ಗೋಕಾಕದಲ್ಲಿ ಅಶ್ವಾರೂಢ ಬಸವೇಶ್ವರರ ಪ್ರತಿಮೆ ಪ್ರತಿಷ್ಠಾಪನೆ
ಗೋಕಾಕ್ : ನಗರದ ಹೃದಯ ಭಾಗವಾದ ನ್ಯಾಯಾಲಯದ ಬಳಿಯ ಬಸವೇಶ್ವರ ವೃತ್ತದಲ್ಲಿ ಅಶ್ವಾರೂಢ ಬಸವೇಶ್ವರರ ಕಂಚಿನ ಪ್ರತಿಮೆಯ ಪ್ರತಿಷ್ಠಾಪನೆ ವೈಭವದಿಂದ ಜರುಗಿತು. ಇದಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಹೂವಿನಿಂದ ಅಲಂಕರಿಸಲಾಗಿದ್ದ ಬಸವೇಶ್ವರರ ಮೂರ್ತಿಯ ಭವ್ಯ ಮೆರವಣಿಗೆಯೂ ನಡೆಯಿತು.
ಶ್ರೀ ಕೊಳವಿ ದೇವಾಲಯದಲ್ಲಿ ಪೂಜೆಯ ಬಳಿಕ ಸಕಲ ವಾದ್ಯ ಮೇಳದೊಂದಿಗೆ ಆರಂಭವಾದ ಬಸವೇಶ್ವರರ ಸಾಲಂಕೃತ ಪುತ್ಥಳಿಯ ಮೆರವಣಿಗೆ ನಗರದ ಭಾಪನಾ ಚೌಕ, ಬಣಗಾರರ ಗಲ್ಲಿ, ಬಸವನಗರದ ಮೂಲಕ ಬಸವೇಶ್ವರ ವೃತ್ತದತ್ತ ಸಾಗಿತು. ಅಲ್ಲಿ ವಿಧ್ಯುಕ್ತವಾಗಿ ಪ್ರತಿಮೆಯ ಪ್ರತಿಷ್ಠಾಪನೆ ನಡೆಯಿತು.
ಶ್ರೀ ಶೂನ್ಯ ಸಂಪಾದನೆ ಮಠದ ಮುರುಘೕಂದ್ರ ಮಹಾಸ್ವಾಮಿಗಳು, ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು, ಬಸವೇಶ್ವರ ಪುತ್ಥಳಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳೇ ಅಲ್ಲದೆ ಪೂರ್ಣ ಕುಂಭಗಳನ್ನು ಹೊತ್ತ ಹೆಂಗಸರು ಮತ್ತು ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಬಾಗಲಕೋಟೆ ವರದಿ : ಬಿಜಾಪುರ ಜಿಲ್ಲೆಯ ಯಲಗೂರು ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ ಶನಿವಾರ ಹಾಗೂ ಭಾನುವಾರ ನಡೆಯಲಿದೆ. ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿಗಳು ಜರುಗಲಿವೆ.
ಶನಿವಾರ ಯಲಗೂರೇಶ್ವರ ಮಹಾಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ ನಡೆಯಲಿದ್ದು, ಭಾನುವಾರ ಪಲ್ಲಕ್ಕಿ ಸೇವೆ, ದಾಸೋಹ ಹಾಗೂ ರಥೋತ್ಸವವನ್ನು ಏರ್ಪಡಿಸಲಾಗಿದೆ ಎಂದು ಕಾರ್ತಿಕೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.