ರಾಜ್ಗೆ ರಾಜ್ಯ ಪ್ರವಾಸ ಕೈಗೊಂಡು ಅಭಿಮಾನಿಗಳ ಕಾಣುವಾಸೆ
ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್ ಅವರು ವೀರಪ್ಪನ್ ಒತ್ತೆಯಿಂದ ಬಿಡುಗಡೆಯಾಗಿ ನಾಡಿಗೆ ಬಂದ ವರನಟ ರಾಜ್ಕುಮಾರ್ ಅವರನ್ನು ಭೇಟಿ ಮಾಡಿ ಉದ್ಯಮದ ಪರವಾಗಿ ಶುಭ ಕೋರಿದ್ದಾರೆ.
ತಮ್ಮ ಅಪಹರಣವಾದ ದಿನದಿಂದಲೂ ಚಿತ್ರೋದ್ಯಮದ ಮಂದಿ ತೆಗೆದುಕೊಂಡ ಕ್ರಮಗಳು, ಪಟ್ಟ ಶ್ರಮಕ್ಕೆ ರಾಜ್ಕುಮಾರ್ ಕೃತಜ್ಞತೆಗಳನ್ನೂ ಅರ್ಪಿಸಿದ್ದಾರೆ. ತಮ್ಮ ಬಿಡುಗಡೆಗಾಗಿ ಉರುಳುಸೇವೆ, ಪೂಜೆ ಪುರಸ್ಕಾರ ಕೈಗೊಂಡ ಅಭಿಮಾನಿಗಳನ್ನು ಕಾಣುವ ಬಯಕೆಯನ್ನೂ ರಾಜ್ ವ್ಯಕ್ತಪಡಿಸಿದ್ದಾರೆ.
ಕೆಲಕಾಲ ವಿಶ್ರಾಂತಿ ಪಡೆದ ಬಳಿಕ ಕರ್ನಾಟಕಾದ್ಯಂತ ಪ್ರವಾಸ ಮಾಡಿ ಅಭಿಮಾನಿಗಳನ್ನು ಭೇಟಿ ಮಾಡಲು ತಮ್ಮ ಅಪ್ಪಾಜಿ ಇಚ್ಛಿಸಿದ್ದಾರೆ ಎಂದು ಶಿವರಾಜ್ಕುಮಾರ್ ತಿಳಿಸಿದ್ದಾರೆ. ರಾಜ್ಕುಮಾರ್ ಅವರ ಸದಾಶಿವ ನಗರ ಮನೆಯಲ್ಲಿ ಸಂಭ್ರಮ, ಸಡಗರ ತುಂಬಿ ತುಳುಕಾಡುತ್ತಿದೆ. ವಿವಿಧ ಕ್ಷೇತ್ರಗಳ ಗಣ್ಯರು ರಾಜ್ ನಿವಾಸಕ್ಕೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಅಭಿಮಾನಿಗಳಂತೂ ಸದಾಶಿವನಗರದಲ್ಲೇ ಬೀಡು ಬಿಟ್ಟಿದ್ದಾರೆ.
ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಇನ್ನೂ ಪರದಾಡುತ್ತಲೇ ಇದ್ದಾರೆ. ಸದಾಶಿವ ನಗರದ 18ನೇ ಮೇನ್, 5ನೇ ಕ್ರಾಸ್ನಲ್ಲಿ ಸಿಡಿದ ಪಟಾಕಿಯ ಪೇಪರ್ಗಳು, ವಿಜಯೋತ್ಸವಕ್ಕೆ ತಂದಿದ್ದ ಹಾರ - ತುರಾಯಿಗಳು ರಾಶಿ ರಾಶಿಯಾಗಿ ಬಿದ್ದಿವೆ.
ಮುಖಪುಟ / ರಾಜ್ ಬಿಡುಗಡೆ