ಲಡತ್ತು
*ವಿಶಾಖ ಎನ್.
‘ಬರಾಬರಿ ಐದು ವರ್ಷ ಸಾಧನೆ ಮಾಡಾನೆ ಇವನು. ಈ ಸಲ ಸ್ಟೇಟ್ ಲೆವೆಲ್ಲಲ್ಲಿ ನಮ್ಮ ಗರಿಡೀಗೆ ಇವ್ನೇ ಕಣ್ರಲಾ ಕಳಸ ತೊಡ್ಸೋನು’
ಗರಡಿ ರಂಗಣ್ಣನ ಹೊಗಳಿಕೆಯಿಂದ ಆಸಿಫನ ಜಂಘಾಬಲ ಹರಳುಗಟ್ಟಿತು.
ಹನ್ನೆರಡು ವರ್ಷ ಸಾಧನೆ ಮಾಡಿದ ಸಿದ್ಧಣ್ಣ ಇದಿರಲ್ಲಿ ತೊಡೆ ತಟ್ಟುತ್ತಾ ದುರುಗುಡುತ್ತಿದ್ದ.
ಒಂದು ಕಾಲದ ಪಟ್ಟಾ ಶಿಷ್ಯ ಸಿದ್ಧನಿಂದ ಗುರುಗಳ ಗಮನವನ್ನು ತನ್ನತ್ತ ಸೆಳೆದಿದ್ದ ಆಸಿಫನ ದೇಹ ಮಿರಮಿರ ಮಿಂಚುತ್ತಿತ್ತು. ಹೊಟ್ಟೆ ಹೊತ್ತ ಸಾಧಕರೇ ಹೆಚ್ಚಾಗಿದ್ದ ಗರಡಿ ಮನೆಯಲ್ಲಿ ಕಟ್ಟುಮಸ್ತಾಗಿ ಮಟ್ಟಸ ಹೊಟ್ಟೆ ಕಾಪಿಟ್ಟುಕೊಂಡಿದ್ದ ಆಸಿಫನಿಗೆ ಗೆಳೆಯರಿಂದ ಸಲ್ಮಾನ್ ಖಾನ್ ಎಂಬ ಬಿರುದು ಸಿಕ್ಕಿತ್ತು. ಅವ ಸಾಧನೆಗೆ ತಪ್ಪದ ಶಿಸ್ತಿನ ಹುಡುಗ. ಗ್ಯಾರೇಜಲ್ಲಿ ಎಷ್ಟೇ ದಣಿದಿದ್ದರೂ ಸಮಯಕ್ಕೆ ಸರಿಯಾಗಿ ಗರಡಿ ಮನೆಗೆ ಹಾಜರ್. ಮುನ್ನೂರು ದಂಡ ಹೊಡೆದು, ಇನ್ನೂರು ಉಠ್ ಭೈಸ್ ಮಾಡಿ, ಬಟ್ಟಿ ಗಟ್ಟಿ ಮಾಡಲು ಅರ್ಧ ಗಂಟೆ ಸನಿಕೆಯಲ್ಲಿ ಗರಡಿ ಮನೆಯ ಮಣ್ಣನ್ನು ಗುಡ್ಡೆ ಮಾಡಿದನೆಂದರೆ ಮೈಯಿಂದ ಬಕಿಟ್ಟು ನೀರು ಸುರಿದಿರುತ್ತಿತ್ತು.
ಅಂದು ಆಸಿಫನಿಗೆ ಪರೀಕ್ಷೆಯ ಕಾಲ. ಅವತ್ತಿನ ಲಡತ್ತಿನಲ್ಲಿ ಸಿದ್ಧನ ಮಣ್ಣು ಮುಕ್ಕಿಸಿದರೇನೇ ಸ್ಟೇಟ್ ಲೆವೆಲ್ಲಿನ ಲಡತ್ತಿಗೆ ಬಡ್ತಿ. ಕಣ್ಣಲ್ಲಿ ರಕ್ತ ತುಂಬಿಕೊಂಡು, ನರನಾಡಿಗಳನ್ನೆಲ್ಲ ಭದ್ರ ಮಾಡಿ ನಿಂತಿದ್ದ ಆಸಿಫನ ಕಂಗಳಲ್ಲಿ ಆತ್ಮವಿಶ್ವಾಸ ಭರಪೂರ. ನೆರೆದ ಅಭಿಮಾನಿಗಳಿಂದ ಶಿಳ್ಳೆಯೋ ಶಿಳ್ಳೆ. ಆ ಲಡತ್ತಿಗೆ ಥೇಟ್ ಭಾರತ- ಪಾಕಿಸ್ತಾನ ಕ್ರಿಕೆಟ್ಟಿನ ಕಳೆ.
ಶುರುವಾಗಿ ಹತ್ತು ನಿಮಿಷ ಆಗಿರಬಹುದು. ಸಿದ್ಧ ಕೆಳಕ್ಕೆ ಬಿದ್ದ. ಅವನ ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ, ಅವನು ಉಸಿರಾಡಲು ಚಡಪಡಿಸಿ, ಸೋಲೊಪ್ಪಿಕೊಳ್ಳುವಂತೆ ಮಾಡಲು ಆಸಿಫ್ ಸಕಲ ಶಕ್ತಿಯನ್ನೂ ಭುಜಕ್ಕೆ ತಂದುಕೊಳ್ಳಬೇಕಾಯಿತು. ಸಿದ್ಧನ ಕೊಸರಾಟ ನಿಲ್ಲಿಸುವ ಹಾದಿಯಲ್ಲಿ ತನ್ನ ಕಣ್ಣು ಮುಚ್ಚಿದ ಆಸಿಫ್ ದಮ್ಮುಗಟ್ಟಿ ‘ಅಲ್ಲಾ... ಧಂ ದೇ’ ಅಂತ ಜೋರಾಗಿ ಪ್ರಾರ್ಥಿಸಿ, ಪಟ್ಟು ಹಾಕಿದ. ಅದುವರೆಗೆ ಕಣ್ಣು ಮಿಟುಕಿಸದೆ ಆಸಿಫನನ್ನೇ ನೋಡುತ್ತಿದ್ದ ಗರಡಿ ರಂಗಣ್ಣ ಥಟ್ಟನೆ ಎದ್ದು ಬಂದು ಅವನನ್ನು ಒದ್ದ.
‘ಯಾಕಣ್ಣ...ಏನಾಯ್ತು ?’ ಸಾಧನೆಯ ಹಾದಿಯಲ್ಲಿ ಬಿದ್ದ ಪೆಟ್ಟನ್ನು ಜೀರ್ಣಿಸಿಕೊಳ್ಳಲಾರದ ದನಿಯಲ್ಲಿ ಕೇಳಿದ ಆಸಿಫ್.
‘ನನ್ನೇ ಯಾಕೆ ಅಂತ ಕೇಳ್ತ್ಯೇನ್ಲಾ’ ಅಂತ ಹತ್ತಿರಕ್ಕೆ ನುಗ್ಗಿದ ರಂಗಣ್ಣ ಫಟ್ಟಂತ ಆಸಿಫನ ಲಂಗೋಟಿ ಕಿತ್ತರು. ಹಿಂದಕ್ಕೊಂದು ಮುಂದಕ್ಕೊಂದು ಕೈಯಿಟ್ಟು ನಿಂತ ಆಸಿಫ್ನ ಮುಖದಲ್ಲಿ ಸಿಟ್ಟು ಸಖತ್ ಜಮೆಯಾಗಿತ್ತು. ಸಾಕ್ಷಾತ್ ಗೊಮ್ಮಟ ಮೂರ್ತಿಯನ್ನು ಕೆಣಕಿದ ಪರಿಯಲ್ಲಿತ್ತು ಅವನ ನಿಲುವು.
‘ಇಷ್ಟ್ ದಿಸ ಇಲ್ಲದ್ ಅಲ್ಲಾ ಓ ಅಕ್ಬರು ಈ ಮಗಂಗೆ ಈಗ ಗೆಪ್ತೀಗೆ ಬಂದುಬಿಟ್ಟ’ ಅಂತ ರಂಗಣ್ಣ ಟವಲ್ಲು ಕೊಡವಿ ಸರಸರನೆ ಹೊರನಡೆದ.
ಈ ಕಥೆಯ ಕುರಿತು ನಿಮಗೆ ಏನನ್ನಿಸಿತು ?
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications