ನಿರಂತರ ಸಂಶೋಧನೆಗೆ ಒಗ್ಗಿದ, ಬಗ್ಗಿದ ಮನಸ್ಸು
ರಾಮನ್ ಜನಿಸಿದ್ದು ತಿರುಚಿನಾಪಳ್ಳಿಯಲ್ಲಿ. ಇವರ ತಂದೆ ಚಂದ್ರಶೇಖರನ್, ತಾಯಿ ಪಾರ್ವತಿ ಅಮ್ಮಾಳ್, ರಾಮನ್ ತಮ್ಮ ಬಾಲ್ಯವನ್ನು ಕಳೆದದ್ದು ವಿಶಾಖಪಟ್ಟಣದಲ್ಲಿ. ಮೊದಲಿನಿಂದಲೂ ವಿಜ್ಞಾನದ ಬಗ್ಗೆ ಅಪಾರ ಆಸಕ್ತಿ ತಳೆದಿದ್ದ ರಾಮನ್ ಏಳು ವರ್ಷದ ಬಾಲಕರಾಗಿದ್ದಾಗಲೇ ಗನೋಸ್ ಫಿಸಿಕ್ಸ್ ಹಾಗೂ ಇನ್ನಿತರೇ ಪುಸ್ತಕಗಳನ್ನು ಅಭ್ಯಸಿಸಿ ಹೊಸತನ್ನು ಹುಡುಕುವ ಕಾಯಕದಲ್ಲಿ ನಿರತರಾಗಿದ್ದರು. ವಯಸ್ಸಿಗೂ ಮೀರಿದ ಚುರುಕುತನ, ಸಂಶೋಧನೆಯ ತುಡಿತ ಅವರಲ್ಲಿ ಕಾಣುತ್ತಿತ್ತು.
ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ. ಭೌತಶಾಸ್ತ್ರ ವಿಷಯದಲ್ಲಿ ಪ್ರಥಮ ರ್ಯಾಂಕ್ನೊಂದಿಗೆ ಎಂ.ಎ. ಪದವಿ. ತಮ್ಮ ಕಾಲೇಜು ವ್ಯಾಸಂಗಾವಧಿಯಲ್ಲೇ ಅನ್ವೇಷಣಾ ಪ್ರಯೋಗ ನಡೆಸಲು ರಾಮನ್ ಕಾಲೇಜಿನ ಅನುಮತಿ ಕೋರಿದ್ದರು ಆದರೆ, ಅವರಿಗೆ ಅನುಮತಿ ನಿರಾಕರಿಸಲಾಗಿತ್ತು.
ಆದರೆ, ಪ್ರಥಮ ರ್ಯಾಂಕ್ನೊಂದಿಗೆ ಎಂ.ಎ ಪದವಿ ಪಡೆದ ರಾಮನ್ರನ್ನು ಮದ್ರಾಸು ಸರಕಾರ ಅಖಿಲ ಭಾರತ ಸ್ಪರ್ಧಾ ಪರೀಕ್ಷೆಗೆ ಹೆಸರಿಸಿತ್ತು. ಆ ಪರೀಕ್ಷೆಯಲ್ಲೂ ರಾಮನ್ ಪ್ರಥಮ ರ್ಯಾಂಕ್ ತಮ್ಮದಾಗಿಸಿಕೊಂಡ ರಾಮನ್ 1907ರಲ್ಲಿ ಕಲ್ಕತ್ತಾದಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಜನರಲ್ ಆಗಿ ನೇಮಕಗೊಂಡರು. ಅಂದಿನ ಜನರಲ್ಲಿ ರಂಗು - ರಂಗಿನ ಕಲ್ಪನೆ ಮೂಡಿಸಿದ್ದ ರಂಗೂನ್, ನಾಗಪುರಗಳಲ್ಲೂ ಅಧಿಕಾರಿಯಾಗಿ ಜೀವನ ಸಾಗಿಸಿದರು.
ಉನ್ನತ ಅಧಿಕಾರಿಯಾಗಿದ್ದರೂ, ರಾಮನ್ ಮನಸ್ಸಿನಲ್ಲಿ ವೈಜ್ಞಾನಿಕ ಪ್ರಜ್ಞೆ, ಆಸಕ್ತಿ, ಹೊಸತನ್ನು ಹುಡುಕುವ ತವಕದ ತುಡಿತ. ಈ ತುಡಿತವೇ ಅಧಿಕಾರಿಯ ವೃತ್ತಿಯಿಂದ ರಾಮನ್ರನ್ನು ಕಲ್ಕತ್ತಾ ವಿ.ವಿ.ಯ ಪ್ರಾಧ್ಯಾಪಕ ವೃತ್ತಿಗೆ ಎಳೆದು ತಂತು.
ಬೆಂಗಳೂರಲ್ಲಿ ರಾಮನ್: ಸಂಶೋಧನೆಯಲ್ಲಿ ನಿರತರಾದ ರಾಮನ್ಗೆ ವಿಜ್ಞಾನ ಕ್ಷೇತ್ರದಲ್ಲಿ ಮನ್ನಣೆಯೂ ದೊರಕಿತು. ಪುರಸ್ಕಾರಗಳು ಲಭ್ಯವಾದವು. 1933ರಲ್ಲಿ ರಾಮನ್ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ನಿರ್ದೇಶಕರಾದರು. ವಿಜ್ಞಾನ ಕ್ಷೇತ್ರವೇ ನಿಬ್ಬೆರಗಾಗುವಂತಹ ಸಾಧನೆ ಮಾಡಿದ್ದರೂ, ಅವರಲ್ಲಿ ಸಂಶೋಧನೆಯ ದಾಹ ಇಂಗಲಿಲ್ಲ. 1948ರಲ್ಲಿ ನಿವೃತ್ತರಾದ ನಂತರವೂ ರಾಮನ್ ತಮ್ಮದೇ ಆದ ಸ್ವಂತ ಪ್ರಯೋಗಾಲಯ ರಾಮನ್ ಇನ್ಸ್ಟಿಟ್ಯೂಟ್ ಆರಂಭಿಸಿದರು.