Get Updates
Get notified of breaking news, exclusive insights, and must-see stories!

ಕೈ ಮುಗಿದು ಒಳಗೆ ಬಾಇದು ದೇವರ ಮಕ್ಕಳ ಐಹೊಳೆ

ಮ್ಮನ ಕಳ್ಳಿಗಂಟಿಕೊಂಡು ಇದ್ದಾಗ ನೋಡಿ ಎಲ್ಲಾ ಚಂದವಾಗೇ ಇತ್ತು . ಅವಳು ತಾನೇ ಎಷ್ಟು ಭಾರ ಹೊತ್ತಾಳು. ಸಾಕಷ್ಟು ಬೆಳೆದಿರುವೆ, ನಿನ್ನ ಹೆಸರ ಮೇಲೇ ನೀನು ನಿಲ್ಲು ಅಂಥ ಅವಳಂದದ್ದು ಲೋಕರೂಢಿಯಂತೆಯೇ. ಸರಿ, ನನ್ನ ಅಸ್ತಿತ್ವವನ್ನೂ ಕಂಡುಕೊಂಡದ್ದಾಯಿತು. ನನ್ನದೇ ಗೂಡು, ಸಂಸಾರ ಎಲ್ಲಾ ಸರಿಯೇ. ನಾನೂ ಅಮ್ಮನಿಗೆ ಸರಿಯಾದೆನೆಂದು ಅಂದುಕೊಳ್ಳುತ್ತಿರುವಾಗಲೇ ಎರಗಬೇಕಿತ್ತೇ ಗರದಂತಹ ಬರಸಿಡಿಲು.

ಹೆತ್ತ ಮಕ್ಕಳ ಭವಿಷ್ಯ ಅಂಗೈಗುಳ್ಳೆಯಾಗುವುದನ್ನು ನೋಡಿ ಯಾವ ತಾಯಿ ತಾನೇ ತಣ್ಣಗಿದ್ದಾಳು. ಅಷ್ಟಿಷ್ಟಲ್ಲ ಸ್ವಾಮಿ, ಹೆಚ್ಚೂಕಮ್ಮಿ ಅರ್ಧಲಕ್ಷ ಮಕ್ಕಳು ಸೂರು, ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ, ಅರ್ಥಾತ್‌ ತ್ರಿಶಂಕುಗಳಾಗುತ್ತಿದ್ದಾರೆ. ಯಾರೀ ನಾರಿ, ಗೋಳು ಹೇಳಿಕೊಳ್ಳುತ್ತಿದ್ದಾಳಲ್ಲ - ಹೆಸರೇ ಹೇಳದೆ, ಎಂದುಕೊಳ್ಳುತ್ತಿರುವಿರಾ. ಬೇಸರ ಬೇಡಿರಣ್ಣ . ಒಡಲಳಲ ನಿಮ್ಮೊಡನೆ ಹಂಚಿಕೊಂಡು ನಿರುಮ್ಮಳವಾಗುವ ಬಯಕೆ ನನ್ನದು. ಅಂದಹಾಗೆ ಈ ನತದೃಷ್ಟಳ ಹೆಸರು ಬಾಗಲಕೋಟೆ.

ಈ ಹೊತ್ತು ನಿಮ್ಮಲ್ಲಿ ನನ್ನ ದುಃಖ ತೋಡಿಕೊಳ್ಳಲು ಕಾರಣ, ಆಲಮಟ್ಟಿ ಆಣೆಕಟ್ಟೆ . ಸುಮಾರು 22 ಹಳ್ಳಿಗಳು ಅಣೆಕಟ್ಟೆಯಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆಯಂತೆ. ಪಾಪ! ಹುಟ್ಟಿನಂದಿನಿಂದ ನೆಲ- ನೀರು- ಬಿಸಿಲಿಗೆ ಒಗ್ಗಿಕೊಂಡಿರುವ ಜನ ಯಾರ ನಂಬುವುದು ನಮ್ಮ ಹಿತ ಕಾಯುವರೆಂದು ಎಂದು ಕೊರಗುತ್ತಿದ್ದಾರೆ. ನಾನಾದರೂ ಏನ ಮಾಡಲಿ, ಏನ ಹೇಳಲಿ. ಪ್ರತ್ಯೇಕವಾಗಿ ನಿಂತಿರುವೆನಾದರೂ ಈಗಲೂ ಅಮ್ಮನಲ್ಲೇ ಇವರಲ್ಲಿ ಅನೇಕರಿಗೆ ಸಲುಗೆ ಬಹಳ. ಕಾಗದ ಪತ್ರಗಳಿಂದ ಜನರೆದೆಗೆ ಹರಿದು ನಿಲ್ಲುವುದು ಇನ್ನೂ ಸಾಧ್ಯವಾಗದಿರುವಾಗ, ಕೃಷ್ಣೆ ಪೂರವ ತಡೆದು ನಿಲ್ಲುವುದೆಂತು. ಪ್ರಶ್ನೆಗಳ ಹರಿವಿನಲ್ಲೇ ಕಳೆದುಹೋಗುತ್ತಾ ಅಕಾಲ ಮುಪ್ಪಿಗೊಳಗಾಗಿದ್ದೇನೆ.

ಬರೀ ನನ್ನದೇ ಗೋಳಾಯಿತು. ನೀವೆಲ್ಲಾ ಹೇಗಿದ್ದೀರಿ. ಒಮ್ಮೆ ಬಿಡುವು ಮಾಡಿಕೊಂಡು ಬಂದುಹೊಗಬಾರದೇ. ನೀರ ಮೇಲಿನ ಗುಳ್ಳೆ ನಿಜವಲ್ಲ ಎನ್ನುವುದು ನೀವರಿಯಿರೇ. ಬರುವುದಾದರೆ ನೋಡಿ, ಒಂದು ಅಪರೂಪದ ಆಹ್ವಾನ ನಿಮಗಿದೆ. 68 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನನ್ನ ನೆಲದಲ್ಲೇ. ಇವಳೇನು, ಮೂರೂ ಬಿಟ್ಟವಳು, ಸೂತಕವ ಮುಂಬಾಗಿಲಲ್ಲಿಟ್ಟುಕೊಂಡು ಹಬ್ಬ ಎನ್ನುತ್ತಿರುವಳಲ್ಲ ಎಂದುಕೊಳ್ಳುವಿರಾ. ನಿಮಗೆ ಎಂಥಾ ಶಂಕೆಯೂ ಬೇಡ . ಹಿಗ್ಗುಕುಗ್ಗು ಎಲ್ಲಕ್ಕೂ ಈ ಮನ ಒಗ್ಗಿದೆ. ನಡೆದು ಹೋಗಲಿ ಇದೂ ಒಂದು ಸಂಭ್ರಮ.

ಬರುತ್ತೀರೋ, ಇಲ್ಲವೋ ಗೊತ್ತಿಲ್ಲ . ಹೇಗೂ ಮಾತಿಗೆ ಕುಂತಿದ್ದೀರಿ. ಪೂರ್ಣ ಪರಿಚಯ ಮಾಡಿಕೊಟ್ಟರೇನೆ ನನಗೂ ನೆಮ್ಮದಿ. ಮೊದಲಿಗೇ ಹೇಳಿಬಿಡುತ್ತೇನೆ, ಬೆಂಗಳೂರಿನಿಂದ ನನ್ನಲ್ಲಿಗೆ 573 ಕಿಮೀ ದೂರ. ಇನ್ನು ಒಂಚೂರು ಇತಿಹಾಸ. ನನ್ನದೇನೂ ಕೊಚ್ಚಿಕೊಳ್ಳುವಂತ ವೈಭವವಲ್ಲ ಬಿಡಿ. ಐಹೊಳೆ, ಪಟ್ಟದಕಲ್ಲು, ಬಾದಾಮಿ, ಬಿಜಾಪುರಗಳ ಹೊಳಪಿನೆದುರು ನಾನು ಮಂಕೇ. ಇಷ್ಟಕ್ಕೂ ಇದೆಂಥದವ್ವ ನಿನ್ನ ಹೆಸರು ಎಂದು ನೀವು ಕೇಳಿದರೆ ನನ್ನಲ್ಲಿ ನೇರ ಉ್ತತರವಿಲ್ಲ . ಅವರಿವರು ಹೇಳಿದ್ದನ್ನೇ ನಿಮಗೆ ಹೇಳಬೇಕು. ಬಿಜಾಪುರದ ಅರಸ ತನ್ನ ಪ್ರೀತಿಯ ಮಗಳಾದ ಬಲಿಮ ಶಾ ಬೇಗಮ್ಮಳಗೆ ಬಳೆಗಳ ವೆಚ್ಚಕ್ಕಾಗಿ ನನ್ನನ್ನು ಉಂಬಳಿ ಕೊಟ್ಟನಂತೆ. ಬಳೆಗಳಿಗೆ ಉಂಬಳಿ ಕೊಟ್ಟಿದ್ದರಿಂದ ಬಾಂಗಡಕೋಟೆಯಾಗಿ ನಾಲಗೆಗಳಲ್ಲಿ ಸವೆಯುತ್ತ ಬಾಗಲಕೋಟೆಯಾಯಿತಂತೆ. ಅದು ಆಗಲ್ಲ ಹೀಗೆ ಎನ್ನುವವರ ಪ್ರಕಾರ, ಬಾದಾಮಿ ಉತ್ತುಂಗದಲ್ಲಿರುವಾಗ ನಾನೊಂದು ಕಣ್ಣು ಬಿಡುತ್ತಿರುವ ಸಣ್ಣವ. ಒಬ್ಬ ಮುಸಲ್ಮಾನ ವೀರ ಇಲ್ಲಿ ಹುಲಿಯನ್ನು ಕೊಂದು ಭಾಗಗಳಾಗಿ ಚೆಲ್ಲಿದನಂತೆ. ಹೀಗೆ ಭಾಗನೂರು... ಬಾಗಲೂರು.. ಬಾಗಲಕೋಟೆ ಎನ್ನುತ್ತಾರೆ. ಇನ್ನೂ ಏನೆಲ್ಲ ಕತೆಗಳಿವೆಯಾದರೂ ನಾನಾಗ ಎಳೆಯವ, ನೆನಪಿಲ್ಲ .

ಆಳಿದ್ದೇನು ಕಡಿಮೆ ಜನರಲ್ಲ . ಇಬ್ರಾಹಿಂ ಆದಿಲ್‌ಷಾನ ಕಾಲಕ್ಕೆ ಅಸಫ್‌ಖಾನ್‌ ಎನ್ನುವ ಸೇನಾಪತಿ ಇಲ್ಲೇ ಠಿಕಾಣಿ ಹೂಡಿದ್ದ . ನಂತರ ಸವಣೂರಿನ ನವಾಬ ಬಹಿಲಾಲ್‌ ಖಾನ್‌ ಆಡಳಿತ ವಹಿಸಿಕೊಂಡ. ಇದರ ಉಲ್ಲೇಖವನ್ನು ನೀವು ಇತ್ತೀಚಿನ ಬಿಜಾಪುರ ಜಿಲ್ಲಾ ಗೆಜೆಟಿಯರ್‌ನಲ್ಲಿ ನೋಡಬಹುದು. 1765 ರಲ್ಲಿ ಮಾಧವರಾವ್‌ ಪೇಶ್ವೆ ನನ್ನನ್ನು ತನ್ನ ವಶಕ್ಕೆ ತೆಗೆದುಕೊಂಡು ಸುಭಾವನ್ನಾಗಿ ಪರಿವರ್ತಿಸಿದ. 1778 ರ ಸುಮಾರಿಗೆ ಹೈದರಾಲಿ ನನ್ನನ್ನು ಗೆದ್ದು ಅಬ್ದುಲ್‌ ಹಕೀಂಖಾನನಿಗೆ ವಹಿಸಿಕೊಟ್ಟ. ಆಗ 260 ಯಾರ್ಡ್‌ ಉದ್ದ , 300 ಯಾರ್ಡ್‌ ಅಗಲದ ಕೋಟೆ ಇತ್ತು ಗೊತ್ತಾ . ಕೋಟೆಗೆ ಮೂರು ಮಹಾದ್ವಾರಗಳು, ಅಲ್ಲಲ್ಲಿ ಬುರುಜುಗಳೂ ಇದ್ದವು. ಈಗಲೂ ಇವೆ- ಗುರ್ತುಗಳು. 1818ರಲ್ಲಿ ಸರ್‌ ಥಾಮಸ್‌ ಮನ್ರೋ ನನ್ನ ಬಿಜಾಪುರ ಜಿಲ್ಲೆಯ ತೆಕ್ಕೆಗೆ ಸೇರಿಸಿದ. ಎಡವಿದರೆ ಮಾರು ದೂರದ ಗೋಪಾಳಪುರದಲ್ಲಿ ಇಂಗ್ಲೀಷ್‌ ಅಧಿಕಾರಿಗಳು 1835ರ ಹೊತ್ತಿಗೆ ದೊಡ್ಡ ದೊಡ್ಡ ಹವೇಲಿಗಳನ್ನು ಕಟ್ಟಿದ್ದರು. ಗೊಂದಲ ಬೇಡ, ಹವೇಲಿ ಎಂದರೆ ಅರಮನೆ ಎಂದರ್ಥ. ಈ ರೀತಿಯಾಗಿ ಕೈ ಬದಲಾಯಿಸುತ್ತಾ , ಸವಕಲಾಗುತ್ತಾ , ಬೆಳೆಯುತ್ತಾ ಬಂದಿದ್ದೇನೆ.

ಸಮ್ಮೇಳನಕ್ಕೆ ಅಂತಾ ನೀವು ಬಂದರೆ ನನ್ನ ನೆರೆಹೊರೆಯವರಾದ ಬಾದಾಮಿ, ಐಹೊಳೆ, ಪಟಟ್ದ ಕಲ್ಲುಗಳಿಗೂ ಹೋಗಿ ಬರಬಹುದು. ತಂಗಲಿಕ್ಕೆ ಅಮ್ಮನೂರಾದರೂ ಆದೀತು. ನಿಮಗೆ ಅಂತಾ ಬಕ್ರಿ, ಅವಲಕ್ಕಿ ರೆಡಿಯಾಗುತ್ತಿದೆ. ಇಲ್ಲಿಗೆ ಬಂದರಷ್ಟೇ ಕೊಡೋದು. ಪಾರ್ಸಲ್ಲು ಗಲೀಜು ಎಲ್ಲಾ ನಮಗೊತ್ತಿಲ್ಲ ಪ್ಪ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+