ಮೌನ ಮೊಗ್ಗೆಯ ಒಡೆದ ಮೆರವಣಿಗೆಯಲ್ಲಿಸಂಯಮದ ಮೇಲುಗೈ
ರಾಜ್ಯಪಾಲರ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ ಸಂದರ್ಭ : (ಎಡದಿಂದ ಬಲಕ್ಕೆ) ಸಾ.ರಾ.ಗೋವಿಂದು, ರವಿಚಂದ್ರನ್, ಶಿವರಾಜ್ಕುಮಾರ್, ಅಂಬರೀಶ್, ಕೆ.ಸಿ.ಎನ್.ಚಂದ್ರು, ರಾಜ್ಯಪಾಲರ ಕಾರ್ಯದರ್ಶಿ ಹಾಗೂ ಜಯಂತಿ. (ಚಿತ್ರ : ಕೆ.ಎಂ. ವೀರೇಶ್)
ಬೆಂಗಳೂರು : ಅಂತೂ 53 ದಿನಗಳ ನಂತರ ಮೌನ - ತಾಳ್ಮೆ - ಸಂಯಮಗಳ ಕಟ್ಟೆ ಒಡೆಯಿತು. ಶಾಂತಿಯಿಂದ ಇರುವಂತೆ ಅಭಿಮಾನಿಗಳನ್ನು ಪ್ರಾರ್ಥಿಸುತ್ತಿದ್ದ ರಾಜ್ ಪುತ್ರರಾದಿಯಾಗಿ, ಎಲ್ಲ ಚಿತ್ರನಟರೂ, ಕಲಾವಿದರೂ, ತಂತ್ರಜ್ಞರೂ ಬೀದಿಗಿಳಿದರು. ಮೌನ ಮೆರವಣಿಗೆ ನಡೆಸಿದರು. ಮೌನ ಮೊಗ್ಗೆಯ ನೊಡೆದು ಆಕ್ರೋಶ ಬುಗಿಲೆದ್ದಿತು.
ಬೆಳಗ್ಗೆ 8 ಗಂಟೆಯಿಂದಲೇ ಮೆರವಣಿಗೆ ಆರಂಭಗೊಳ್ಳಲಿದ್ದ ಕೆಂಪೇಗೌಡ ರಸ್ತೆಯ ಬನ್ನಪ್ಪ ಪಾರ್ಕ್ಗೆ ರಾಜ್ ಅಭಿಮಾನಿಗಳು ತಂಡೋಪತಂಡವಾಗಿ ಬರುತ್ತಿದ್ದರು. ಸಾವಿರಾರು ಜನ ಜಮಾಯಿಸಿದರು. ಮೌನ ಮರೆಯಾಯಿತು. ವೀರಪ್ಪನ್ ವಿರುದ್ಧ ಘೋಷಣೆ ಕೇಳಿಬಂದವು. ವೀರಪ್ಪನ್ ಭೂತ ದಹನ ಆಯಿತು. ಕನ್ನಡಿಗರಲ್ಲಿ ಹುದುಗಿದ್ದ ಆಕ್ರೋಶವೆಲ್ಲ ಒಮ್ಮೆಗೆ ಸಿಡಿದೆದ್ದಿತು. ಆದರೂ ಕಾನೂನು ಭಂಗಕ್ಕೆ ಆಸ್ಪದ ನೀಡದೆ, ಕನ್ನಡಿಗರು ಮತ್ತೆ ತಾವು ಸಂಯಮಶೀಲರು ಎಂಬುದನ್ನು ಸಾಬೀತು ಪಡಿಸಿದರು.
ಅಭಿಮಾನಿಗಳನ್ನು ಉದ್ದೇಶಿಸಿ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಶಿವರಾಂ, ಸಾ.ರಾ. ಗೋವಿಂದು ಮುಂತಾದ ಹಿರಿಯ ಕಲಾವಿದರು ಮಾತನಾಡಿದರು. ಯಾವುದೇ ಅಹಿತಕರ ಘಟನೆಗಳಿಗೆ ಅಸ್ಪದ ನೀಡದಂತೆ ಮೌನ ಮೆರವಣಿಗೆ ನಡೆಸಲು ಪ್ರಾರ್ಥಿಸಿದರು. ನೋವು, ಆತಂಕಗಳ ನಡುವೆಯೂ ಸಂಯಮ ಪ್ರದರ್ಶಿಸಿದರು. ಬನ್ನಪ್ಪ ಪಾರ್ಕ್ನಿಂದ ಆರಂಭವಾದ ಮೆರವಣಿಗೆ ಮೈಸೂರು ಬ್ಯಾಂಕ್ ವೃತ್ತ, ಮಹಾರಾಣಿ ಕಾಲೇಜ್, ಸಿಓಡಿ ಕಚೇರಿ, ಪ್ಯಾಲೇಸ್ ರಸ್ತೆಯ ಮೂಲಕ ರಾಜಭವನಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಿತು.
ಮೆರವಣಿಗೆಯಲ್ಲಿ ಚಿತ್ರ ನಟರು : ವಿಷ್ಣುವರ್ಧನ್, ಅಂಬರೀಶ್, ಕಾಶೀನಾಥ್, ಶಿವಕುಮಾರ್, ನೆ.ಲ. ನರೇಂದ್ರಬಾಬು, ರಾಜೇಶ್, ಶಿವರಾಂ, ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಜಯಂತಿ, ಶ್ರುತಿ, ಗಿರಿಜಾ ಲೋಕೇಶ್, ಶಿವರಾಂ, ರಾಕ್ಲೈನ್ ವೆಂಕಟೇಶ್, ರವಿಚಂದ್ರನ್, ಸಾಧು ಕೋಕಿಲ, ಶ್ರೀಧರ್, ದೇವರಾಜ್ ಮುಂತಾದ ನೂರಾರು ಚಿತ್ರನಟರು ಹಾಗೂ ಕಿರುತೆರೆಯ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ತಮ್ಮ ನೆಚ್ಚಿನ ಚಿತ್ರನಟರನ್ನು ನೋಡಲು ಮೆರವಣಿಗೆ ಸಾಗಿದ ರಸ್ತೆಗಳ ಇಕ್ಕೆಲಗಳಲ್ಲೂ ಸಾವಿರಾರು ಜನರು ಸೇರಿದ್ದರು. ಎಲ್ಲರೂ ರಾಜ್ಗೆ ಜಯಕಾರ, ವೀರಪ್ಪನ್ಗೆ ಧೀಕ್ಕಾರ ಕೂಗಿದರು.
ರಾಜ್ಯದ ಸಮರ್ಥನೆ : ರಾಜ್ಕುಮಾರ್ ಬಿಡುಗಡೆಯ ಸಲುವಾಗಿ ತಾನು ಈ ವರೆಗೆ ಕೈಗೊಂಡಿರುವ ಎಲ್ಲ ಕ್ರಮಗಳನ್ನೂ ರಾಜ್ಯ ಸರಕಾರ ಸಮರ್ಥಿಸಿಕೊಂಡಿದೆ. ತನ್ನ ಶಕ್ತಿ ಮೀರಿ ರಾಜ್ ಬಿಡುಗಡೆಗೆ ಪ್ರಯತ್ನಿಸಿರುವುದಾಗಿ ಹೇಳಿದೆ.
1 ಮುಖಪುಟ / ರಾಜ್ ಅಪಹರಣ












Click it and Unblock the Notifications