ತಮಿ-ಳು-ನಾ-ಡು, ಆಂಧ್ರ-ಪ್ರ-ದೇ-ಶ, ಪಾಂಡಿ-ಚೇ-ರಿ-ಗ-ಳ-ಲ್ಲಿ ಚಂಡ-ಮಾ-ರು-ತ ಭೀ-ತಿ
ಪಾಂಡಿಚೇರಿ : ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿ ಹಾಗೂ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಕೆಲವು ಭಾಗಗಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಆಗಿರುವ ವಾಯುಭಾರ ಕುಸಿತದಿಂದ ಈ ರಾಜ್ಯಗಳಿಗೆ ಸೇರಿದ ತೀರಪ್ರದೇಶದ ಕೆಲವು ಭಾಗಗಳಿಗೆ ಚಂಡಮಾರುತ ಅಪ್ಪಳಿಸಲಿದೆ. ಪಾಂಡಿಚೇರಿಯ ತೀರಪ್ರದೇಶದ ಭಾಗಗಳಲ್ಲಿ ಬಿರುಗಾಳಿಯಿಂದ ಕೂಡಿದ ತುಂತುರು ಮಳೆ ಮಂಗಳವಾರ ಸಂಜೆಯಿಂದಲೇ ಬೀಳತೊಡಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಾಂಡಿಚೇರಿಯಲ್ಲಿನ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ. ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ವಾಹನಗಳನ್ನು ಸನ್ನದ್ದ ಸ್ಥಿತಿಯಲ್ಲಿಡಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕೊಟ್ಟಕುಪ್ಪಮ್ ಹತ್ತಿರದ ನೆಡುಕುಪ್ಪಂ ಹಳ್ಳಿಯಲ್ಲಿ ಮೀನುಗಾರರ ಸುಮಾರು 70 ಬಲೆಗಳನ್ನು ಅಲೆಗಳು ಕೊಚ್ಚಿಕೊಂಡು ಹೋಗಿವೆ. ಮೀನುಗಾರರು ತಮ್ಮ ದೋಣಿಗಳನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಚೆನ್ನೈ ವರದಿ : ಕುಡ್ಡಲೂರಿನ ಪಶ್ಚಿಮ ಭಾಗಕ್ಕೆ 100 ಕಿಲೋ ಮೀಟರ್ ದೂರದಲ್ಲಿ ಬಂಗಾಳಕೊಲ್ಲಿಯಲ್ಲಿ ಕೇಂದ್ರೀಕೃತಗೊಂಡಿರುವ ಚಂಡಮಾರುತದಿಂದ ತಮಿಳುನಾಡಿನ ಉತ್ತರ ಭಾಗದ ತೀರಪ್ರದೇಶದ ಕೆಲವು ಭಾಗಗಳಲ್ಲಿ ಬುಧವಾರ ಸಂಜೆಯ ಹೊತ್ತಿಗೆ ಮಳೆ ಬೀಳಲಿದೆ. ಈ ಸಂಬಂಧ ವಿಶೇಷ ಪ್ರಕಟಣೆ ಮಾಡಿರುವ ಹವಾಮಾನ ಇಲಾಖೆ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದೆ. ಬಿರುಗಾಳಿಯು ಗಂಟೆಗೆ 150ರಿಂದ 170 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಭಾಗದ ಕೆಲವು ಪ್ರದೇಶಗಳಲ್ಲಿ 17ರಿಂಗ 35 ಮಿಲಿಮೀಟರ್ ಮಳೆ ಬಿದ್ದಿದೆ.
ಹೈದರಾಬಾದ್ ವರದಿ : ಚಂಡಮಾರುತದ ಭೀತಿಯಿರುವ ನೆಲ್ಲೂರು ಜಿಲ್ಲೆಯ ತೀರಪ್ರದೇಶದ ಸುಮಾರು 12 ಸಾವಿರ ಜನರನ್ನು ಸ್ಥಳ ಬಿಡುವಂತೆ ಸೂಚಿಸಲಾಗಿದ್ದು, ಈ ಭಾಗಗಳಲ್ಲಿ ಭಾರೀ ಮಳೆ ಮನ್ಸೂಚನೆ ನೀಡಲಾಗಿದೆ. ಈ ಭಾಗದ ಇನ್ನೂ 40 ಸಾವಿರ ಜನರ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ ಎಂದು ನೆಲ್ಲೂರು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಚಿತ್ತೂರು, ಕಡಪಾ ನೆಲ್ಲೂರು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.