ಸಂತೋಷಕ್ಕಾಗಿ ಸುಳ್ಳು
ಇಬ್ಬರಿಗೂ ಕಾಯಿಲೆ. ವಯಸ್ಸಾದ ಗಂಡಸರು. ಆಸ್ಪತ್ರೆಯ ಒಂದೇ ಕೊಠಡಿಯ ಹಂಚಿಕೊಂಡಿದ್ದಾರೆ. ಗಂಟೆಗಳ ಕಾಲ ಹರಟುತ್ತಾರೆ. ಹೆಂಡತಿ, ಕುಟುಂಬ, ಮನೆ, ದಣಿವು ತಂದ ಕೆಲಸ, ಎರಡನೇ ಮಹಾಯುದ್ಧ ಉಣಿಸಿದ ಅನುಭವಗಳು, ಮತ್ತೂ ಏನೇನೋ.. ಅವರ ಮಾತುಗಳಲ್ಲಿ ಎಲ್ಲವೂ ಸಂದು ಹೋಗುತ್ತವೆ.
ಇಬ್ಬರಲ್ಲೊಬ್ಬನಿಗೆ ಪ್ರತಿ ಮಧ್ಯಾಹ್ನ ತನ್ನ ಹಾಸಿಗೆಗೆ ಹೊಂದಿಕೊಂಡಿರುವ ಕಿಟಕಿಯಿಂದ ಹೊರಗೆ ನೋಡುವ ಅಭ್ಯಾಸ. ಅಲ್ಲೊಂದು ಉದ್ಯಾನ, ಸೊಗಸಾದ ಕೊಳ. ಬಾತುಗಳು ಈಜುತ್ತಿವೆ. ಮಕ್ಕಳು ದೋಣಿಗಳಲ್ಲಿ ಆಡುತ್ತಾರೆ. ಹಿರಿಯ ಹಸಿರು ಮರಗಳು. ನಗರದ ದಿಗಂತ ಸುಂದರವಾಗಿದೆ. ಒಂದು ಒಣ ಹವೆಯ ಮಧ್ಯಾಹ್ನ ಪೆರೇಡೊಂದು ಸಾಗಿಹೋಗುತ್ತದೆ. ಬ್ಯಾಂಡ್ನ ಸದ್ದು ಕೇಳಿಸುತ್ತದೆ. ಹಾಗೆ ನೋಡಿದ ಪ್ರತಿಸಾರಿಯೂ ಆತ ತಾನು ಕಂಡದ್ದನ್ನು ಗೆಳೆಯನಿಗೆ ವಿವರಿಸುತ್ತಾನೆ. ಆತ ಬಣ್ಣಿಸಿದ್ದೆಲ್ಲ ಗೋಡೆ ಬದಿಯ ಮನುಷ್ಯನೆದೆಯಲ್ಲಿ ಚಿತ್ರಗಳಾಗುತ್ತವೆ.
ಕೊನೆಗೊಂದು ದಿನ, ಕಿಟಕಿ ಬದಿಯ ಮನುಷ್ಯ ಸಾಯುತ್ತಾನೆ. ಮತ್ತೊಂದು ಬದಿಯ ಮನುಷ್ಯ ಸುಂದರ ಹೊರ ಜಗತ್ತನ್ನು ಕಾಣುವ ಆಸೆಯಿಂದ ತನ್ನನ್ನು ಕಿಟಕಿ ಬದಿ ಕಳಿಸುವಂತೆ ದಾದಿಯ ಕೋರುತ್ತಾನೆ. ದಾದಿ ಖುಷಿಯಿಂದಲೇ ಆತನನ್ನು ಸ್ಥಳಾಂತರಿಸುತ್ತಾಳೆ. ಆದರೆ ಕಿಟಕಿಯಿಂದ ನೋಡಿದಾಗ ಕಾಣುವುದು ಶೂನ್ಯ. ಬೀದಿಯ ಆ ಬದಿಯ ಕಟ್ಟಡದ ಗೋಡೆ. ನಿರಾಶನಾದ ಆತ, ತನ್ನ ಗೆಳೆಯನ ಅದ್ಭುತ ವರ್ಣನೆಯ ಕುರಿತು ದಾದಿಯನ್ನು ಕೇಳುತ್ತಾನೆ. ಆಕೆ ಹೇಳುತ್ತಾಳೆ, ಬಹುಶಃ ಆತ ನಿಮ್ಮನ್ನು ಸಂತೋಷ ಪಡಿಸಲು ಬಯಸಿರಬೇಕು.
(ಋಣ : ಅನಾಮಿಕ ಬರಹಗಾರನ ಇಂಗ್ಲಿಷ್ ಸಾಲುಗಳು. ಕನ್ನಡಕ್ಕೆ- ರಘುನಾಥ ಚ.ಹ.)
ಈ ಕಥೆಯ ಕುರಿತು ನಿಮಗೆ ಏನನ್ನಿಸಿತು ?