ಬಂಗಾರದೊಡವೆ ಬೇಕೆ? ಸೀದಾ ಕಂಠೀರವಕ್ರೀಡಾಂಗಣಕ್ಕೆ ಹೋಗಿ
ಬೆಂಗಳೂರು : ಬಂಗಾರದೊಡವೆ ಬೇಕೆ.. ನೀರೆ?ಎಂದು ದಾಸರು ಹಾಡಿದ್ದು ನಿಮಗೂ ಗೊತ್ತಲ್ಲ. ಒಡವೆಯೆಂದರೆ ಹೆಂಗೆಳೆಯರಿಗೆ ಅಚ್ಚು ಮೆಚ್ಚು. ಬಂಗಾರದ ಮಹತ್ವವೇ ಅಂತಹದ್ದು. ಈಗ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 15ರಿಂದ 18ರವರೆಗೆ ಚಿನ್ನಾಭರಣಗಳ ಪ್ರದರ್ಶನ ನಡೆಯುತ್ತಿದೆ.
ಈ ಪ್ರದರ್ಶನಕ್ಕೆ ಕಳೆದ ವರ್ಷ ನಡೆದ ಎಕ್ಸ್ಪೋ ವರ್ಲ್ಡ್ಗೆ ದೊರೆತ ಅಭೂತ ಪೂರ್ವ ಉತ್ತೇಜನವೇ ಕಾರಣ. ಭಾರತ ಸಂಪ್ರದಾಯದ ತವರು. ವಿವಿಧ ನಮೂನೆಯ ಸಾಂಪ್ರದಾಯಿಕ ಆಭರಣಗಳನ್ನು ಅತ್ಯಾಕರ್ಷಕವಾಗಿ ತಯಾರಿಸುವಲ್ಲಿ ಭಾರತೀಯರು ಸಿದ್ಧಹಸ್ತರು. ಭಾರತೀಯರ ಒಡವೆಗಳ ವಿನ್ಯಾಸವನ್ನು ನೋಡಿ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಹಿಂದೆ ರಾಜ ಮಹಾರಾಜರುಗಳು ತಮ್ಮ ಇಡೀ ಶರೀರವನ್ನೇ ಬಂಗಾರದಲ್ಲಿ ಮುಚ್ಚಿಕೊಳ್ಳುತ್ತಿದ್ದರು.
ಇಂದೂ ಮದುವೆ, ಮುಂಜಿಗಳಲ್ಲಿ ಆಭರಣಗಳದ್ದೇ ಸಾಮ್ರಾಜ್ಯವಾಗಿರುತ್ತದೆ. ಮದುವೆ ಬಂದವರ ಮೈಮೇಲಿರುವ ಒಡೆವೆಗಳ ವಿನ್ಯಾಸದತ್ತಲೇ ಕಣ್ಣು ಹೊರಳುತ್ತದೆ. ವಿಜಯನಗರದರಸರ ಕಾಲದಲ್ಲಿ ಮುತ್ತು , ರತ್ನ, ವಜ್ರ, ವೈಢೂರ್ಯಗಳನ್ನು ಸೇರುಗಳಲ್ಲಿ ಅಳೆಯುತ್ತಿದ್ದರಂತೆ. ಇಂದು ಸೇರುಗಟ್ಟಲೇ ಬಂಗಾರ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಆದರೂ ಕನಕ ಎಂದು ಹೆಸರಿಟ್ಟುಕೊಂಡ ಮೇಲೆ ಒಂದು ಅರ್ಧ ಸೇರು ಬಂಗಾರ ಇಲ್ಲದಿದ್ದರೆ ಹೇಗೆ ಹೇಳಿ? ಈಗ ಬಂಗಾರದ ಗೋಜು ಗಂಡಸರಿಗೂ ಅಂಟಿದೆ. ಕೈನ ಐದೂ ಬೆರಳುಗಳಿಗೆ ಉಂಗುರ, ಕೊರಳಿಗೆ ದಪ್ಪ ಚೈನ್, ಬ್ರೇಸ್ಲೆಟ್ಗಳನ್ನು ಧರಿಸುವವರಿದ್ದಾರೆ. ಹಿಂದೆ ಕೈಕಡಗ, ಕಾಲ್ಬಳೆಗಳನ್ನು ಹಾಕುತ್ತಿದ್ದರು. ಈಗದು ಔಟ್ಆಫ್ ಫ್ಯಾಷನ್.
ಅದೇನೇ ಇರಲಿ ಜನರಿಗೆ ಬಂಗಾರದ ಒಡವೆಗಳ ಬಗ್ಗೆ ಇರುವ ವ್ಯಾಮೋಹವನ್ನೇ ಕ್ಯಾಷ್ ಮಾಡಿಕೊಳ್ಳುವ ಆಭರಣ ತಯಾರಕರು ಗ್ರಾಹಕರನ್ನು ತಮ್ಮತ್ತ ಆಕರ್ಷಿಸಲು ಇಂತಹ ಪ್ರದರ್ಶನ ಮಾರಾಟ ಉತ್ಸವಗಳನ್ನು ಏರ್ಪಡಿಸುತ್ತಾರೆ. ಬೆಂಗಳೂರಿನಲ್ಲೀಗ ಚಿನ್ನಾಭರಣ ಪ್ರಿಯರಿಗೆ ಸುಗ್ಗಿಯೋ ಸುಗ್ಗಿ. ಸ್ತ್ರೀಯರ ಸಹಜ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುವ ಒಡವೆಗಳ ನೋಡಲು ಕೊಳ್ಳಲು ಇಲ್ಲಿ ಜನಜಾತ್ರೆಯೇ ಸೇರಿದೆ.
ಕಳೆದ ವರ್ಷ ಪ್ರದರ್ಶನದಲ್ಲಿ ಮೂವತ್ತು ಆಭರಣ ವ್ಯಾಪಾರಿಗಳು ಪಾಲ್ಗೊಂಡಿದ್ದರು. 35 ಸಾವಿರ ಗ್ರಾಹಕರು ಪ್ರದರ್ಶನಕ್ಕೆ ಬಂದಿದ್ದರು. ಈ ಬಾರಿ ವ್ಯಾಪಾರಿಗಳ ಸಂಖ್ಯೆ 50ಕ್ಕೇರಿದೆ. ಅರ್ಧ ಲಕ್ಷ ಜನರು ಪ್ರದರ್ಶನಕ್ಕೆ ಬರುತ್ತಾರೆ ಎನ್ನುತ್ತಾರೆ ಎಕ್ಸ್ಪೋ ವರ್ಲ್ಡ್ನ ಸಂದೀಪ್ ಬೆಕಲ್. ದೇಶಾದ್ಯಂತ ಇರುವ ವ್ಯಾಪಾರಿಗಳು ತಮ್ಮ ಅತ್ಯುತ್ತಮ ನಮೂನೆಗಳೊಂದಿಗೆ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಪ್ರಾಯೋಜಕತ್ವವನ್ನು ವರ್ಲ್ಢ್ ಗೋಲ್ಡ್ ಕೌನ್ಸಿಲ್ ವಹಿಸಿದೆ.