ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆ
- ರಮೇಶಚಂದ್ರ,
ಸುಮುಖ, ಇ3 ಐಐ459, ಹೆಚ್.ಪಿ.ನಗರ, ಬೆಮೆಲ್ ನಗರ, ಕೆ.ಜಿ. ಎಫ್- 563 115.
ಪತ್ರಿಕೆಯ ಮುಖಪುಟದಿ ದುರಂತಗಳ ಚಿತ್ರಸಾವು-ನೋವು-ಸಮರ-ಅಶಾಂತಿಗಳ ಸುತ್ತ
ಸುತ್ತುತ್ತಿದೆ ಜಗವು ತಲ್ಲಣಿಸಿದೆ ಯುಗವು
ಬವಣೆಗಳ ನಡುವೆ ಬದುಕು ಸಂಶಯದ ಹುತ್ತ
ನಗೆಮುಗುಳು ಮುಖಗಳಲಿ ಭಾಷಣವು ಪುಟಗಳಲಿ
ಹೊಗೆಯುಗುಳುವ ಬಂದೂಕು- ಬಾಂಬು ಸ್ಪೋಟಗಳಲಿ
ಮನುಜ- ಮನುಜರ ನಡುವೆ ತಂತ್ರಜ್ಞಾನದ ಪೋಟಿ
ತತ್ತರಿಸಿದೆ ಮೂಕ ಜನ ನೊಂದವರು ಕೋಟಿ
ಕಲಿತವರು ಹೆಚ್ಚಾಗಿ ಕಲಿತನವು ಹುಚ್ಚಾಗಿ
ಕಲಿತ ಬುದ್ಧಿಯ ಮದವು ಪ್ರಲಯಕದು ಸಜ್ಜಾಗಿ
ವಿನಾಶ- ವಿಸ್ಫೋಟ ವಿಕೃತಿಯ ಕೈದುಗಳ
ಸುರಿಸಿಹರು ನಿರಪರಾಧಿಗಳ ಸಮಾಧಿಗೆ ನೇರವಾಗಿ
ಇಷ್ಟೇನೆ ಬದುಕು ಬೇರಿಲ್ಲವೆ ನೈಜ ಸುಖವಿಲ್ಲವೆ
ಸಂತಸದ ಜೀವನಕೆ ಎಡೆ ಇಲ್ಲವೆ ಆ ನೆಲೆ ಇಲ್ಲವೆ
ಪ್ರಲಯ ತಾಂಡವದ ಕುಣಿತಕೆ ಕೊನೆಯಿಲ್ಲವೆ
ಮನುಜ ಜೀವನದ ನದಿಯಲ್ಲಿ ನಗೆಯಿಲ್ಲವೆ
ಇದೆ ಗೆಳೆಯಾ ಇದೆ ಜಗದಲಿನ್ನು ನನ್ನಿಯಿದೆ
ಹಾಲಾಹಲ ಹರಿದರೂ ಸುಧೆಯ ಸಿಂಧುವಿದೆ
ಮಾನವತೆಯ ಮಾತೆ ಅಮಿತ ಕರುಣಾಮಯಿ
ಸಹನತೆಯ ಮೇರು ನಮ್ಮ ಭೂಮಿ ತಾಯಿ
ಒಂದೊಂದೆ ಕಡ್ಡಿಯನು ಹೆಕ್ಕಿ ತಂದಿಹ ಹಕ್ಕಿ
ಗೂಡನ್ನು ಕಟ್ಟಿ ತಾ ನಲಿಯುತಿರಲು
ಬಿರುಗಾಳಿ ನೆರೆ ಬಂದು ಗೂಡುಗಳು ಚೂರಾಯ್ತು
ಗೂಡು ಹೆಣೆವುದ ಹಕ್ಕಿ ಬಿಟ್ಟಿತೇನು
ಒಂದೊಂದೆ ಹೂವಿಂದ ಮಕರಂದವನು ತಂದ
ಜೇನು ಗೂಡುಗಳದೋ ನೋಡಿ ಬರಿದಾಗಿದೆ
ಆದರೇನಾಯ್ತಣ್ಣ ಕೋಟಿ ಜೇನದು ಕೂಡಿ
ಮಧು ಸಂಗ್ರಹದಲ್ಲೆ ನಿಜ ಸುಖ ಕಂಡಿದೆ
ಕಟ್ಟೋಣ ಬನ್ನಿ ಗೆಳೆಯರೆ ಕಟ್ಟೋಣ ಬನ್ನಿ
ಬಿದ್ದ ಮಾನವತೆಯ ಇಟ್ಟಿಗೆಗಳ ಮೇಲೆ ಎತ್ತಿ
ಚೇಳಿಗೆ ಕುಟುಕುವುದೇ ಸೊಗಸು ಕೋಗಿಲೆಗೆ ಕುಕಿಲು
ಲಯದ ತಾಂಡವದಲ್ಲೂ ಇನಿದನಿಯನೆತ್ತಿ
ಮುಖಪುಟ / ಸಾಹಿತ್ಯ ಸೊಗಡು / ಕವನ ಸ್ಪರ್ಧೆ ಫಲಿತಾಂಶಗಳು











Click it and Unblock the Notifications