ರಂಗ ನಿರ್ದೇಶಕ ಪ್ರಸನ್ನರಿಗೆ ಕೇಂದ್ರ ಸಂಗೀತ-ನಾಟಕ ಅಕಾಡೆಮಿ ಪ್ರಶಸ್ತಿ
ನವದೆಹಲಿ : ಕರ್ನಾಟಕದ ಪ್ರಸಿದ್ಧ ರಂಗ ನಿರ್ದೇಶಕ ಪ್ರಸನ್ನ ಮತ್ತು ಸೂತ್ರದ ಗೊಂಬೆಯಾಟದ ಬಿ.ಎಚ್. ಪುಟ್ಟ ಸ್ವಾಮಿ ಆಚಾರ್ ಸೇರಿದಂತೆ 47 ಮಂದಿ ಕಲಾವಿದರಿಗೆ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯು ಪ್ರಸಕ್ತ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ರಂಗಭೂಮಿ ನಿರ್ದೇಶಕ ಪ್ರಸನ್ನ ಅವರ ರಂಗಭೂಮಿಯ ಶ್ರೇಷ್ಠ ಸಾಧನೆಯನ್ನು ಗುರುತಿಸಿ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು , ಸೂತ್ರದ ಗೊಂಬೆಯಾಟದ ಕಲಾವಿದ ಬಿ.ಎಚ್ ಪುಟ್ಟ ಸ್ವಾಮಿ ಆಚಾರ್ ಅವರು ಕಲಾಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಸಿ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ನೀಡುವ ಪುರಸ್ಕಾರಕ್ಕೆ ಗಾಯಕ ಟಿ. ಎನ್. ಶೇಷ ಗೋಪಾಲನ್ ಅವರನ್ನು ಆರಿಸಲಾಗಿದೆ.
ಮೂವರು ರಂಗಭೂಮಿ ಕಲಾವಿದರಿಗೆ ಸಾರ್ವಕಾಲಿಕ ಜೀವನ ಶ್ರೇಷ್ಠ ಸಾಧನೆಯ ಪುರಸ್ಕಾರ ನೀಡಲಾಗಿದ್ದು, ಬಿ.ವಿ.ಕೆ ಶಾಸ್ತ್ರಿ ಸರ್ಬ್ಜಿತ್ಸಿಂಗ್ ಮತ್ತು ನೇಮಿ ಚಂದ್ ಅವರಿಗೆ ಸಮಗ್ರ ಕಲಾ ಪ್ರಶಸ್ತಿ ನೀಡಲಾಗುವುದು. ಶೇಖರ್ ಕಪೂರ್ ಅವರ ಬ್ಯಾಂಡಿಟ್ ಕ್ವೀನ್ಚಿತ್ರದ ನಾಯಕಿ ಸೀಮಾ ಬಿಸ್ವಾಸ್, ನಿರ್ದೇಶಕಿ ನಾಡಿರಾ ಝಾಹಿರ್ ಬಬ್ಬರ್ ಅವರ ಹೆಸರೂ ಪ್ರಶಸ್ತಿ ಪಟ್ಟಿಯಲ್ಲಿದೆ. ಸಂಗೀತಕ್ಕಾಗಿ ನೀಡುವ ಪ್ರಶಸ್ತಿಯನ್ನು ಹಿಂದೂಸ್ಥಾನಿ ಗಾಯಕ, ಜಯ್ ಚಕ್ರವರ್ತಿ ಮತ್ತು ಸಿತಾರ್ ವಾದಕ ರಾಜೀವ್ ತಾರಾನಾಥ್ ಪಡೆದಿದ್ದಾರೆ.
(ಇನ್ಫೋ ವಾರ್ತೆ)