೈಋತ್ಯ ರೈಲ್ವೆ ವಲಯ ಹಾಗೂ ಹೈಕೋರ್ಟ್‌ ಪೀಠದ ಗಲಭೆಗಳ ಹಿನ್ನೆಲೆಯಲ್ಲಿ ನಡೆಯುತ್ತದೋ ಇಲ್ಲವೋ ಎಂಬ ಅನುಮಾನವನ್ನೂ ಹುಟ್ಟು ಹಾಕಿತ್ತು. ಅಂತೂ 68ನೇ ಸಾಹಿತ್ಯ ಸಮ್ಮೇಳನ ಮೂರ್ನಾಲ್ಕು ತಿಂಗಳು ತಡವಾಗಿ ಮುಗಿದಿತ್ತು ಎಂಬುದನ್ನು ಸ್ಮರಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+