ಚಹಾ ಮಾರುವ 'ಚೇಟ'ನ ಬದುಕು ಬೆಂಗಳೂರಿನಲ್ಲಿ ಹಸನು!
ಬೆಂಗಳೂರಿನ ಬಾಣಸವಾಡಿಯ ರಾಮಮೂರ್ತಿ ನಗರದ ರಸ್ತೆಯ ಒಂದು ಕಾರ್ನರ್ ನಲ್ಲಿರುವ ಈತನ ಹೆಸರು ಇಲ್ಲಿ ಟೀ ಕುಡಿಯುವ ಶೇ. 99 ಭಾಗ ಜನರಿಗೆ ಗೊತ್ತಿಲ್ಲ.
ಕೇರಳ ಮೂಲದ ಈತ ಎಲ್ಲರಿಗೂ "ಚೇಟ" ಎಂದೇ ಫೇಮಸ್. ದೊಡ್ಡವರು ಚಿಕ್ಕವರು ಎಲ್ಲರೂ ಈತನನ್ನು ಚೇಟ ಎಂದು ಕರೆಯುತ್ತಾರೆ. ಪ್ರತಿ ಮುಖದ ಹಿಂದೆ ಒಂದು ಕಥೆ, ಒಂದು ಹೇಳಿಕೊಳ್ಳ ಬಹುದಾದ ಗೆಲುವು, ಸೋತರೆ ಅದಕ್ಕೆ ಕಾರಣ ಎಲ್ಲಾ ಇರುತ್ತೆ ಅಲ್ವಾ? ಚೇಟ ನಿನ್ನ ಹೆಸರೇನು ಎಂದು ನಾನು ಆತನ ಕೇಳುವ ಮೂಲಕ ಶುರುವಾದ ಕಥೆ ನೀವೇ ಓದಿ..
ಈತನ ಹೆಸರು ಮನೋಜ್, ಕೇರಳದ ಕಣ್ಣನ್ನೂರು ಮೂಲದವನು, ದುಬೈನಲ್ಲಿ ಮೂರು ವರ್ಷ ದುಡಿದು ಅಲ್ಲಿನ ಬದುಕಿಗಾಗಿ ಪಡುವ ಬವಣೆ, ಎಷ್ಟು ದುಡಿದರೂ ತಿಂಗಳಿಗೆ ಹತ್ತು ಸಾವಿರ ಉಳಿದರೆ ಅದೇ ಹೆಚ್ಚು ಎನ್ನುವಂತಹ ಪರಿಸ್ಥಿತಿ. (ಕಲ್ಲು ತುಂಬಿಸುವವ ಮ್ಯಾನೇಜರ್ ಆದ ಕಥೆ)
ಇವುಗಳಿಂದ ಬೇಸತ್ತು ದುಬೈ ಸಹವಾಸವೇ ಬೇಡವೆಂದು ಬೆಂಗಳೂರಿಗೆ ಬರುತ್ತಾನೆ. ಸ್ವಾವಲಂಬನೆಗೆ ಬೆಂಗಳೂರು ಹಾಗೂ "ಟೀ"ಯೇ ಸರಿ ಎಂದು ಎರಡು ವರ್ಷದ ಹಿಂದೆ ಸಣ್ಣ ಟೀ ಅಂಗಡಿ ಶುರು ಮಾಡುತ್ತಾನೆ.

ದಿನದಿಂದ ದಿನಕ್ಕೆ ಈತನ ವ್ಯಾಪಾರ ವೃದ್ದಿಯಾಗುತ್ತದೆ. ದಿನವೊಂದಕ್ಕೆ ಸರಾಸರಿ 400 ಟೀ ಮಾರುತ್ತಾನೆ ಹಾಗೂ ಅಷ್ಟೇ ಸಂಖ್ಯೆಯ ಸಿಗರೇಟು, ಗುಟ್ಕಾ ಕೂಡ ಖಾಲಿ ಆಗುತ್ತಂತೆ.
ಒಂದು ಟೀಯ ಬೆಲೆ ಆರು ರೂಪಾಯಿ, ಎಲ್ಲಾ ಸೇರಿ ದಿನಕ್ಕೆ ಏಳು ಸಾವಿರ ರುಪಾಯಿ ವಹಿವಾಟು. ತಿಂಗಳಿಗೆ ಲೆಕ್ಕಹಾಕಿದರೆ ಎರಡು ಲಕ್ಷ ಹತ್ತು ಸಾವಿರ. ಹಾಲು, ಟೀ ಪೌಡರ್, ಅದೂ ಇದೂ ಖರ್ಚು ಕಳೆದು ಉಳಿಯುವುದು ತಿಂಗಳಿಗೆ ಒಂದು ಲಕ್ಷ ರೂಪಾಯಿ!
ಬದುಕು ಹಸನಾಗಿದೆ ಎನ್ನುವ ಚೇಟ ಕನ್ನಡಿಗರು ಉದಾರಿಗಳು ಎರಡೇ ವರ್ಷದಲ್ಲಿ ತಮ್ಮವನನ್ನಾಗಿ ಮಾಡಿಕೊಂಡಿದ್ದಾರೆ ಎಂದು ಕನ್ನಡದಲ್ಲಿ ಹೇಳುವಷ್ಟು ಕನ್ನಡ ಕಲಿತಿದ್ದಾನೆ.
ನಿನ್ನ ಬಗ್ಗೆ ಎರಡು ಸಾಲು ಬರೆದು ಹಾಕುತ್ತೇನೆ ಎಂದರೆ ಮುಜುಗರದಿಂದ ನನ್ನನ್ನು ಇಲ್ಲದ ತಾಪತ್ರಯಕ್ಕೆ ಮಾತ್ರ ಸಿಕ್ಕಿಸಬೇಡಪ್ಪಾ ಎಂದು ಮನವಿ ಮಾಡುತ್ತಾನೆ.
ಇಲ್ಲಿ ನಾವು ಗಮನಿಸ ಬೇಕಾದ ಅಂಶವೇನಂದರೆ, ರಸ್ತೆಯಲ್ಲಿ ಹತ್ತಾರು ಟೀ ಶಾಪ್ ಗಳಿರುತ್ತವೆ, ಆದರೆ ಇವ್ಯಾವೂ ರಿಜಿಸ್ಟರ್ಡ್ ಆಗಿರುವುದಿಲ್ಲ, ಇವರು ನಡೆಸುವ ವಹಿವಾಟು ನಮ್ಮ ಜಿಡಿಪಿ ಅಳೆಯಲು ಬರುವುದೇ ಇಲ್ಲ.(ಶಂಕರ್ ಕಾರ್ಟೂನಿಸ್ಟ್ ಮತ್ತು ಸೊಗಸಾದ ಕಾಫಿ ಪರಿಮಳ)
ಜಗತ್ತಿನ ಉಳಿದ ರಾಷ್ಟ್ರಗಳು ಅರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುವಾಗ ಭಾರತ ನಡುಗದಂತೆ ಇರಲು ಸದ್ದಿಲ್ಲದ ತನ್ನ ಕಾಯಕ ಮಾಡುವ ಇಂತಹ ಜನರ ಕೊಡುಗೆ ಅಪಾರ.
ಷೇರು ಮಾರುಕಟ್ಟೆಯ ಹಾಗೂ ಜಗತ್ತಿನ ಅರ್ಥಿಕ ತಲ್ಲಣಗಳು ಶುರುವಾಗುವುದು ಹೀಗಾದರೆ , ಹಾಗಾದರೆ ಎನ್ನುವ ಭಯದಿಂದ, ಹೂಡಿಕೆದಾರರ ಕಲೆಕ್ಟಿವ್ ಸೈಕಾಲಜಿಯಿಂದ, ಇವೆಲ್ಲವ ಮೀರಿ ತಮ್ಮ ಕೆಲಸ ತಾವು ಮಾಡುತ್ತ ಹೋಗುವ ಇಂತ ಕಾಯಕ ವೀರರಿಗೆ ದೊಡ್ಡ ನಮಸ್ಕಾರ.












Click it and Unblock the Notifications