ಝೆನ್ ಕಥೆ: ಎಲ್ಲರಿಗೂ ಒಳ್ಳೆಯದಾಗಲಿ, ಅವನೊಬ್ಬನನ್ನು ಬಿಟ್ಟು!
ಒಬ್ಬ ರೈತನ ಹೆಂಡತಿ ಅನಾರೋಗ್ಯದಿಂದ ಬಳಲಿ ಮೃತಪಟ್ಟಿದ್ದಳು. ಆಕೆಯ ಅಂತ್ಯಸಂಸ್ಕಾರದ ವೇಳೆ ಮಂತ್ರಗಳನ್ನು ಪಠಿಸುವುದಕ್ಕೆಂದು ಆ ರೈತ ಬೌದ್ಧ ಸನ್ಯಾಸಿಯೊಬ್ಬರನ್ನು ಕರೆಸಿದ.
ಸನ್ಯಾಸಿ ಸೂತ್ರಗಳನ್ನು ಹೇಳಿದ. ಎಲ್ಲ ಕಾರ್ಯ ಮುಗಿದ ಬಳಿಕ ರೈತ, "ಹೀಗೆ ಮಂತ್ರಗಳನ್ನು ಪಠಿಸುವುದರಿಂದ ನನ್ನ ಹೆಂಡತಿಗೆ ಪುಣ್ಯ ಸಿಗುತ್ತದೆಯೇ" ಎಂದು ಕೇಳಿದ.
ಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದ
ಅದಕ್ಕೆ ಸನ್ಯಾಸಿ, "ನಿನ್ನ ಹೆಂಡತಿಗೆ ಮಾತ್ರವಲ್ಲ, ಈ ಜಗತ್ತಿನ ಎಲ್ಲ ಮನುಷ್ಯರಿಗೂ, ಸಕಲ ಜೀವರಾಶಿಗೂ ಒಳ್ಳೆಯದಾಗುತ್ತದೆ" ಎಂದ.
"ಅಯ್ಯೋ! ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರೆ ಹೇಗೆ? ನನ್ನ ಹೆಂಡತಿ ಬಹಳ ದುರ್ಬಲವಾಗಿದ್ದಳು. ಎಲ್ಲರಿಗೂ ಒಳ್ಳೆಯದಾದರೆ ಅವಳಿಗೆ ಸಿಗಬೇಕಾದ ಪುಣ್ಯವನ್ನು ಬೇರೆಯವರು ಕಿತ್ತುಕೊಂಡುಬಿಡುತ್ತಾರಷ್ಟೇ. ಅವಳಿಗೆ ಮಾತ್ರವೇ ಲಾಭವಾಗುವಂತಹ ಮಂತ್ರ ಹೇಳಿ" ಎಂದ ರೈತ.
"ಹಾಗಲ್ಲ, ಎಲ್ಲ ಜೀವಿಗಳಿಗೂ ಒಳ್ಳೆಯದನ್ನು ಬಯಸುವುದು ಬೌದ್ಧ ಧರ್ಮದ ಉದ್ದೇಶ, ಅದಕ್ಕೇ ನಾವು ಮಂತ್ರಗಳನ್ನು ಹೇಳುತ್ತೇವೆ" ಎಂದು ಸನ್ಯಾಸಿ ಆತನಿಗೆ ಮನವರಿಕೆ ಮಾಡಿದ.
ಪ್ರೀತಿಯ ಸಂಭ್ರಮ ಧ್ಯಾನದ ಅರಿವಿಗಿಂತ ದೊಡ್ಡದು
"ನಿಮ್ಮ ಉದ್ದೇಶವೇನೋ ಚೆನ್ನಾಗಿದೆ. ಆದರೆ ದಯಮಾಡಿ ಒಂದು ಸಣ್ಣ ಬದಲಾವಣೆ ಮಾಡಿಕೊಳ್ಳಿ. ನಮ್ಮ ಪಕ್ಕದ ಮನೆಯಾತನಿದ್ದಾನಲ್ಲ, ಅವನು ಬಹಳ ದುಷ್ಟ. ನನಗೆ ಬಹಳ ತೊಂದರೆ ಕೊಟ್ಟಿದ್ದಾನೆ. ಅವನೊಬ್ಬನನ್ನು ಬಿಟ್ಟು ಉಳಿದ ಜೀವರಾಶಿಗಳಿಗೆಲ್ಲ ಒಳ್ಳೆಯದಾಗಲಿ ಎಂದು ಮಂತ್ರ ಹೇಳಿ" ಎಂದು ರೈತ ಕೋರಿಕೊಂಡ.
ಜ್ಞಾನೋದಯ ಎನ್ನುವುದು ಹೇಗೆ ಸಿಗುತ್ತದೆ ಗೊತ್ತೇ?
'ಸರ್ವೇ ಜನಾಃ ಸುಖಿನೋ ಭವಂತು' ಅಥವಾ ಎಲ್ಲರಿಗೂ ಒಳಿತಾಗಲಿ ಎಂಬ ಹಾರೈಕೆ ಹಿತವಾಗಿದ್ದರೂ ನಮ್ಮ ಒಳಗಿರುವ ದ್ವೇಷ, ಅಸೂಯೆ ಅದನ್ನು ವಾಸ್ತವವಾಗಿ ಬಯಸುವುದಿಲ್ಲ. ತಾವು ದ್ವೇಷಿಸುವ ವ್ಯಕ್ತಿಗೆ ಕೆಡಕಾಗಲಿ ಎಂಬುದನ್ನೇ ಆಶಿಸುತ್ತೇವೆಯೇ ಹೊರತು ಆತನ ಪ್ರಗತಿಯನ್ನು ಬಯಸುವುದಿಲ್ಲ ಎನ್ನುವುದನ್ನು ಈ ಝೆನ್ ಕಥೆ ಹೇಳುತ್ತದೆ. ಎಲ್ಲರೂ ಚೆನ್ನಾಗಿರಬೇಕು ಎಂಬ ಭಾವ ನಮ್ಮಲ್ಲಿ ಬಾರದ ಹೊರತು ನಾವೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ.
(ಸಂಗ್ರಹ)