ಕರ್ನಾಟಕ ಪೊಲೀಸರು ಕಾರ್ಯಾಚರಣೆಗೆ ರೆಡಿ
ಬೆಂಗಳೂರು : ರಾಜ್ಕುಮಾರ್ ಅಪಹರಣದ ನಂತರ ಸ್ಥಗಿತ ಗೊಂಡಿದ್ದ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಕರ್ನಾಟಕ ಪೊಲೀಸರು ಸಿದ್ಧವಾಗಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ಹೇಳಿದ್ದಾರೆ.
ಕಾರ್ಯಾಚರಣೆ ಪ್ರಾರಂಭಕ್ಕೆ ನಾವು ಸಂಪೂರ್ಣ ಸನ್ನದ್ಧವಾಗಿದ್ದೇವೆ. ಆದರೆ, ಕಾರ್ಯಾಚರಣೆ ಆರಂಭಗೊಳ್ಳಲು ಕೆಲ ಸಮಯ ಬೇಕಾಗಬಹುದು ಎಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ದಿನಕರ್ ತಿಳಿಸಿದರು. ಈ ಬಗ್ಗೆ ತಮಿಳುನಾಡಿನ ಧೋರಣೆ ಇನ್ನೂ ಸ್ಪಷ್ಟವಾಗಿಲ್ಲ . ಬೆಳವಣಿಗೆಗಳನ್ನು ಕಾದು ನೋಡಿ ನಂತರ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ಅವರು ಹೇಳಿದರು.
ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ರಾಜಕೀಯ ನಡೆಯುತ್ತಿದೆ ಎನ್ನುವ ವದಂತಿಗಳನ್ನು ತಳ್ಳಿ ಹಾಕಿದ ಅವರು, ಈ ಸಂಬಂಧ ತಾವು ಯಾವುದೇ ಒತ್ತಡಕ್ಕೊಳಗಾಗಿಲ್ಲ ಎಂದರು. ಉಭಯ ರಾಜ್ಯಗಳ ಕಾರ್ಯಾಚರಣೆ ಸ್ವರೂಪ ಕುರಿತಂತೆ ಉತ್ತರಿಸಲು ನಿರಾಕರಿಸಿದ ದಿನಕರ್, ಆ ಬಗ್ಗೆ ಹೇಳಲು ಕಾಲ ಪಕ್ವವಾಗಿಲ್ಲ ಎಂದರು.
ಸಹಾಯಕ್ಕೆ ನಾವು ಸಿದ್ಧ - ಅದ್ವಾನಿ : ಮುಂಬಯಿಯ ಸುದ್ದಿಗೋಷ್ಠಿಯಾಂದರಲ್ಲಿ ಮಾತನಾಡುತ್ತಿದ್ದ ಕೇಂದ್ರ ಗೃಹ ಸಚಿವ ಎಲ್.ಕೆ. ಅದ್ವಾನಿ ಅವರು, ವೀರಪ್ಪನ್ ವಿರುದ್ಧ ಕಾರ್ಯಾಚರಣೆಗೆ ಯಾವುದೇ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಘೋಷಿಸಿದ್ದಾರೆ. ಪ್ರಕರಣದ ಬಗ್ಗೆ ಅವರು ಮಾತನಾಡುತ್ತಿರುವುದು ಇದೇ ಮೊದಲು. ಆದರೆ, ಪ್ರಕರಣವನ್ನು ಯಾವ ರೀತಿ ಮುಂದುವರಿಸಬೇಕೆನ್ನುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಷಯ ಎಂದಿದ್ದಾರೆ.
(ಯುಎಎನ್ಐ)
ವಾರ್ತಾ
ಸಂಚಯ
ಮುಖಪುಟ
/
ರಾಜ್
ಬಿಡುಗಡೆ