ಉಪ್ಪಿನಂಗಡಿಯಲ್ಲಿ ಕನ್ನಡ ಕಥೆಗಾರರ ಶಿಶಿರ ಸಂಭ್ರಮ
ಒಂದಾನೊಂದು ಕಾಲವಿತ್ತು. ಅಜ್ಜಿ ಅಥವಾ ಅಜ್ಜ ಮೊಮ್ಮಕ್ಕಳನ್ನು ಕಥೆ ಹೇಳಲು ಕೂಡಿಸಿಕೊಂಡರೆ ಚುಲ್ಟಾರಿಗಳು ಕಮಕ್ ಕಿಮಕ್ ಅನ್ನದೆ ತಾದಾತ್ಮ್ಯತೆಯಿಂದ ಕಥೆಗಳನ್ನು ಕೇಳುತ್ತಿದ್ದರು. ಕಥೆ ಹಳೆಯದೇ ಆಗಿದ್ದರೂ, ಪ್ರತೀಬಾರಿ ಕೇಳುವಾಗ ಒಂದು ಬಗೆಯ ನಾವೀನ್ಯತೆ ಇರುತ್ತಿತ್ತು. ಈಗ ಅಜ್ಜಿಯೆಲ್ಲೋ, ಮೊಮ್ಮಕ್ಕಳೆಲ್ಲೋ?
ಇರಲಿ, ಈಗ ಅಜ್ಜಿ ಮೊಮ್ಮಕ್ಕಳು ಒಂದೊಂದು ದಿಕ್ಕಿಗೆ ಚೆದುರಿ ಹೋಗಿದ್ದರೂ, ಕಥೆಗಳಿಗಂತೂ ಬರವಿಲ್ಲ. ಜೀವನದಲ್ಲಿ ಹೊಸ ಹುಟ್ಟನ್ನು ಉದ್ದೀಪಿಸುವಂಥ ನೂರಾರು ಕಥೆಗಳು ಕೇಳುಗರಿಗಾಗಿ ಸಿದ್ಧವಾಗಿವೆ. ಅದೂ ಎಲ್ಲಿ ಅಂತೀರಾ? ಹಸುರು ಹಬ್ಬಿದ ನೀಲಿ ತಬ್ಬಿದ ಕಾಡ ನಡುವಿನ ನಂದನ, ಅಲ್ಲಿ ನಡೆವುದು ಮೌನ ಮಾತಿನ ಕಥನ ಚಿಂತನ ಮಂಥನ!
ಕಥೆಗಾರ ಗಿರೀಶ್ ರಾವ್ ಹತ್ವಾರ್ ಮತ್ತು 365 ದಿನಗಳು ರೈತನಾಗಿದ್ದೂ ಕಥೆಗಳನ್ನು ಬಿತ್ತುವ ಗೋಪಾಲಕೃಷ್ಣ ಕುಂಟಿನಿ ಅವರು ವಾಟ್ಸಾಪ್ ನಲ್ಲಿ ಹುಟ್ಟುಹಾಕಿರುವ ಕನ್ನಡ ಕಥೆಗಾರರ ಬಳಗ 'ಕಥೆಕೂಟ'ದ 3ನೇ ವಾರ್ಷಿಕೋತ್ಸವ 'ಶಿಶಿರ ಸಂಭ್ರಮ'. ಕಾಡಿನ ಹಕ್ಕಿಗಳ ಚಿಲಿಪಿಲಿಗಳ ನಡುವೆ ಉಪ್ಪಿನಂಗಡಿಯಲ್ಲಿ ಕಥೆಗಳು ಹೊಸ ಲೋಕವನ್ನೇ ಸೃಷ್ಟಿಸಲಿವೆ.
ಬೆಂಗಳೂರಿನಿಂದ ಹಿಡಿದುಕೊಂಡು ಕರ್ನಾಟಕದ ಮತ್ತು ಹೊರಗಿನ ಕಥೆಗಾರರು, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರುವ ಕುಂಟಿನಿಯಲ್ಲಿ ಶನಿವಾರ 24ರಂದು ಸಂಜೆ ಕಲೆಯಲಿದ್ದಾರೆ. ಮಾತಿನ ಮೆಲುಕು, ಗಾಜಿನ ಕಿಲಿಕಿಲಿಯ ಜೊತೆಗೆ, ರಾತ್ರಿ 10ರಿಂದ 12ರವರೆಗೆ, ಹುಚ್ಚೆದ್ದು ಓಡುವ ಎತ್ತು, ಕೋಣಗಳ ಓಟದ ಸ್ಪರ್ಧೆ ಕಂಬಳ ವೀಕ್ಷಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮರುದಿನ ಬೆಳಿಗ್ಗೆ ಆರಂಭವಾಗುವುದೇ ಶಿಶಿರ ಸಂಭ್ರಮ.
ಕಥೆಕೂಟದ ವಿವರಗಳು ಮುಂದಿನಂತಿವೆ.
ಪ್ರಸ್ತಾವನೆ
:
ಗೋಪಾಲಕೃಷ್ಣ
ಕುಂಟಿನಿ
ಕಥೆಕೂಟದ
ಆಶಯ
:
ಶ್ರೀನಿವಾಸ
ದೇಶಪಾಂಡೆ
ಸಮಾವೇಶದ
ಉದ್ಘಾಟನೆ
:
ಎಸ್ಕೆ
ಶಾಮಸುಂದರ
25ರ ಬೆಳಿಗ್ಗೆ ತಿಂಡಿ ಕಾಫಿ ಕುಡಿದು ಸೂರ್ಯ ನೆತ್ತಿಗೆ ಬರಲು ತವಕಿಸುವ ಹೊತ್ತಿಗೆ 'ಕತೆಯೇ ಕಾರಣ' ಮೊದಲಗೋಷ್ಠಿ ಆರಂಭವಾಗಲಿದೆ. ಕಥಾವಾಚಕಿಯರು : ಪ್ರಿಯಾ ಕೆರ್ವಾಶೆ, ಜಗದೀಶ್ ಶರ್ಮಾ, ಸುವರ್ಣಿನಿ ಕೊಣಲೆ, ಸಚಿನ್ ಎಲ್ಎಸ್, ಮಹಿಮಾ, ಕುಸುಮಬಾಲೆ, ಸಚಿನ್ ತೀರ್ಥಹಳ್ಳಿ, ರಾಜೇಶ್ ಶೆಟ್ಟಿ, ಪಾರ್ವತಿ ಕೊಳಕ್ಕೋಡ್ಳು, ಸರಸ್ವತಿ ಭಟ್. ಇದಕ್ಕೆ ಕಥಾನುಸಂಧಾನ : ಹರೀಶ್ ಕೇರ.
11.45ರ ಹೊತ್ತಿಗೆ, ಖ್ಯಾತ ಸಿನೆಮಾ ನಿರ್ದೇಶಕ ಬಿಎಸ್ ಲಿಂಗದೇವರು ಅವರು 'ಕತೆ ಸಿನೆಮಾ ಆದಾಗ' ಎಂಬ ಬಗ್ಗೆ ಅನುಭವ ಹಂಚಿಕೊಳ್ಳಲಿದ್ದಾರೆ. 12ರಿಂದ 1 ಗಂಟೆ 'ಕತೆ ಬರೆಯುವುದು ಹೇಗೆ' ಎಂಬ ಬಗ್ಗೆ ಜೋಗಿಯವರು ಕಥೆಗಾರರೊಡನೆ ಮುಕ್ತ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅಧ್ಯಕ್ಷ ನುಡಿ ಸುಬ್ರಾಯ ಚೊಕ್ಕಾಡಿ, ನಿರ್ವಹಣೆ ಪಿಬಿ ಹರೀಶ್ ರೈ ಅವರದು.
ಮಧ್ಯಾಹ್ನ 2.30ರಿಂದ ನಡೆಯುವ ಗೋಷ್ಠಿ - ಕತೆಯ ಹೂರಣ. ಕತೆ ಮತ್ತು ಸುದ್ದಿಮನೆ ಬಗ್ಗೆ ಹೊಸದಿಗಂತ ಸಂಪಾದಕ ವಿನಾಯಕ್ ಭಟ್ ಮುರೂರು, ಕತೆ ಮತ್ತು ಪರಂಪರೆ ಬಗ್ಗೆ ಜಗದೀಶ್ ಶರ್ಮ, ಕತೆಯನ್ನೇಕೆ ಓದಬೇಕು ಬಗ್ಗೆ ಮೋಹನ ಭಾಸ್ಕರ ಹೆಗಡೆ ಅವರು ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
ಸಂಜೆ ಚೊಕ್ಕಾಡಿಯಲ್ಲಿ ಸುತ್ತ ಚಹಾ ಕೂಟ ನಡೆದ ನಂತರ ಕಥಾರೂಪಕ ಕಾರ್ಯಕ್ರಮದಲ್ಲಿ ಮಂಥನದಲ್ಲಿ ತೊಡಗುವವರು ಪ್ರಿಯಾ ಕೆರ್ವಾಶೆ, ಮಹಿಮಾ, ಕೆಂಡಗಣ್ಣ ಮತ್ತು ರಾಜೇಶ್. ನಂತರ ಮುಕ್ತ ಸಂವಾದವಿದ್ದು, ಯಾರು ಏನು ಬೇಕಾದರೂ ಪ್ರಶ್ನೆಗಳನ್ನು ಕೇಳಬಹುದು, ಕಥೆಗಳ ಬಗ್ಗೆ. ಇಡೀ ಕಾರ್ಯಕ್ರಮದ ನಿರ್ವಹಣೆ ಮಾಡುವವರು ತನ್ವಿ ಮತ್ತು ಖುಷಿ.