ಇಂದು ಮಂತ್ರಾಲಯಕ್ಕೆ ಹೋಕ್ತಾ ಇದ್ದೀವಿ, ನೀವು ಧೈರ್ಯವಾಗಿರಿ..
ಬೆಂಗಳೂರು : ಅಪಹೃತ ರಾಜ್ಕುಮಾರ್ ಹಾಗೂ ಅವರ ಕುಟುಂಬದವರ ನಡುವೆ ಸಂಪರ್ಕ ಸೇತುವಾಗಿರುವ ಬೆಂಗಳೂರು ಆಕಾಶವಾಣಿ, ಶನಿವಾರ ಡಾ. ರಾಜ್ಕುಮಾರ್ ಕುಟುಂಬದವರ ಸಂದೇಶವನ್ನು ಬಿತ್ತರಿಸಿತು. ರಾಜ್ ಕುಟುಂಬದ ಸದಸ್ಯರು ರಾಜ್ಗೆ ತಲುಪಿಸಿದ ಸಂದೇಶವನ್ನು ಅವರ ಮಾತುಗಳಲ್ಲೇ ಓದಿ..
ಪಾರ್ವತಮ್ಮ ರಾಜ್ಕುಮಾರ್ : ನಿಮ್ಮ ಕ್ಯಾಸೆಟ್ ನೋಡಿದ್ವಿ. ನೀವು ನಮಗೆ ಧೈರ್ಯ ಹೇಳಿದ್ದೀರಿ. ರೀ. . ನೀವು ಧೈರ್ಯವಾಗಿರಿ. ಇವತ್ತು ಅಪ್ಪಾಜಿ ಅವರ ತಿಥಿ. ನಮ್ಮ ಇಡೀ ಕುಟುಂಬ ಸೇರಿಸೋ ದಿನ. ಅಪ್ಪಾಜಿ ಅವರ ಆಶೀರ್ವಾದ ಇದೆ. ನಾವೆಲ್ಲ ಬೇಗ ಸೇರ್ತೀವಿ ಅನ್ನೋ ಭರವಸೆ ನಮಗಿದೆ. ರೀ.. ಇವತ್ತು ಮಂತ್ರಾಲಯಕ್ಕೆ ಹೋಕ್ತಾ ಇದ್ದೀವಿ, ನೀವು ಧೈರ್ಯವಾಗಿರಿ. ರಾಯರಿದ್ದಾರೆ.
ಇಲ್ಲಿ ಲಕ್ಷ್ಮೀ, ಅವಳ ಮಕ್ಳು, ರಾಘಣ್ಣನ ಮಕ್ಳು, ಶಿವಣ್ಣನ ಮಕ್ಳು, ರಾಮ್ಕುಮಾರ್ ಮಕ್ಳು, ಶಾರದಮ್ಮನ ಮಕ್ಳು ಎಲ್ಲ ಚೆನ್ನಾಗಿದ್ದಾರೆ. ಶ್ರೀನಿವಾಸ ಫಾರೀನಿಂದ ಬಂದಿದ್ದಾನೆ. ನಿಮ್ಮನ್ನು ನೋಡ್ಬೇಕು ಅಂತ ಕಾಯ್ತಾ ಇದ್ದಾನೆ. ಬೇಗ ಬನ್ನಿ. ನಮ್ಮ ಮಾವ ನಮ್ಮನ್ನೆಲ್ಲಾ ಒಟ್ಗೇ ಸೇರಿಸ್ತಾರೆ.
ರಾಘವೇಂದ್ರ ರಾಜ್ಕುಮಾರ್ : ಅಪ್ಪಾಜಿ ನಿಮ್ಮ ಕ್ಯಾಸೆಟ್ ನೋಡಿದ್ವಿ. ನೀವು ನಮಗೇ ಧೈರ್ಯ ಹೇಳಿದ್ದೀರಿ. ನಾವೂ ಧೈರ್ಯ ತಗೋಂಡಿದ್ದೀವಿ. ತಾತನ ತಿಥಿ ಇತ್ತು ಅಪ್ಪಾಜಿ. ನೀವು ಹೇಳಿದ್ದಂತೆ ಅನಾಥಾಶ್ರಮದ ಮಕ್ಳೀಗೆಲ್ಲ ಊಟ ಹಾಕ್ಸಿದ್ವಿ. ಆದಷ್ಟು ಬೇಗ ಬನ್ನಿ ಅಪ್ಪಾಜಿ. (ತಮಿಳು ಭಾಷೆಯಲ್ಲಿ ವೀರಪ್ಪನ್ ಅವರ್ಗಳೇ.... ಎಂದು ತಮ್ಮ ತಂದೆಯನ್ನು ಬಿಡುವಂತೆ ಮನವಿ ಮಾಡಿದರು)
ಶಿವರಾಜ್ ಕುಮಾರ್ : ತುಂಬಾ ದಿನದಿಂದ ಕಾಯ್ತಾ ಇದ್ದೀವಿ ಅಪ್ಪಾಜಿ. ಏನು ಮಾಡಬೇಕು ಅಂತಾನೆ ಗೊತ್ತಾಗ್ತಾ ಇಲ್ಲ. ತಾತನ ತಿಥಿ ಇತ್ತು. ತಾತ ಆ ವೀರಪ್ಪನ್ಗೆ ಒಳ್ಳೇ ಮನಸ್ಸು ಕೊಟ್ಟು ನಿಮ್ಮನ್ನ ಬಿಡುವಂತೆ ಮಾಡ್ಲೀ. ಬೇಗ ಬನ್ನಿ ಅಪ್ಪಾಜಿ. ಎಲ್ಲರನ್ನೂ ಕೇಳ್ದೇ ಅಂತ ಹೇಳಿ ಅಪ್ಪಾಜಿ. ಕ್ಯಾಸೆಟ್ ನೋಡಿದ್ವಿ. ತುಂಬಾ ಸಂಕಟ ಆಯ್ತು ಅಪ್ಪಾಜಿ, ನೀವೇ ನೋವಲ್ಲಿ ಇರೋವಾಗ, ನಮಗೆ ಧೈರ್ಯ ಹೇಳಿದ್ದೀರಿ. ಅದು ನಿಮಗೆ ಮಾತ್ರ ಸಾಧ್ಯ ಅಪ್ಪಾಜಿ.
ಪುನೀತ್: ನಾಗಪ್ಪ, ನಾಗೇಶ್ ಎಲ್ಲರ್ನೂ ಕೇಳ್ದೇ ಅಂತ ಹೇಳಿ ಅಪ್ಪಾಜಿ. ಮೆಡಿಸಿನ್ ಎಲ್ಲ ತಗೋಳ್ಳಿ. ಕೆಮ್ಮು, ನೆಗಡಿ ಅಂತಿದ್ರಿ., ಆದಷ್ಟು ಬೇಗ ಬರ್ತೀರಿ ಅಂತ ಕಾಯ್ತಾ ಇದ್ದೀವಿ ಅಪ್ಪಾಜಿ.
ದಾರಿ ಕಾಣದೆ ಗುರು ರಾಯರ ಬಳಿಗೆ ರಾಜ್ ಕುಟುಂಬ : ರಾಜ್ಕುಮಾರ್ ಅವರಿಗೆ ರೇಡಿಯೋ ಸಂದೇಶದಲ್ಲಿ ತಿಳಿಸಿದಂತೆ ಡಾ. ರಾಜ್ಕುಮಾರ್ ಕುಟುಂಬದವರು ಮಂತ್ರಾಲಯದ ಗುರು ರಾಘವೇಂದ್ರರ ಸನ್ನಿಧಿಗೆ ತೆರಳಿದ್ದಾರೆ.
ಪಾರ್ವತಮ್ಮ ರಾಜ್ಕುಮಾರ್, ಪುತ್ರಿ ಲಕ್ಷ್ಮೀ ಹಾಗೂ ಕೊನೆಯ ಪುತ್ರ ಪುನೀತ್ ರಾಜ್ಕುಮಾರ್ ಸೇರಿದಂತೆ ಕುಟುಂಬದ ಇತರ ಸದಸ್ಯರು ಶನಿವಾರ ಬೆಂಗಳೂರಿನಿಂದ ಮಂತ್ರಾಲಯದತ್ತ ಪ್ರಯಾಣ ಹೊರಟರು.