ಬದಲಾವಣೆ ಬಯಸುವುದಾದರೆ ಬಸವನಗುಡಿಗೆ ಬನ್ನಿ...

ಮನೆ ಕಟ್ಟಿಕೊಳ್ಳುವಾಗ ರಸ್ತೆ ಒತ್ತುವರಿ ಮಾಡುವ, ಸರ್ಕಾರಿ ಕಛೇರಿಗಳಲ್ಲಿ ಕೈ ಬೆಚ್ಚಗೆ ಮಾಡಿ ಕೆಲಸ ಮಾಡಿಸಿಕೊಳ್ಳುವ, ಸಿಗ್ನಲ್ ಜಂಪ್ ಮಾಡಿ ಸಿಕ್ಕಿ ಬಿದ್ದಾಗ ದಂಡದ ಅರ್ಧ ಅಮೌಂಟ್ ಕೊಟ್ಟು ಪರಾರಿಯಾಗುವ, ರೂಲ್ಸ್ ಗಳಿರುವುದೇ ಬ್ರೇಕ್ ಮಾಡಲು ಅಂತ ಮಾತನಾಡುವ ನಾವುಗಳು…! ಮನೆ ಅಡವಿಟ್ಟೋ, ಹೆಂಡತಿಯ ಒಡವೆ ಅಡ ಇಟ್ಟೋ ಮಗನಿಗೆ ಸರ್ಕಾರಿ ಕೆಲಸವನ್ನ ಕೊಡಿಸುವ ತಂದೆ, ಮಗನಿಗೆ "ಈ ದುಡ್ಡು ವಾಪಸ್ ತರೋ ಜವಬ್ದಾರಿ ನಿನ್ನದೋ ಕಂದ" ಅನ್ನುವ ಸಮಾಜದಲ್ಲಿ ಬದಲಾವಣೆಯನ್ನ ಇಷ್ಟು ಬೇಗ ನಿರೀಕ್ಷಿಸುವುದು ಮೂರ್ಖತನವಾದೀತೂ ಅಲ್ಲವೇ?
ಚುನಾವಣೆಗೆ ನಿಂತ ರಾಜಕಾರಣಿ ನೀಡುವ ಬಿರಿಯಾನಿ, ಹೆಂಡ ಹಿಂದೆ ನಾಚಿಕೆ ಇಲ್ಲದೆ ಹೋಗುವ, ರಾಜಕಾರಣಿಗಳಿಗೆ ಬೈಯುತ್ತ, ವಿದ್ಯಾವಂತರು ರಾಜಕೀಯಕ್ಕೆ ಬರಲಿ ಅಂತೇಳುತ್ತಲೇ, ಶಿವರಾಮ ಕಾರಂತ, ಕ್ಯಾಪ್ಟನ್ ಗೋಪಿನಾಥ್ ರಂತವರು ಚುನಾವಣೆಗೆ ನಿಂತಾಗ ಸೋಲಿಸುವ ಮನಸ್ಥಿತಿ ನಮ್ಮದಾಗಿರುವಾಗ ಬದಲಾವಣೆ ದಿಢೀರ್ ಸಾಧ್ಯವೂ ಇಲ್ಲ ಸಾಧೂವೂ ಅಲ್ಲ! ಹಾಗೆಂದು ಸುಮ್ಮನೆ ಕೂತರೂ ಏನೂ ಬದಲಾಗದು.
ನಾವು ಬದಲಾಗೋಣ : "ಪೊರಕೆ ಹಿಡಿಯದೆ ಕಸ ಖಾಲಿಯಾಗದು ಅಲ್ಲವೇ? ಈ ದೇಶದಲ್ಲೋಬ್ಬ ಗಾಂಧಿ ಬಂದ ಮೇಲೆಯೆ ತಾನೆ, ರಾಜರ ಅಸ್ತಿತ್ವದ ಹೋರಾಟ ಅಂತಲೇ ಸಾಮಾನ್ಯ ಜನರ ಕಣ್ಣಿಗೆ ಕಾಣಿಸುತಿದ್ದ ಹೋರಾಟ, ಮುಂದೆ ಅದೇ ಜನರ ವ್ಯಾಪಕ ಪಾಲ್ಗೊಳ್ಳುವಿಕೆಯಿಂದಾಗಿ "ಸ್ವಾತಂತ್ರ್ಯ ಹೋರಾಟ"ವಾಗಿ ಬದಲಾಗಿದ್ದು? ಸರ್ವಾಧಿಕಾರಕ್ಕೆ ಸೆಡ್ಡು ಹೊಡೆದು ಜೆಪಿ ಚಳವಳಿಯಾಗಿದ್ದು ಹೇಗೆ? ಬರಿ ಕೈಯಿಂದ ದೇಶ ಬಿಟ್ಟು, 40 ಸಾವಿರ ಜನರ ಸೈನ್ಯ ಕಟ್ಟಿದ ಸುಭಾಷರ ನೆನಪಿದೆಯೆ?
ಮೇಲೆ ಹೇಳಿದ್ದೆಲ್ಲ ಓದಲು ರೋಚಕವಾಗಿದೆ, ಆದ್ರೆ ಇವೆಲ್ಲ ಓದಲಷ್ಟೆ ಸುಂದರ ಅಂತಿರಾ? ನಿಜ. ಭ್ರಷ್ಟಚಾರದ ವಿರುದ್ಧ ಈ ಹೋರಾಟಕ್ಕೆ ಬೆಂಬಲಿಸುವ ಜನರು ಮೊದಲು ಬದಲಾಗಬೇಕು. ನಾವು ಎಲ್ಲಿಯೂ ಯಾರಿಗೂ ಹಣ ಕೊಡುವುದು, ಪಡೆಯುವುದು ಇದನ್ನೆಲ್ಲ ಬಿಡಲೇಬೇಕು. 'You Must be the Change You Want to see" ಅಂತ ಗಾಂಧೀಜಿಯವರು ಹೇಳಿದ ಮಾತಿನ್ನ ಅಳವಡಿಸಿಕೊಂಡರೆ, ಖಂಡಿತ ಬದಲಾವಣೆ ಸಾಧ್ಯವಿದೆ ಅನ್ನುವ ಆಶಾವಾದಿ ನಾನು. ಅಂತದ್ದೊಂದು ಬದಲಾವಣೆಯ ಕಾಲ (ನಿಧಾನವಾಗಿಯಾದರೂ) ಶುರುವಾಗಲಿ.
ಇಂಥದ್ದೇ ನೆಗೆಟಿವ್ ವಾತವಾರಣವಿದ್ದಾಗಲೇ ಉಪವಾಸ ಸತ್ಯಾಗ್ರಹದಿಂದ ಸರ್ಕಾರ ಮಂಡಿಯೂರುವಂತೆ ಮಾಡಿದ್ದು ಅಣ್ಣ ಹಜಾರೆ. ಅವರ ಹೋರಾಟದ ಫಲವಾಗಿ ಇದೀಗ "ಜನ ಲೋಕಪಾಲ" ಮಸೂದೆಯ ಅಂಗೀಕಾರ ಬಹುಷಃ ಮುಂದಿನ ಸಂಸತ್ ಅಧಿವೇಶನದಲ್ಲಿ ನಡೆಯಬಹುದು ಅನ್ನುವ ಆಶಾಭಾವನೆ ಮೂಡಿದೆ. ಆದರೆ ಸರ್ಕಾರ ಅನ್ನುವ ಆನೆಯ ಮೇಲೆ ಅಂಕುಶವನ್ನಿಡಲು ಮತ್ತೊಮ್ಮೆ "ಭ್ರಷ್ಟಾಚಾರದ ವಿರುದ್ಧ ಭಾರತ" ಆಂದೋಲನ ಬೆಂಗಳೂರಿನಲ್ಲಿ ನಡೆಯಲಿದೆ.
ಎಲ್ಲಕ್ಕೂ ಒಂದು ಅಂತ್ಯವಿರುವಂತೆ ನಮ್ಮ-ನಿಮ್ಮೊಳಗಿನ ಭ್ರಷ್ಟಚಾರ ಅನ್ನುವ ಭೂತದಿಂದ ಮುಕ್ತವಾದ ನೆಮ್ಮದಿಯ ನಾಳೆಗಳು ನಮಗೆ – ನಮ್ಮ ಮಕ್ಕಳಿಗೆ ಕೊಡುವುದಕ್ಕಾದರೂ ಈ ಹೋರಾಟದಲ್ಲಿ ಪಾಲ್ಗೊಳ್ಳೋಣ ಬನ್ನಿ.
ಇದೆ ಮೇ 28ರ ಶನಿವಾರ ಮಧ್ಯಾನ್ಹ 2 ಗಂಟೆಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಅಣ್ಣ ಹಜಾರೆ, ಕಿರಣ್ ಬೇಡಿ, ಸ್ವಾಮಿ ಅಗ್ನಿವೇಶ್, ಅರವಿಂದ ಕ್ರೇಜಿವಾಲ್ ಮತ್ತು ಪ್ರಶಾಂತ್ ಭೂಷಣ್ ಬರುತಿದ್ದಾರೆ. ನೀವೂ ಬರ್ತೀರಲ್ವಾ?











Click it and Unblock the Notifications