ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ಪ್ರಕರಣ : ನ್ಯಾಯಾಂಗ ತನಿಖೆಗೆ ಕೇಂದ್ರದ ಮಾಜಿ ಸಚಿವ ಒತ್ತಾಯ

By Staff
|
Google Oneindia Kannada News

ಚೆನ್ನೈ : ಕನ್ನಡದ ವರನಟ ಡಾ. ರಾಜ್‌ಕುಮಾರ್‌ ಅವರ ಅಪಹರಣ ಮತ್ತು ಬಿಡುಗಡೆ ಕುರಿತು ನ್ಯಾಯಾಂಗ ತನಿಖೆ ಆಗಬೇಕೆಂದು ತಮಿಳು ಮಾನಿಲ ಕಾಂಗ್ರೆಸ್‌ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಎಸ್‌. ಆರ್‌. ಬಾಲಸುಬ್ರಮಣ್ಯಂ ಬುಧವಾರ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಅಪಹರಣ ಮತ್ತು ಬಿಡುಗಡೆ ಎರಡೂ ಘಟನೆಗಳು ನಿಗೂಢವಾಗಿವೆ. ಈ ಘಟನೆಗಳಲ್ಲಿ ನಿಷೇದಿತ ಎಲ್ಟಿಟಿಈ ಮತ್ತು ತಮಿಳು ಉಗ್ರಗಾಮಿ ಸಂಘಟನೆಗಳ ಕೈವಾಡವಿರುವುದರಿಂದ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ರಾಜ್‌ ಅಪಹರಣ ಘಟನೆ ಮುಖ್ಯವಾಗುತ್ತದೆ ಎಂದು ಬಾಲಸುಬ್ರಮಣ್ಯಂ ಹೇಳಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡೀಸ್‌, ಪಿಎಂಕೆ ಅಧ್ಯಕ್ಷ ಡಾ. ಎಸ್‌. ರಾಮದಾಸ್‌ ಹಾಗೂ ತಮಿಳು ದೇಶೀಯ ಇಯಕ್ಕಂ ನಾಯಕ ಪಿ. ನೆಡುಮಾರನ್‌ ಅವರ ನಡುವೆ ನಡೆದಿರುವ ಮಾತುಕತೆಗಳನ್ನು ಬಹಿರಂಗಪಡಿಸಬೇಕು. ಈ ಎಲ್ಲಾ ನಾಯಕರು ಎಲ್ಟಿಟಿಈ ಬೆಂಬಲಿಗರಾಗಿದ್ದು, ರಾಜ್‌ ಅಪಹರಣ ಮತ್ತು ಬಿಡುಗಡೆ ಘಟನೆಗಳಲ್ಲಿ ಎಲ್ಟಿಟಿಈ ಜೊತೆಗೆ ಗ್ರಾನೈಟ್‌ ಲಾಬಿ ಕೂಡಾ ಸೇರಿದೆ. ಅಪಹರಣ ಪ್ರಕರಣ ಎಲ್ಟಿಟಿಈ ಮತ್ತು ಗ್ರಾನೈಟ್‌ ಲಾಬಿ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸಿದೆ ಎಂದು ಅವರು ಆರೋಪಿಸಿದ್ದಾರೆ.

ನೆಡುಮಾರನ್‌ ಆಯ್ಕೆ : ಸಂಧಾನಕ್ಕೆ, ಎಲ್ಟಿಟಿಈ ಬೆಂಬಲಿಗರಾದ ನೆಡುಮಾರನ್‌ ಅವರನ್ನು ವೀರಪ್ಪನ್‌ ಏಕೆ ಆರಿಸಿಕೊಂಡ ಎಂಬುದು ಬಹಿರಂಗವಾಗಬೇಕು. ಈಗ ಪ್ರಾರಂಭಿಸಿರುವ ಕಾರ್ಯಾಚರಣೆ ನಿರ್ಧಾರ ಅವಸರದಿಂದ ಕೂಡಿದ್ದು, ಗಂಭೀರ ಪ್ರಯತ್ನ ನಡೆಯಬೇಕಿದೆ ಎಂದಿದ್ದಾರೆ. ಅಪಹರಣ ಪ್ರಕರಣ ಗುಪ್ತದಳದ ವೈಫಲ್ಯವನ್ನು ಎತ್ತಿ ತೋರಿಸಿದೆ. ಗುಪ್ತದಳ ಚುರುಕಾಗಿದ್ದರೆ ಕಾಡುಗಳ್ಳನನ್ನು ಬಂಧಿಸುವುದು ಸುಲಭ ಎಂದು ಆಭಿಪ್ರಾಯಪಟ್ಟಿರುವ ಅವರು ಸಂಧಾನದ ವೇಳೆಯಲ್ಲಿ ಅಪಾರ ಪ್ರಮಾಣದ ಮದ್ದುಗುಂಡು ಆಯುಧಗಳನ್ನು ಕಾಡಿನೊಳಕ್ಕೆ ಕದ್ದು ಸಾಗಿಸಲಾಗಿದೆ ಎಂದು ಆಪಾದಿಸಿದ್ದಾರೆ. ಸಂಧಾನಕ್ಕೆ ಡಾ. ಭಾನು ಅವರನ್ನು ಕರೆದೊಯ್ದ ಕಾರಣ ಕೂಡಾ ನಿಗೂಢ. ಈ ಮಹಿಳಾ ಡಾಕ್ಟರ್‌ ಎಲ್ಟಿಟಿಈ ಸದಸ್ಯರಿಗೆ ಚಿಕಿತ್ಸೆ ನೀಡಿದ್ದಾರೆ. ಇವರು ಗ್ರಾನೈಟ್‌ ಕ್ವಾರಿಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಿಬಿಐ ತಮಿಖೆಗೆ ಜಯಾ ಒತ್ತಾಯ : ಅಪಹರಣ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಒತ್ತಾಯಿಸಿದ್ದಾರೆ.

ಅಪಹರಣ ಪ್ರಕರಣದ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂಬ ತಮ್ಮ ಒತ್ತಾಯಕ್ಕೆ, ಎಲ್ಲವೂ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಹೇಳಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಹೇಳಿಕೆಗೆ ಜಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್‌ ಅವರ ಬಿಡುಗಡೆಗೆ ನೆಡುಮಾರನ್‌ ಮೂಲಕ 5ರಿಂದ 50 ಕೋಟಿ ರುಪಾಯಿಗಳವರೆಗೆ ಒತ್ತೆಹಣ ನೀಡಲಾಗಿದೆ. ಇದು ಕೇಂದ್ರಕ್ಕೂ ಗೊತ್ತಿದೆ ಎಂಬ ವರದಿಗಳನ್ನು ಜಯಾ ಉಲ್ಲೇಖಿಸಿದ್ದಾರೆ.

ವೀರಪ್ಪನ್‌ ವಶದಿಂದ ರಾಜ್‌ ಬಿಡುಗಡೆಯಾದ ಮೇಲೆ ರಾಮರಾಜನ್‌ ಅವರ ಮನೆಯಲ್ಲಿ ನವೆಂಬರ್‌ 12ರಿಂದ 15ರವರೆಗೆ ಎರಡು ದಿನ ಇದ್ದರು. ಆ ಸಂದರ್ಭದಲ್ಲಿ ರಾಜ್‌ ಅವರ ಜೊತೆ ಕರುಣಾನಿಧಿ, ಕರ್ನಾಟಕದ ಮಖ್ಯಮಂತ್ರಿ ಕೃಷ್ಣ 13 ಬಾರಿ ಮತ್ತು ಕೇಂದ್ರ ಮಂತ್ರಿ ಜಾರ್ಜ್‌ ಫರ್ನಾಂಡೀಸ್‌ 30 ನಿಮಿಷ ಮಾತುಕತೆ ನಡೆಸಿದ್ದಾರೆ. ರಾಜ್‌ ಬಿಡುಗಡೆಯಾಗಿದ್ದು ನವೆಂಬರ್‌ 15ರಂದು ಎಂದು ತಮಿಳುನಾಡು ಸರಕಾರ ಹೇಳಿದೆ ಇದು ಸುಳ್ಳು ಎಂದು ಜಯಾ ರೋಪಿಸಿದ್ದಾರೆ.

ಗುಟ್ಟಾದ ಭೇಟಿ : ನವೆಂಬರ್‌ 19ರಂದು ಕೇಂದ್ರ ಮಂತ್ರಿ ಫರ್ನಾಂಡೀಸ್‌ ಅವರು ಚೆನ್ನೈಗೆ ಭೇಟಿ ನೀಡಿದ್ದಾಗ ಪಿಎಂಕೆ ನಾಯಕ ರಾಮದಾಸ್‌ ಮತ್ತು ನೆಡುಮಾರನ್‌ ಅವರನ್ನು ಗುಟ್ಟಾಗಿ ಭೇಟಿ ಮಾಡಿದ್ದಾರೆ ಎಂದು ಜೂನಿಯರ್‌ ವಿಕಟನ್‌ ಪತ್ರಿಕೆ ಮಾಡಿರುವ ವರದಿಯನ್ನು ಜಯಾ ಉಲ್ಲೇಖಿಸಿದ್ದಾರೆ. ರಾಮದಾಸ್‌ ಮತ್ತು ಟಾಡಾ ಬಂಧಿಗಳು ನೀಡಿದ್ದ ಪತ್ರವನ್ನು ನೆಡುಮಾರನ್‌ ವೀರಪ್ಪನ್‌ಗೆ ತಲುಪಿಸಿದ್ದಾರೆ. ಈ ವರದಿಗಳಿಗೆ ಕರುಣಾನಿಧಿ ಉತ್ತರಿಸಬೇಕು. ರಾಜ್‌ ಬಿಡುಗಡೆ ವಿಷಯದಲ್ಲಿ ಕೇಂದ್ರದ ಪಾತ್ರವನ್ನು ಮತ್ತು ನೆಡುಮಾರನ್‌ ಹೊತ್ತೊಯ್ದ ಪತ್ರಗಳ ಸಾರಾಂಶವನ್ನು ಜನತೆಯ ಮುಂದೆ ಇಡಬೇಕು ಎಂದು ಜಯಲಲಿತಾ ಒತ್ತಾಯಿಸಿದ್ದಾರೆ. ರಾಜ್‌ ಅಪಹರಣ ಮತ್ತು ಬಿಡುಗಡೆ ವಿಷಯದಲ್ಲಿ ಪಾರದರ್ಶಕತೆಯೇ ಇಲ್ಲ. ಇದು ರಾಷ್ಟ್ರದ ಸಾರ್ವಭೌಮತ್ವ ಮತ್ತು ಐಕ್ಯತೆ ದೃಷ್ಟಿಯಿಂದ ಒಳ್ಳೆಯದಲ್ಲ ಎಂದಿರುವ ಜಯಾ ಕರುಣಾನಿಧಿ ಸತ್ಯವನ್ನು ಮುಚ್ಚಿಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X