ಹಸಿದವರಿಗೆ ಅನ್ನ ನೀಡಿ ಸಾರ್ಥಕತೆ ಪಡೆದ ಹೈದರಾಬಾದಿನ ಹುಡುಗರು
ಹೈದರಾಬಾದ್, ಜುಲೈ 05: ಹಸಿವಿನಂಥ ಭೀಕರ ಶಿಕ್ಷೆ ಬೇರೆ ಇಲ್ಲ. ಹಸಿವು ಎಂಬುದು ಕೆಲವರಿಗೆ ಕೇವಲ ಭಾಷಣದ ಸರಕಾಗಿರಬಹುದು. ಆದರೆ ಹೈದರಾಬಾದಿನ ಕೆಲವು ಹುಡುಗರು ಮಾತ್ರ, 'ಹಸಿವಿನ ಭೀಕರತೆಯನ್ನು ಪದಗಳಲ್ಲಷ್ಟೇ ಕಟ್ಟಿಡುವ ಪ್ರಯತ್ನ ಮಾಡದೆ, ಅದರ ಪರಿಹಾರದ ಉಪಾಯ ಹುಡುಕುತ್ತಿದ್ದಾರೆ.'
ಬಡತನದಿಂದಾಗಿ ಹೊಟ್ಟೆಗೆ ಹಿಟ್ಟಿಲ್ಲದೆ, ತಣ್ಣೀರು ಬಟ್ಟೆ ಕಟ್ಟಿಕೊಂಡೇ ಬದುಕುವ ನಿರ್ಗತಿಕರಿಗೆ ತಮ್ಮ ಕೈಲಾದ ಶಾಯ ಮಾಡುತ್ತಿದ್ದಾರೆ. ಹೈದರ್ ಮೂಸ್ವಿ ಎಂಬ ಯುವಕ ಮತ್ತು ಅವರ ತಂಡ ಸೇರಿ ಪ್ರತಿದಿನ ರಾತ್ರಿ ಹೈದರಾಬಾದಿನ ದಾಪಿರಪುರ ಸೇತುವೆಯ ಬಳಿಯಲ್ಲಿರುವ 100 ಕ್ಕೂ ಹೆಚ್ಚು ಸೌಲಭ್ಯವಂಚಿತ ಮಂದಿಗೆ ಆಹಾರ ಒದಗಿಸುತ್ತಿದ್ದಾರೆ.
2015 ರಿಂದ ಈ ಕೆಲಸ ಆರಂಬಿಸಿರುವ ಮೂಸ್ವಿ ಮತ್ತುವರ ತಂಡ ಪ್ರತಿ ತಿಂಗಳು ಇದಕ್ಕಾಗಿಯೇ 1.2 ಲಕ್ಷ ರೂ.ಗಳನ್ನು ಖರ್ಚು ಮಾಡುತ್ತದೆ. ಪ್ರತಿ ಆಹಾರದ ಪೊಟ್ಟಣಕ್ಕೆ 40 ರೂ. ಅಗತ್ಯವಿರುತ್ತದೆ.

'ನಮ್ಮ ತಂಡವೇ ಹಣವನ್ನು ಹೊಂದಿಸಿ ಇವರಿಗೆ ಆಹಾರ ಒದಗಿಸುತ್ತಿದ್ದೇವೆ. 2015 ಆಹಾರ ಪೂರೈಕೆ ಆರಂಬಿಸಿದಾಗ ಪ್ರತಿದಿನವೂ ಆಹಾರ ಒದಗಿಸುತ್ತಿರಲಿಲ್ಲ. ತಿಂಗಳಲ್ಲಿ ಏಳೆಂಟು ದಿನ ಮಾತ್ರವೇ ಇಲ್ಲಿ ಬಂದು ಆಹಾರವನ್ನು ಹಂಚುತ್ತಿದ್ದೆವು. ನಂತರ 2017 ರ ಮಾರ್ಚ್ ತಿಂಗಳಿನಿಂದ ಪ್ರತಿದಿನ ಇಲ್ಲಿರುವ ಹಸಿದ ಜನರಿಗೆ ಆಹಾರ ಒದಗಿಸುತ್ತಿದ್ದೇವೆ. ಆಹಾರ ಸಿಕ್ಕ ನಂತರ ಇಲ್ಲಿನ ಜನರ ಮುಖದಲ್ಲಾಗುವ ಆನಂದವನ್ನು ಕಂಡರೆ ನಮಗೆ ಜೀವನ ಸಾರ್ಥಕ ಎನ್ನಿಸುತ್ತದೆ ಎನ್ನುತ್ತಾರೆ ಮೂಸ್ವಿ.
ಈ ಕಾಲದಲ್ಲೂ ಇಂಥ ಮಾನವೀಯ ಅಂತಃಕರಣಗಳಿವೆಯಲ್ಲ ಎಂಬುದೇ ಸಂತಸದ ವಿಷಯ. ಇಂಥ ಆದರ್ಶ ಕಾರ್ಯಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟ ಈ ತಂಡಕ್ಕೆ ನಮ್ಮ ನಮನ.












Click it and Unblock the Notifications