ರುಚಿಯಷ್ಟೇ ಶುಚಿಯೂ ಮುಖ್ಯ ಎಂದು ಸಾರಿದ ಎಚ್. ಸೀತಾರಾಂ ರಾವ್
ದಕ್ಷಿಣ ಕನ್ನಡ ಜಿಲ್ಲೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟದ್ದು ಪ್ರಮುಖವಾಗಿ ಎರಡು ಕ್ಷೇತ್ರ. ಒಂದು ಬ್ಯಾಂಕಿಂಗ್ ಮತ್ತೊಂದು ಹೋಟೆಲ್ ಉದ್ಯಮ. ಈ ಉದ್ಯಮದ ಹಲವಾರು ಮಹನೀಯರ ಪಟ್ಟಿಯಲ್ಲಿ ಸ್ಥಾನ ಪಡೆದವರಲ್ಲಿ ಎಚ್. ಸೀತಾರಾಮ್ ರಾವ್ ಅವರೂ ಒಬ್ಬರು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹುದ್ರಾಳಿ (ಕೋಟೇಶ್ವರ) ಯಲ್ಲಿ 24-8-1930ರಲ್ಲಿ ಜನಿಸಿದ ರಾಯರು 1958ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾರ್ಗಲ್ನಲ್ಲಿ ಮೊದಲು ಹೊಟೆಲ್ ಆರಂಭಿಸಿದರು. ಸತತ ಶ್ರಮದಿಂದ ಮೇಲೆ ಬಂದ ರಾಯರು ಬೆಂಗಳೂರಿನ ವಿಶ್ವೇಶ್ವರಪುರ ಹಾಗೂ ಮಲ್ಲೇಶ್ವರದಲ್ಲಿ ಸ್ಥಾಪಿಸಿದ ಜನತಾ ಹೋಟೆಲ್ ಬಸವನಗುಡಿ ಹಾಗೂ ಮಲ್ಲೇಶ್ವರ ಜನರಿಗೆ ಬಲು ಅಚ್ಚು ಮೆಚ್ಚು.
ಬೆಂಗಳೂರಿನ ಜನಾರ್ದನ ಲಾಜ್, ಹುಬ್ಬಳ್ಳಿಯ ಮಯೂರಾ ಲಾಜ್ ಹೀಗೆ ಹಲವು ಜನಪ್ರಿಯ ಹೊಟೆಲ್ಗಳನ್ನು ಕಟ್ಟಿದ ಕೀರ್ತಿ ರಾಯರದು. ಹೊಟೆಲ್ನಲ್ಲಿ ರುಚಿಯಷ್ಟೇ ಶುಚಿಯೂ ಮುಖ್ಯ ಎಂದು ಪ್ರತಿಪಾದಿಸಿದವರಲ್ಲಿ ಸೀತಾರಾಮ್ ರಾಯರೂ ಒಬ್ಬರು.
ಕೇವಲ ವ್ಯಾಪಾರ ವಹಿವಾಟಿಗಷ್ಟೇ ಸೀಮಿತವಾಗದ ಇವರು ಕೃಷ್ಣವಾದಿರಾಜ ಮಂದಿರ, ಗಿರಿನಗರ ನಂದಗೋಕುಲ ಸಭಾಂಗಣ, ಕೋಟೇಶ್ವರದ ವಾದಿರಾಜ ಕಲ್ಯಾಣ ಮಂಟಪದ ಟ್ರಸ್ಟಿಗಳೂ ಆಗಿದ್ದಾರೆ. ಕೋಟೇಶ್ವರ ಅಭಿವೃದ್ಧಿ ಸಮಿತಿ ಸದಸ್ಯರಾಗಿ, ಸೋದೆ ಮಠದ ಶ್ರೀಗಳ 60ನೇ ವರ್ಧಂತ್ಯುತ್ಸವ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಹೊಟೆಲ್ ಸಂಘಗಳಿಂದ ಸನ್ಮಾನಿತರಾಗಿರುವ ಎಚ್. ಸೀತಾರಾಮ ರಾವ್ ಅವರಿಗೆ ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆ 2001ನೇ ಸಾಲಿನ ಭಾರ್ಗವ ಪ್ರಶಸ್ತಿ (ಹೊಟೆಲ್ ಉದ್ಯಮ ವಿಭಾಗ) ನೀಡಿ ಮನ್ನಣೆ ಮಾಡಿದೆ.
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications