ಹಾಸನ: ದೇಶಕ್ಕೇ ಮಾದರಿ ಈ ಅಂಚೆ ನೌಕರರು
ಹಾಸನ : ಡಿಸೆಂಬರ್ 5ನೇ ತಾರೀಖಿನಿಂದಲೂ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟು ಹಿಡಿದು ಅನಿರ್ದಿಷ್ಟಕಾಲದ ಮುಷ್ಕರ ಹೂಡಿದ್ದ ಅಂಚೆ ನೌಕರರು ಮತ್ತೆ ಕೆಲಸಕ್ಕೆ ಹಾಜರಾಗಿ ವಾರವೇ ಕಳೆದಿದೆ. ಆದರೂ, 15ಕ್ಕೂ ಹೆಚ್ಚು ದಿನಗಳ ಕಾಲ ಬಟವಾಡೆ ಆಗದೆ ಉಳಿದಿದ್ದ ಪತ್ರಗಳ ರಾಶಿ ಕಡಿಮೆ ಏನಿಲ್ಲ.
ರಾಜ್ಯವೂ ಸೇರಿದಂತೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಇನ್ನೂ ಪತ್ರಗಳ ವಿಂಗಡಣೆ, ವಿತರಣೆ ಮಾಮೂಲಿ ಸ್ಥಿತಿಗೆ ಮರಳಿಲ್ಲ. ಆದರೆ, ಹಾಸನ ನಗರದ ಅಂಚೆ ನೌಕರರು, ಕ್ರಿಸ್ಮಸ್ ಪ್ರಯುಕ್ತ ಸರ್ಕಾರಿ ರಜೆ ದಿನವಾಗಿದ್ದ ಸೋಮವಾರ ಸ್ವಯಂ ಪ್ರೇರಿತರಾಗಿ ಕೆಲಸಕ್ಕೆ ಹಾಜರಾಗಿ 13ಸಾವಿರಕ್ಕೂ ಹೆಚ್ಚು ಅಂಚೆ ಪತ್ರಗಳನ್ನು ವಿಂಗಡಿಸಿ, ವಿತರಣೆ ಮಾಡಿ, ದೇಶಕ್ಕೇ ಮಾದರಿಯಾಗಿದ್ದಾರೆ.
ರಿಜಿಸ್ಟರ್ಡ್ ಪತ್ರ, ಮನಿಯಾರ್ಡರ್, ಸ್ಪೀಡ್ ಪೋಸ್ಟ್ಗಳನ್ನು ಹೊರತು ಪಡಿಸಿ, ಸಾಮಾನ್ಯ ಅಂಚೆ ಪತ್ರಗಳನ್ನೂ ವಿಂಗಡಿಸಿ, ವಿತರಿಸಲಾಗಿದೆ ಎಂದು ಇಲ್ಲಿನ ಅಂಚೆ ನೌಕರರ ಸಂಘದ ಪ್ರಕಟಣೆ ತಿಳಿಸಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ, ವಿಶೇಷ ಭತ್ಯೆ ಬಯಸದೆ ಸ್ವಯಂ ಪ್ರೇರಿತರಾಗಿ, ಜನಸೇವೆ ಮಾಡಿರುವ ಹಾಸನ ಅಂಚೆ ನೌಕರರ ಈ ಜನಪರ ಕಾಳಜಿ ನಿಜಕ್ಕೂ ಪ್ರಶಂಸನಾರ್ಹ.