ಭ್ರಮೆ ತಂಡದ ತಬಲಾ ಪಟು ಸಂದೀಪ್ ರವಿಕುಮಾರ್
ತಾಳಬದ್ಧವಾಗಿ ಹರಿಯುವ ರಕ್ತ, ಜೀವಾಳವಾಗಿರುವ ಗಾಳಿ, ಸುತ್ತಲೂ ಹರಿದಾಡುತ್ತಿರುವ ಅವ್ಯಕ್ತ ಶಕ್ತಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿರುತ್ತವೆ. ಇವುಗಳಂತೆ ಪರ್ಕ್ಯೂಷನ್ ಪರಿಣಿತ, ತಬಲಾ ಪಟುವಾಗಿರುವ ಸಂದೀಪ್ ರವಿಕುಮಾರ್ ಕೂಡ 'ಭ್ರಮೆ' ತಂಡದಲ್ಲಿ ರಕ್ತ, ಗಾಳಿ, ಶಕ್ತಿಯನ್ನು ತುಂಬಿದ್ದಾರೆ ಎಂದರೆ ತಪ್ಪಾಗಲಾರದು.
ಸಂಗೀತವೆಂಬುದು ಸಂದೀಪ್ ಅವರಿಗೆ ಬಾಲ್ಯದಿಂದಲೇ ಬಳುವಳಿಯಾಗಿ ಬಂದಿದೆ. ತಂದೆ ರವಿಕುಮಾರ್ ಮತ್ತು ತಾಯಿ ಪದ್ಮಾ ಅವರ ಪ್ರೋತ್ಸಾಹದಿಂದ ಮೈಸೂರಿನ ರಾಮಕೃಷ್ಣ ವಿದ್ಯಾಶಾಲಾದಲ್ಲಿ ಸಂಗೀತವನ್ನು ಅವರು ಆರಂಭಿಸಿದರು. ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ ಪಾರಂಗತವಾಗಿರುವ ಸಂದೀಪ್ ಹಲವಾರು ಬೃಹತ್ ವೇದಿಕೆಗಳಲ್ಲಿ ಪ್ರಾವೀಣ್ಯ ಮೆರೆದಿದ್ದಾರೆ.
ಬೆಂಗಳೂರಿನ ಗುಂಡಾ ಶಾಸ್ತ್ರೀಯವರ ಬಳಿ ತಬಲಾ ಕಲಿಯಲು ಸಂದೀಪ್ ಆರಂಭಿಸಿದರು. ನಂತರ ಮೈಸೂರಿನ ಪಂಡಿತ್ ರಮೇಶ್ ಧನ್ನೂರ್ ಅವರ ಬಳಿ ತಬಲಾದಲ್ಲಿ ಉನ್ನತ ವ್ಯಾಸಂಗ ಮಾಡಿದರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು, ಎಲೆಕ್ಟ್ರಿಕ್ ಲೈಮ್ ಟೆಕ್ನಾಲಜಿ ಕಂಪನಿಯ ಒಡೆಯರಾಗಿದ್ದಾರೆ.

ಶ್ರದ್ಧಾ, ಮೋಜಿನ ಸೀಮೆ ಆಚೆ ಒಂದೂರು, ಮರಿಯಮ್ಮನ ಮೂರನೇ ಮದುವೆ ಮತ್ತಿತರ ಕನ್ನಡ ನಾಟಕಗಳಲ್ಲಿಯೂ ಸಂದೀಪ್ ತಬಲಾ ನುಡಿಸಿ ಶಭಾಸ್ಗಿರಿ ಪಡೆದಿದ್ದಾರೆ. ಬೆಂಗಳೂರಿನ ಪ್ರಸಿದ್ಧ ಪ್ರಭಾತ್ ಕಲಾವಿದರು ಕಲಾ ಸಂಸ್ಥೆಯ ಸದಸ್ಯರೂ ಆಗಿದ್ದಾರೆ.
ಕರ್ನಾಟಕದ ಖ್ಯಾತ ತಬಲಾ ಪಟುಗಳಾದ ಪಂಡಿತ್ ವಿಎಂ ನಾಗರಾಜ್, ಉಸ್ತಾದ್ ಫಯಾಜ್ ಖಾನ್, ವಿದ್ಯಾಭೂಷಣ, ವಿದ್ವಾನ್ ಗುರುರಾಜ್, ಶ್ರೀಮತಿ ಮಧುರಾ ರವಿಕುಮಾರ್, ಹುಸೇನ್ ಸಾಬ್, ಶಂಕರ್ ಶಾನುಭೋಗ್ ಅಂಥವರೊಂದಿಗೆ ತಬಲಾ ನುಡಿಸಿದ ಹೆಗ್ಗಳಿಕೆ ಸಂದೀಪ್ ರವಿಕುಮಾರ್ ಅವರದು. [ಸಂದೀಪ್ ರವಿಕುಮಾರ್ ಫೇಸ್ ಬುಕ್ ಪುಟ]
ಭ್ರಮೆ ಬಗ್ಗೆ ನಟಿ ಗಿರಿಜಾ ಲೋಕೇಶ್ ಮೆಚ್ಚುಗೆ ಮಾತು












Click it and Unblock the Notifications