ಇರುವುದೊಂದೆ ಭೂಮಿ : ಇರುವುದೊಂದೆ ಕರ್ನಾಟಕ

ಬಾಳೆಎಲೆ ಊಟ ಯಾರಿಗೆ ಇಷ್ಟವಾಗುವುದಿಲ್ಲ? ಬಲಮೂಲೆಯಲ್ಲಿ ಶಾವಿಗೆ ಪಾಯಸ, ಮೇಲ್ತುದಿಯಲ್ಲಿ ಎರಡು ಮೂರು ಬಗೆಯ ಪಲ್ಯ, ಅವುಗಳ ಪಕ್ಕದಲ್ಲಿ ಕೋಸಂಬರಿ, ಮಾಡಿದ್ದರೆ ಶೇಂಗಾ ಚಟ್ನಿ, ಎಡಮೂಲೆಯಲ್ಲಿರುವ ಉಪ್ಪಿನ ಕೆಳಗೆ ಉಪ್ಪಿನಕಾಯಿ, ಅದರ ಮೇಲೆ ಬಿದ್ದುಕೊಂಡಿರುವ ಹಪ್ಪಳ, ಪಕ್ಕದಲ್ಲೆರಡು ಅಂಬೋಡೆ, ಪಲ್ಯದ ಕೆಳಗೆ ಅನಾನಸು ಗೊಜ್ಜು, ಅದರ ಕೆಳಗೆ ಹರಡಿಕೊಂಡಿರುವ ಬಿಸಿಬಿಸಿ ಅನ್ನ, ಮೇಲೆ ತುಪ್ಪ ಮತ್ತು ತೊವ್ವೆ. ಅನ್ನದ ಎಡಬದಿಯಲ್ಲಿ ತುಸು ಕೆಳಗೆ ಬಿದ್ದುಕೊಂಡಿರುವ ಚಿತ್ರಾನ್ನ. ಆಹಾ, ನೆನೆಸಿಕೊಂಡರೆ ಹೊಟ್ಟೆ ತುಂಬಿದವರ ಬಾಯಲ್ಲಿ ಕೂಡ ನೀರು ಬರಬೇಕು.
ಇಷ್ಟಿದ್ದರೆ ಸರಿ. ಆದರೆ, ಎಲೆ ತುಂಬ ಚಿತ್ರಾನ್ನವೇ ಹರಡಿಕೊಂಡಿದ್ದರೆ? ಅಥವಾ ಮೃಷ್ಟಾನ್ನವೂ ಚಿತ್ರಾನ್ನದಂತೆ ಗೋಚರಿಸುತ್ತಿದ್ದರೆ? ಊಹಿಸಿಕೊಳ್ಳಿ. ಪತ್ರಕರ್ತ ಹಳೇಬೀಡು ಅಭಿಷೇಕ್ ಅವರ ಕಲ್ಪನೆಯ ಮೂಸೆಯಡಿ ಮೂಡಿಬಂದಿರುವ ಈ ಚಿತ್ರ ಕರ್ನಾಟಕದ ವಸ್ತುಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಹಾಗೆಯೆ, ಒಳಗೊಳಗಿನ ಜಗಳಗಳನ್ನು ಬಗೆಹರಿಸಿಕೊಳ್ಳದಿದ್ದರೆ ಮೃಷ್ಟಾನ್ನ ಭೋಜನ ಮಾಡುವ ಮೊದಲೇ ಬಾಳೆಎಲೆ ಹರಿದುಹಂಚಿಹೋದಂತೆ ಕನ್ನಡಿಗರ ಸ್ಥಿತಿ ಚಿಂದಿ ಚಿತ್ರಾನ್ನ ಆಗುತ್ತದೆ ಎಂದು ಕನ್ನಡಿಗರಿಗೆ ಎಚ್ಚರಿಕೆ ನೀಡುವಂತಿದೆ.
ಇದು ಸತ್ಯವಾದ ಸಂಗತಿ ಕೂಡ. ಮುಂಬೈ ಕನ್ನಡಿಗರು, ಹೈದ್ರಾಬಾದ್ ಕರ್ನಾಟಕ, ಮೈಸೂರು ಕನ್ನಡಿಗರು, ಬೆಂಗಳೂರು ಕನ್ನಡಿಗರು, ಧಾರವಾಡ ಭಾಷಾ ಕನ್ನಡಿಗರು, ತುಳು ಕನ್ನಡಿಗರು ಎಂಬಿತ್ಯಾದಿ ಪಂಗಡಗಳನ್ನು ಆಯಾ ಭಾಗಗಳ ಜನರನ್ನು ಗುರುತಿಸಲು, ದಿಕ್ಕನ್ನು ಗುರುತಿಸಲು ನಾವು ಇಟ್ಟುಕೊಂಡಿರುವ ಗುರುತುಗಳು. ಆದರೆ ನಮ್ಮೀ ಜಗಳದಿಂದ ಗುರುತೇ ಸಿಕ್ಕದಂತೆ ಕನ್ನಡಿಗರು ದಿಕ್ಕೆಟ್ಟು ಹೊಗಬಾರದಷ್ಟೆ. ಭಾರತ ಜನನಿಯ ತನುಜಾತೆಯಾಗಿರುವ ಕರ್ನಾಟಕದಲ್ಲಿರುವ ಕನ್ನಡಿಗರೆಲ್ಲರೂ ಒಂದೇ ಅಲ್ಲವಾ? ಕನ್ನಡಿಗರೆಲ್ಲರೂ ಒಗ್ಗಟ್ಟಾಗಿದ್ದೇವಾ? ಎಂಬ ಪ್ರಶ್ನೆಯಗಳನ್ನು ನಾವು ಕೇಳಲೇಬೇಕಾಗಿದೆ.
ಕರ್ನಾಟಕದ ಉಳಿದ ಭಾಗದ ಕನ್ನಡಿಗರ ಸ್ಥಿತಿ ಒಂದು ರೀತಿಯದಾದರೆ, ಬೆಂಗಳೂರು ಕನ್ನಡಿಗರದು ಮತ್ತೊಂದು ಸ್ಥಿತಿ. ಅನ್ಯ ಭಾಷೆಯ ಪ್ರಭಾವವೋ, ಅನ್ಯ ಭಾಷಿಕರ ಅಬ್ಬರವೋ, ಇಲ್ಲಿನ ಕನ್ನಡಿಗರ ಕನ್ನಡ ಕೋಲಿಗೆ ಎಳೆಬಿಟ್ಟಿರುವ ಶಾವಿಗೆ ಎಳೆಯಂತಾಗಿದೆ. ಅಂತಃಸತ್ವ ಗಟ್ಟಿಯಾಗಿದ್ದರೆ ಜಿಗುಟಿನಿಂದ ಹಿಡಿದುಕೊಳ್ಳುತ್ತದೆ. ಇಲ್ಲದಿದ್ದರೆ, 'ಅಜ್ಜಿ ಶಾವಿಗೆ ಬೀಳುತಿದೆ, ಬೀಳುತಿದೆ' ಎಂಬ ಹಾಡು ನೆನಪಾಗುತ್ತದೆ. ಅಸಲಿಗೆ, ಬಾಳೆಎಲೆ ಮೇಲೆ ಊಟ ಮಾಡುವಾಗ ಮೃಷ್ಟಾನ್ನವೂ ಒಂದೇ ಚಿತ್ರಾನ್ನವೂ ಒಂದೇ. ಆದರೆ, ನಾವು ಎಂಥ ಊಟ ಮಾಡಲು ಇಚ್ಛಿಸುತ್ತೇವೆ ಎಂಬುದರ ಮೇಲೆ ಕನ್ನಡಿಗರ ಸ್ಥಿತಿಗತಿ ಅವಲಂಬಿತವಾಗಿರುತ್ತದೆ. ನಮಗಿರುವುದೊಂದೇ ಕರ್ನಾಟಕ!












Click it and Unblock the Notifications