ತೈಲೋತ್ಪನ್ನ ಬಚ್ಚಿಟ್ಟರೆ ಕಠಿಣ ಕ್ರಮ : ರಾಮ್ನಾಯ್ಕ್ ಎಚ್ಚರಿಕೆ
ನವದೆಹಲಿ : ಇನ್ನು ನಾಲ್ಕಾರು ದಿನಗಳಲ್ಲಿ ತೈಲೋತ್ಪನ್ನಗಳ ಬೆಲೆ ಏರಲಿರುವುದು ಬಹುತೇಕ ಖಚಿತವಾಗಿದೆ. ಯಾವುದೇ ಕ್ಷಣದಲ್ಲಾದರೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ಸುದ್ದಿ ಹೊರಬೀಳಬಹುದು.
ಈ ಸಂದರ್ಭದ ಲಾಭ ಪಡೆದು ಹಣ ಮಾಡಲು ಈಗಾಗಲೇ ಸಾಕಷ್ಟು ಮಂದಿ ತುದಿಗಾಲಿನಲ್ಲಿ ನಿಂತಿದ್ದಾರೆ. ಬೆಲೆ ಏರುವ ಹಿನ್ನೆಲೆಯಲ್ಲಿ ತೈಲೋತ್ಪನ್ನಗಳನ್ನು ದಾಸ್ತಾನು ಮಾಡುತ್ತಿದ್ದಾರೆ.
ಸರಕಾರದ ಗಮನಕ್ಕೂ ಈ ವಿಷಯ ಬಂದಿದೆ. ಈ ಹಿನ್ನೆಲೆಯಲ್ಲಿ ತೈಲೋತ್ಪನ್ನಗಳನ್ನು ಅಡಗಿಸಿಡುವ, ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರಕಾರ ಸೋಮವಾರ ಎಚ್ಚರಿಕೆ ನೀಡಿದೆ. ಈ ರೀತಿ ತೈಲ ಬಚ್ಚಿಡುವುದನ್ನು ಸಮಾಜ ವಿರೋಧಿ ಕೃತ್ಯ ಎಂದು ಪರಿಗಣಿಸಿ ದಂಡಿಸಲಾಗುವುದು ಎಂದೂ ಸರಕಾರ ಪ್ರಕಟಿಸಿದೆ.
ತೈಲೋತ್ಪನ್ನಗಳನ್ನು ಬಚ್ಚಿಟ್ಟು, ಕೃತಕ ಅಭಾವ ಸೃಷ್ಟಿಸಿ, ಬೆಲೆ ಏರಿದ ನಂತರ ಮಾರಾಟ ಮಾಡಿ ಲಾಭ ಮಾಡುವ ಮನೋಭಾವ ವಣಿಕರಿಗೆ ತಕ್ಕುದಲ್ಲ. ಇಂತಹ ಹೇಯ ಕೃತ್ಯಕ್ಕೆ ಕೈ ಹಾಕುವ ವಣಿಕರು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ರಾಮ್ ನಾಯ್ಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.