ಸರ್ಕಾರ ವಿಫಲ : ಮಾಧ್ಯಮ ಸೃಷ್ಟಿಸಿದ ಪೆಡಂಭೂತ
ಮಂಡ್ಯ : ತಮ್ಮ ಸರಕಾರ ಎಲ್ಲ ಕ್ಷೇತ್ರದಲ್ಲೂ ವಿಫಲವಾಗಿದೆ ಎಂದು ಯಾರೂ ಹೇಳುತ್ತಿಲ್ಲ. ಇದೆಲ್ಲವೂ ಮಾಧ್ಯಮಗಳು ಸೃಷ್ಟಿಸಿರುವ ಪೆಡಂಭೂತ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದ್ದಾರೆ. ಸಪತ್ನೀಕರಾಗಿ ಕೆ.ಆರ್.ಎಸ್.ನಲ್ಲಿ ಕಾವೇರಿಗೆ ಭಾನುವಾರ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.
ಕಾಗವಾಡ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಸೋಲುಂಟಾಯಿತೆಂದ ಮಾತ್ರಕ್ಕೆ ತಮ್ಮ ಸರಕಾರ ರಾಜ್ಯಾದ್ಯಂತ ಜನ ಬೆಂಬಲ ಕಳೆದುಕೊಂಡಿದೆ ಎಂದು ಅರ್ಥವಲ್ಲ. ಇದಕ್ಕೆಲ್ಲಾ ಏಕೆ ಪಕ್ಷದ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಅದೂ ಉಪಚುನಾವಣೆಯಾಂದರಲ್ಲಿ ಕೆಲವೇ ಮತಗಳ ಅಂತರದಲ್ಲಿ ಸೋಲುಂಡುದ್ದಕ್ಕಾಗಿ ಪಕ್ಷದ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎನ್ನುವುದು ಪ್ರಜಾಪ್ರಭುತ್ವದ ಅಣಕ ಎಂದು ಅವರು ಹೇಳಿದರು.
ಮರದ ನೆರಳಿನಲ್ಲಿ ನಿಂತು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಕೃಷ್ಣ ಅವರು ತಮ್ಮ ಸರಕಾರದ ಒಂದು ವರ್ಷಗಳ ಸಾಧನೆಯನ್ನು ಮರದಡಿ ನಿಂತು ಹೇಳಲಾಗುವುದಿಲ್ಲ, ಒಂದೆರಡು ದಿನದಲ್ಲಿ ಸಾಧನೆಯ ವಿವರವನ್ನೇ ನೀಡುವೆ ಎಂದರು.
ಮುಖಪುಟ / ಊರು ಕೇರಿ