ಲಾಲ್ಬಾಗ್ ಕೆರೆ ಕಸ ತೆಗೆಯಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಬೆಂಗಳೂರು : ಜೀವಾನಿಲದ ತಾಣವೆಂದು ಹೆಸರುವಾಸಿಯಾಗಿರುವ ನಗರದ ಲಾಲ್ಬಾಗ್ ಹೂದೋಟದ ಕೆರೆಯಲ್ಲಿ ಬಿದ್ದಿರುವ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆಯುವಂತೆ ಹೈಕೋರ್ಟ್, ಸಂಬಂಧಪಟ್ಟ ಅಧಿಕಾರಿಗಳಿಗೆ ಬುಧವಾರ ನೋಟೀಸ್ ಜಾರಿ ಮಾಡಿದೆ.
ಹದಿಹರೆಯದವರಿಂದ ಇಳಿವಯಸ್ಸಿನವರೆಗಿನ ಸಾವಿರಾರು ಮಂದಿ ಪ್ರತಿದಿನ ಮುಂಜಾನೆ ಕೆಂಪುತೋಟದ ಹಸುರು ಉಗುಳುವ ಆಮ್ಲಜನಕ ಉಸಿರಾಡುತ್ತಿದ್ದಾರೆ. ಜಾಗಿಂಗ್, ವಾಕಿಂಗ್ ಮಾಡಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಇಂಥ ಮಂದಿಯ ಪೈಕಿ ಬಿ.ಕೃಷ್ಣಭಟ್ ಎಂಬುವರು ಲಾಲ್ಬಾಗ್ ಕೆರೆ ಹಾಳುಬಿದ್ದರೂ ಯಾವ ಅಧಿಕಾರಿಯ ಕಣ್ಣೂ ಅದರ ಮೇಲೆ ಬೀಳದ್ದನ್ನು ಗಮನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಅಶೋಕ್ಭಾನ್ ಮತ್ತು ಶ್ರೀನಿವಾಸರೆಡ್ಡಿ ಅವರನ್ನೊಳಗೊಂಡ ವಿಭಾಗೀಯ ಪೀಠ ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿತು. ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಮತ್ತು ನಿರ್ದೇಶಕ, ಬೆಂಗಳೂರು ಜಲಮಂಡಳಿ ಮತ್ತು ಹಾಗೂ ಪರಿಸರ ಮಾಲಿನ್ಯ ಇಲಾಖೆ ಅಧ್ಯಕ್ಷ ಮತ್ತು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಿಗೆ ಹೈಕೋರ್ಟಿನ ನೋಟೀಸು ತಲುಪಿದೆ.
ಮೂರು ತಿಂಗಳ ಹಿಂದೆಯೇ ಕೆರೆಯ ಕೊಳೆ ತೆಗೆವಂತೆ ಹೈಕೋರ್ಟ್ ಹೊರಡಿದ್ದ ಆದೇಶದ ಬಗೆಗೆ ಸರ್ಕಾರ ಉಡಾಫೆ ಧೋರಣೆ ತಳೆದಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ತಕರಾರು ಸಲ್ಲಿಸಿದ್ದರು. ಲಾಲ್ಬಾಗ್ ಕೆರೆಗೆ ಒಳಚರಂಡಿ ಸಂಪರ್ಕವನ್ನೂ ನೀಡಲಾಗಿದ್ದು, ಕೊಳಚೆ ನೀರೂ ಬಂದು ಸೇರುತ್ತಿದೆ. ಸಹಸ್ರಾರು ಮಂದಿ ಬಿಸಾಡುವ ಚಿಪ್ಸ್, ಬಿಸ್ಕತ್ ಕವರುಗಳೂ ಕೆರೆಯ ಕಸದ ಸಂಪತ್ತನ್ನು ಹೆಚ್ಚಿಸಿವೆ. ಇದಕ್ಕೆ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕೆಂದು ಅರ್ಜಿಯಲ್ಲಿ ಬರೆದಿದ್ದರು.
(ಇನ್ಫೋ ವಾರ್ತೆ)