ಪ್ರೊ.ಕೆ.ವೆಂಕಟಗಿರಿಗೌಡ : ಭೈರಾಪಟ್ಣದಿಂದ ಬ್ರಿಟನ್ನಿನವರೆಗೆ
ಕಠೋರ ನಡೆ-ನುಡಿಗೆ ಹೆಸರಾಗಿದ್ದ ಪ್ರೊ. ಕೆ. ವೆಂಕಟಗಿರಿಗೌಡರ ಅಂತಿಮ ಆಸೆ ಕೊನೆಗೂ ನೆರವೇರಲೇ ಇಲ್ಲ. ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಮೂರು ಪುಸ್ತಕಗಳನ್ನು ಬರೆದು, ಅವರ ಜನ್ಮ ಜಾಲಾಡಿದ್ದ ಪ್ರೊಫೆಸರ್, ಮಾಜಿ ಮುಖ್ಯಮಂತ್ರಿ ಕೃಷ್ಣ ವಿರುದ್ಧ ಬರೆಯುತ್ತಿದ್ದ ಪುಸ್ತಕ ಮುಕ್ತಾಯದ ಹಂತದಲ್ಲಿತ್ತು. ಶೇಕಡಾ 90 ರಷ್ಟು ಪುಸ್ತಕದ ಕೆಲಸ ಮುಗಿದಿತ್ತು. ಪುಸ್ತಕಕ್ಕೆ ಕೃಷ್ಣ- ದಿ ಸೋಬರ್ ಚೀಟರ್(ನಯವಂಚಕ ಕೃಷ್ಣ) ಎಂಬ ಹೆಸರನ್ನೂ ಇಟ್ಟಿದ್ದರು. ಉಹುಂ, ಅವರ ಪ್ರಯತ್ನ ಪೂರ್ಣವಾಗಲಿಲ್ಲ . ವೆಂಕಟಗಿರಿಗೌಡ ಇನ್ನಿಲ್ಲ .
ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನಪಟ್ಟಣದ ಭೈರಾಪಟ್ಟಣದಲ್ಲಿ 1923ರಲ್ಲಿ ಜನಿಸಿದ ವೆಂಕಟಗಿರಿಗೌಡರು ಮೈಸೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಗಳಿಸಿ, ದೇಶ ವಿದೇಶಗಳಲ್ಲಿ ಹಲವು ಪದವಿಗಳನ್ನು ಪಡೆದಿದ್ದರು.
ಮೈಸೂರು ಮಹಾರಾಜ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದಾಗ 1949 ರಲ್ಲಿ ಎಸ್.ಎಂ. ಕೃಷ್ಣ ಬಿ.ಎ. ಪದವಿ ಕಲಿಯಲು ಅಲ್ಲಿಗೆ ಬಂದದ್ದು, 1968ರಲ್ಲಿ ಪ್ರಜಾ ಸೋಷಲಿಸ್ಟ್ ಪಾರ್ಟಿ ಸಂಸದರಾದ ಕೃಷ್ಣ ಬಜೆಟ್ ಮೇಲಿನ ಚರ್ಚೆ ಭಾಷಣವನ್ನು ತಮ್ಮಿಂದ ಬರೆಸಿಕೊಂಡು ಹೋಗಿ ಸಂಸತ್ತಿನಲ್ಲಿ ವಾಚಿಸಿದ್ದು, ಇಂದಿರಾ ಗಾಂಧಿ ಅದಕ್ಕೆ ತಲೆದೂಗಿದ್ದು, ನಂತರ ಕೃಷ್ಣ ಅವರನ್ನು ಕರೆದು ಕಾಂಗ್ರೆಸ್ಗೆ ಸೇರಿಸಿಕೊಂಡಿದ್ದು- ಈ ಎಲ್ಲವೂ ವೆಂಕಟಗಿರಿಗೌಡ ನೆನಪಿಟ್ಟುಕೊಂಡಿದ್ದರು.
ಪಿಎಸ್ಪಿ ತೊರೆದು ಕಾಂಗ್ರೆಸ್ ಸೇರಿದ ಕೃಷ್ಣ ಅರಸು ಮಂತ್ರಿಮಂಡಲದಲ್ಲಿ ಸ್ಥಾನವನ್ನೂ ಗಿಟ್ಟಿಸಿದರು. 1975ರ ತುರ್ತು ಪರಿಸ್ಥಿತಿ ನಂತರ ಮೊರಾರ್ಜಿ ಸರಕಾರ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಇಬ್ಭಾಗ, ಆಗ ಕೃಷ್ಣ ರೆಡ್ಡಿ ಕಾಂಗ್ರೆಸ್ ಸೇರಿದರು. ಐದಾರು ತಿಂಗಳಲ್ಲೇ ಪಕ್ಷ ಸತ್ತು ಹೋಯಿತು. ನಂತರ ಮತ್ತೆ ಇಂದಿರಾ ಜತೆ ಸೇರಿ ಹಣಕಾಸು ಸಚಿವರೂ ಆದರು. ಆಗೆಲ್ಲ ಕೃಷ್ಣಗೆ ಭಾಷಣ ಬರೆದುಕೊಡುತ್ತಿದ್ದುದು ವೆಂಕಟಗಿರಿ ಗೌಡರೇ.
ರಾಜಕೀಯವಾಗಿ ಬೆಳೆಯುತ್ತಾ ಹೋದ ಕೃಷ್ಣ ಅದೇ ವೇಳೆಗೆ ವೆಂಕಟಗಿರಿ ಗೌಡರನ್ನು ಕಡೆಗಣಿಸುತ್ತಾ ಹೋದರು. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. 1972 ರಲ್ಲಿ ಮೈಸೂರು ವಿಶ್ವವಿದ್ಯಾಲಯ ಕುಲಪತಿ ನೇಮಕ ಸಮಿತಿ ಶಿಫಾರಸು ಮಾಡಿದ ಮೂವರ ಹೆಸರಲ್ಲಿ ಮೊದಲನೆಯದು ಗೌಡರದು. ಆದರೆ ಕೃಷ್ಣ ಅನುಮೋದನೆ ಆಗದಿರುವಂತೆ ನೋಡಿಕೊಂಡರು. 1976 ರಲ್ಲೂ ಇದೇ ಕತೆ ಪುನರಾವರ್ತನೆ. ಮದ್ದೂರಿನ ಕೃಷ್ಣಗೆ ಪಕ್ಕದ ಚನ್ನಪಟ್ಟಣ ತಾಲ್ಲೂಕಿನ ಭೈರಾಪಟ್ಟಣದ ವೆಂಕಟಗಿರಿಗೌಡರು ಬೆಳೆಯುವುದು ಬೇಕಿರಲಿಲ್ಲ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಮನಮೋಹನ್ಸಿಂಗ್ ಮೂಲಕ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಟಿಕೆಟ್ ಪಡೆದ ವೆಂಕಟಗಿರಿಗೌಡರ ಸೋಲಿಗೆ ಕೃಷ್ಣ ಮಾಡಿದ ಅಪಪ್ರಚಾರವೇ ಕಾರಣವಂತೆ.
ಇದಾದ ನಂತರ ಹಲವು ಸಂದರ್ಭಗಳಲ್ಲಿ ಸಂಧಾನ ಮಾಡಿಕೊಂಡ ಕೃಷ್ಣ , ಪ್ರತಿಬಾರಿಯೂ ಗೌಡರಿಗೆ ಟಾಂಗ್ ಕೊಡುತ್ತಲೇ ಹೋದರಂತೆ. ರಾಜ್ಕುಮಾರ್ ಅಪಹರಣ ಸಂದರ್ಭದಲ್ಲಿ ಕಾಂಗ್ರೆಸ್ನ ಒಂದು ಗುಂಪು ಕೃಷ್ಣ ಪದಚ್ಯುತಿಗೆ ಹುನ್ನಾರ ನಡೆಸಿತ್ತು. ಆಗ ಕೃಷ್ಣ ಮನವಿ ಮೇರೆಗೆ ವೆಂಕಟಗಿರಿಗೌಡರು ಮನಮೋಹನ್ಸಿಂಗ್ ಮೂಲಕ ಸೋನಿಯಾ ಗಾಂಧಿ ಮೇಲೆ ಪ್ರಭಾವ ಬೀರಿ ಕೃಷ್ಣ ಪದಚ್ಯುತಿ ತಪ್ಪಿಸಿದರಂತೆ. ಆಗ ಕೃಷ್ಣ ಗೌಡರಿಗೆ ಧನ್ಯವಾದ ಪತ್ರ ಬರೆದಿದ್ದರಂತೆ.
ಆದರೆ 2000 ಇಸವಿಯಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೇನೆ ಎಂದು ಹೇಳಿದ್ದ ಕೃಷ್ಣ ಮತ್ತೆ ಕೈಕೊಟ್ಟರು. ಆಗ ಕೃಷ್ಣಮೂರ್ತಿ, ಬಿಂಬಾರಾಯ್ಕರ್, ರೆಹಮಾನ್ಖಾನ್ ರಾಜ್ಯಸಭೆಗೆ ಹೋದರು. ಮನಮೋಹನ್ಸಿಂಗ್ ಕೂಡ ಕೃಷ್ಣ ಕಡೆ ಬೆರಳು ತೋರಿ ಕೈಬಿಟ್ಟರಂತೆ. ಎಂ.ವಿ. ರಾಜಶೇಖರನ್, ಪ್ರೇಮಾ ಕಾರ್ಯಪ್ಪ, ಜನಾರ್ದನ ಪೂಜಾರಿ ರಾಜ್ಯಸಭೆಗೆ ಹೋದಾಗಲೂ ಇದೇ ರೀತಿ ಗೌಡರಿಗೆ ನಂಬಿಸಿ ಕೈಕೊಡಲಾಯಿತು. ಕಳೆದ ಚುನವಣೆಯಲ್ಲಿ ಕನಕಪುರ ಲೋಕಸಭೆಗೆ ಟಿಕೆಟ್ ನೀಡುವುದಾಗಿ ಹೇಳಿ ಕೊನೆಗೆ ಕಾಂಗ್ರೆಸ್ ಕೈಕೊಟ್ಟಿತು.
ಕೃಷ್ಣ ಅವರಿಗೆ ಬೋಧನೆ ಮಾಡಿದ ದಿನದಿಂದ ಈವರೆಗೂ ತಮಗೆ ಅವರಿಂದ ಆಗಿರುವ ಅನ್ಯಾಯ, ಚಾಮರಾಜಪೇಟೆ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸಕಲ ಆಸ್ತಿ-ಪಾಸ್ತಿ 3.50 ಕೋಟಿ ರೂ. ಎಂದು ಅವರು ನೀಡಿರುವ ಸುಳ್ಳುಲೆಕ್ಕ , ಸಾವಿರಾರು ಕೋಟಿ ರೂ.ಗೂ ಅಧಿಕ ಆಸ್ತಿಗೆ ಕೃಷ್ಣ ಒಡೆಯರು ಎಂಬ ಅಂಶಗಳನ್ನು ಪುಸ್ತಕದಲ್ಲಿ ದಾಖಲಿಸಿರುವುದಾಗಿ ವೆಂಕಟಗಿರಿಗೌಡ ಹೇಳಿದ್ದರು.
ಅರ್ಥಶಾಸ್ತ್ರ ಕುರಿತು ಹದಿನೈದು ಪುಸ್ತಕಗಳನ್ನು ಬರೆದಿರುವ ವೆಂಕಟಗಿರಿ ಗೌಡರು, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಎಚ್.ಡಿ.ದೇವೇಗೌಡ-ದಿ ಕಿಂಗ್ ಆಫ್ ಕರಪ್ಷನ್, ದಿ ಡೀಪರ್ ಯು ಡಿಗ್, ಲಾರ್ಜರ್ ಯು ಹೌಲ್ ಹಾಗೂ ಬ್ಲಾಕ್ ಅಸೆಟ್ಸ್ ಆಫ್ ದ ಮ್ಯಾನ್ ಇನ್ ವೈಟ್ ಎಂಬ ಮೂರು ಪುಸ್ತಕಗಳನ್ನು ಬರೆದಿದ್ದಾರೆ.
ಅಧಿಕಾರಸ್ಥ ರಾಜಕಾರಣಿಗಳ ಭ್ರಷ್ಟಾಚಾರದ ಬಗ್ಗೆ ಒಂದು ಕಣ್ಣಿಟ್ಟಿದ್ದ ವೆಂಕಟಗಿರಿಗೌಡ, ಸಂಘಟಕರಾಗಿಯೂ ಪ್ರಸಿದ್ಧರು. ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ವೆಂಕಟಗಿರಿಗೌಡ ಎರಡು ಬಾರಿ ಆಯ್ಕೆಯಾಗಿದ್ದರು.
ವೆಂಕಟಗಿರಿಗೌಡ ಇನ್ನಿಲ್ಲ . ರಾಜ್ಯದ ಮೇರು ಪ್ರತಿಭೆಗಳಲ್ಲಿ ಒಬ್ಬರಾದ ಅವರ ವಿಚಾರಗಳಿಗೆ ಸಾವಿಲ್ಲ .
(ಸ್ನೇಹಸೇತು : ವಿಜಯ ಕರ್ನಾಟಕ)












Click it and Unblock the Notifications