ಖಡಕ್ ಕೆ .ಜೈರಾಜ್
ಪ್ರಸ್ತುತ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಇಓ ಆಗಿರುವ ಹಿರಿಯ ಐಎಎಸ್ ಅಧಿಕಾರಿ ಕೆ. ಜೈರಾಜ್ ದಕ್ಷತೆಗೆ ಹೆಸರಾದವರು. ಸ್ಟ್ರಿಕ್ಟ್ ಎಂಬ ಪದ ಅವರ ಹೆಸರಿಗೇ ಅಂಟಿಕೊಂಡಿದೆ. ಈ ಹುದ್ದೆಗೆ ಬರುವ ಹೊತ್ತಿಗೆ ಜೈರಾಜ್ 12ಕ್ಕೂ ಹೆಚ್ಚು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು.
ಕರ್ನಾಟಕ ವಿದ್ಯುತ್ ನಿಗಮದ ಅಧ್ಯಕ್ಷರಾಗಿ, ರಾಯಚೂರು ಶಾಖೋತ್ಪನ್ನ ಘಟಕದ ವ್ಯವಸ್ಥಿತ ಕಾರ್ಯನಿರ್ವಹಣೆಯ ಹಾದಿಯಲ್ಲಿ ಐದು ವರ್ಷಗಳಿಗೂ ಹೆಚ್ಚುಕಾಲ ದುಡಿದ ಜೈರಾಜ್ ವಿದ್ಯುತ್ ಘಟಕದಿಂದ ಬೆಂಗಳೂರು ಮಹಾನಗರ ಪಾಲಿಕೆಗೆ ಬಂದರು.
ಪಾಲಿಕೆಯಲ್ಲಿದ್ದ ಅಲ್ಪಾವಧಿಯಲ್ಲಿ ಹಲವು ಸುಧಾರಣೆ ತಂದ ಜೈರಾಜ್ ನಿತ್ಯಸುದ್ದಿಯಾಗುತ್ತಿದ್ದರು. ಇದುವೇ ಇವರನ್ನು ಪಾಲಿಕೆಯಿಂದ ಬಸ್(ಸಾರಿಗೆ ಸಂಸ್ಥೆ) ಏರುವಂತೆ ಮಾಡಿದ್ದು. ಹಾಲಿ ಏರೋಪ್ಲೈನ್ ಏರಿದ್ದಾರೆ (ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)
ಹಾರ್ವರ್ಡ್ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಓದಿ ಎಂಬಿಎ ಪದವಿ ಪಡೆದಿರುವ ಜೈರಾಜ್, ಭಾರತೀಯ ಆಡಳಿತ ಸೇವೆಗೆ ಬಂದಿದ್ದು 1983ರಲ್ಲಿ. ಬೆಂಗಳೂರು ಮಹಾನಗರ ಪಾಲಿಕೆಯ ಟಾಸ್ಕ್ ಫೋರ್ಸ್ ಕಾರ್ಯದರ್ಶಿಯಾಗಿ, ಮೈಗಳ್ಳರಿಂದಲೂ ಕೆಲಸ ತೆಗೆಸಿದ ಈ ಅಧಿಕಾರಿ ಕಳಪೆ ಕಾಮಗಾರಿ ಕೈಗೊಳ್ಳುವ ಕಂಟ್ರಾಕ್ಟರ್ಗಳಿಗೆ ಸಿಂಹ ಸ್ವಪ್ನರಾಗಿದ್ದರು.
ಪೊಲೀಸ್ ಅಧಿಕಾರಿ ಸಾಂಗ್ಲಿಯಾನರಿಗೂ ಹೀಗೇ ಆಗಿತ್ತು. ಅವರು ನಾಗರಿಕ ಸರಬರಾಜು ಇಲಾಖೆಯಲ್ಲಿದ್ದಾಗ, ಕಳ್ಳದಾಸ್ತಾನು ಮಾಡುತ್ತಿದ್ದವರನ್ನೆಲ್ಲಾ ಬಗ್ಗು ಬಡಿದರು. ಸರಕಾರದ ಮೇಲೆ ಒತ್ತಡ ಹೆಚ್ಚಾಯ್ತು, ಸಾಂಗ್ಲಿಯಾನಾರ ಎತ್ತಂಗಡಿ ಆಯ್ತು. ಅಲ್ಲಿಂದ ಟ್ರಾಫಿಕ್ಗೆ.. ಟ್ರಾಫಿಕ್ನಲ್ಲೂ ಸಾಂಗ್ಲಿಯಾನ ತಮ್ಮ ಪ್ರತಾಪ ತೋರಿದರು ಮತ್ತೆ ಟ್ರಾನ್ಸ್ವರ್.
ಈಗ ಒಂದು ಸುತ್ತು ಹಾಕಿ ಸಾಂಗ್ಲಿಯಾನಾ ಅವರು, ಬೆಂಗಳೂರು ನಗರ ಆಯುಕ್ತರಾಗಿ ಬಂದಿದ್ದಾರೆ. ಇದೆಲ್ಲಾ ಕಾಲದ ಮಹಿಮೆ. ಚಕ್ರ ಒಂದು ಸುತ್ತು ಹಾಕುವ ಹೊತ್ತಿಗೆ ಏನೆಲ್ಲಾ ಆಗಬಹುದು. ಮುಂದೆ ಮತ್ತೆ ಜೈರಾಜ್ ಪಾಲಿಕೆಗೆ ಬಂದರೂ ಅಚ್ಚರಿಯಿಲ್ಲ. ಅಂದಹಾಗೆ ಜೈರಾಜ್ ಬೆಂಗಳೂರು ಮಹಾನಗರ ಪಾಲಿಕೆ ಪ್ರವೇಶಿಸಿದ ಮೇಲೆ ಪಾಲಿಕೆಗೆ ಕೊಂಚ ಗೌರವ ಬಂದಿತ್ತು. ಸ್ವಯಂ ಘೋಷಿತ ಆಸ್ತಿ ತೆರಿಗೆಗೆ ಹೊಸ ಆಯಾಮವೇ ಸಿಕ್ಕಿತು. ತೂತು ಬಿದ್ದು ಕಂದಕಗಳಾಗಿದ್ದ ಬೆಂಗಳೂರಿನ ರಸ್ತೆಗಳಿಗೆ ಮತ್ತೆ ಕಳೆ ಬಂತು. ನೀರು ಹಾಗೂ ಒಳಚರಂಡಿ ವ್ಯವಸ್ಥೆ ಉತ್ತಮ ಸ್ಥಿತಿಗೆ ಬಂತು.
ಇಷ್ಟೆಲ್ಲಾ ಆಗುವ ಹೊತ್ತಿಗೆ ಆರು ತಿಂಗಳಾಗಿತ್ತು. ಆಯುಕ್ತರ ಎತ್ತಂಗಡಿಯೂ ಆಯ್ತು. ಜೈರಾಜ್ ಈವರೆಗೆ ಸಾರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ ವಿದ್ಯುತ್ ನಿಗಮ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹೆಚ್ಚು ಸ್ಟ್ರಿಕ್ಟ್ ಆಗಿರುವ ಅಧಿಕಾರಿಗಳು ಬಹಳ ದಿನ ಒಂದೇ ಹುದ್ದೇಲಿ ಇರಲ್ಲ. ಇರುತ್ತೇವೆ ಎಂದರು ಅದಕ್ಕೆ ರಾಜಕಾರಣಿಗಳು ಬಿಡಲ್ಲ... ಇವರ ಕಾಲದಲ್ಲಿ ಅಟ್ಲೀಸ್ಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದರೂ ಕಂಪ್ಲೀಟ್ ಆಗ್ಲಿ ಬಿಡಿ.
ಮುಖಪುಟ / ಸಾಹಿತ್ಯ ಸೊಗಡು