ಝಾಕಿರ್ ಹುಸೇನ್ ಕಂಡಂತೆ ಪ್ರಶಸ್ತಿ ವಿವಾದ ಹಾಗೂ ಫ್ಯೂಷನ್ ಸಂಗೀತ
ಪ್ರಶಸ್ತಿ ಸಮಿತಿ ಮಂತ್ರಾಲಯದವರು ನನಗೆ ಫೋನ್ ಮಾಡಿ, ನೀವು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ. ಪ್ರಶಸ್ತಿ ಸ್ವೀಕರಿಸುವಿರೋ ಇಲ್ಲವೋ ಈಗಲೇ ಹೇಳಿ ಅಂತ ಕೇಳಿದರು. ಪ್ರಾಯಶಃ ನನಗಿಂತ ಹಿರಿಯರಿಗೆ ಅದನ್ನು ಕೊಟ್ಟು, ಮುಂದಿನ ವರ್ಷ ನನಗೆ ಕೊಡುವ ಯೋಚನೆ ಇದ್ದಿರಬಹುದು :) ಪ್ರಶಸ್ತಿಗಳ ಪಟ್ಟಿ ಫೈನಲೈಸ್ ಆಗಿದೆ. ನೀವು ಯೆಸ್ ಅಥವಾ ನೋ ಹೇಳಬೇಕು ಅಷ್ಟೆ ಅಂದರು. ನೋ ಅಂದರೆ ಸರ್ಕಾರಕ್ಕೆ ಅವಮಾನ. ಇವನಿಗೆ ದುರಹಂಕಾರ ಅಂತಾರೆ. ಈ ಕಾರಣಕ್ಕೇ ಯೆಸ್ ಅಂದೆ. ಆಮೇಲೆ ಅವರಿಗೆ ಅನಿಸಿರಬಹುದು- ನಾನು ಅವರಂದುಕೊಂಡದ್ದಕ್ಕಿಂತ ಚಿಕ್ಕವನು ಎಂದು!
ಎನ್ಡಿಟಿವಿ ಸಂದರ್ಶನದಲ್ಲಿ ಝಾಕಿರ್ ಹುಸೇನ್ ಆಡಿರುವ ಮಾತಿದು. ಪ್ರಶಸ್ತಿಗಳು ಯಾಕೆ ವಿವಾದ ಸೃಷ್ಟಿಸುತ್ತವೆ ಎಂಬುದಕ್ಕೆ ಹಿಡಿದ ಕನ್ನಡಿ ಇವರ ಮಾತು. ಸಂದರ್ಶನದ ಮಾತಿನ ಇನ್ನಷ್ಟು ತಿರುಳನ್ನು ಓದಿ. ಮಜವಾಗಿದೆ...
ಎಂಬತ್ತು ದಾಟಿರುವ ಕಠಕ್ ನೃತ್ಯಗಾರ್ತಿ ಸಿತಾರ ದೇವಿ ಅಂಥವರು ನನ್ನ ಜೊತೆ ಪ್ರಶಸ್ತಿ ಸ್ವೀಕರಿಸಿದ್ದು ನನಗೇ ಮುಜುಗರವಾಯಿತು. ಇನ್ನು ಅವರಿಗೆ ಏನಾಗಿರಬೇಡ ! ಪ್ರಶಸ್ತಿಗೂ ಸಾಧನೆಗೂ ಸಂಬಂಧವಿಲ್ಲ ಅನ್ನುವುದು ನನಗೆ ಮನವರಿಕೆಯಾಗಿದೆ. ನನ್ನ ಅಪ್ಪ ಏನೆಲ್ಲಾ ಮಾಡಿದ್ದರೂ, ಅವರಿಗೆ ಸಂದಿದ್ದು ಪದ್ಮಶ್ರೀ ಮಾತ್ರ. ಅದಕ್ಕೆ ಅವರು ಕೊರಗಲೂ ಇಲ್ಲ. ಕೊರಗಬಾರದು ಕೂಡ. ಆದರೆ ಪ್ರಶಸ್ತಿ ಸಮಿತಿಯವರ ಧೋರಣೆ ಬೇಸರ ಹುಟ್ಟಿಸುತ್ತದೆ. ಮೊದಲು ಒಬ್ಬರ ಹೆಸರು ಪ್ರಕಟಿಸಿ, ಆಮೇಲೆ ಆತ ಚಿಕ್ಕವ ಎಂಬ ಕಾರಣಕ್ಕೆ ಬೇರೆ ದೊಡ್ಡವರಿಗೆ ಕೊಡುವುದು ಖಂಡಿತ ವಿವಾದಕ್ಕೆ ಎಡೆ ಮಾಡಿಕೊಡುತ್ತದೆ. ಯಾಮಾರಿದ್ದರೆ ನನ್ನ ವಿಷಯದಲ್ಲೂ ಹೀಗೆ ಆಗುತ್ತಿತ್ತೇನೋ?!
ಮಾತು ವಿವಾದದಿಂದ ಹೊರ ಬಂದು, ಸಾಗಿದ್ದು ಸಂಗೀತದತ್ತ ....
ಫ್ಯೂಷನ್ ಸಂಗೀತವನ್ನು ಕೆಲವರು ವಿರೋಧಿಸುತ್ತಾರೆ. ಈ ಸಂಗೀತದ ಜಾಯಮಾನವೇ ಹೀಗೆ. ನನ್ನ ಪ್ರಕಾರ ಅದ್ಭುತ ಸಂಗೀತ ಮತ್ತು ಗೊಂದಲ ಸಮಾಂತರವಾದವು. ಅದು ಹೇಗೆಂದರೆ, ನಾವು ಭಾರತೀಯರು ಅನ್ನುವ ಪ್ರಬಲ ಪ್ರಜ್ಞೆಯನ್ನು ಮನದಲ್ಲಿಟ್ಟುಕೊಂಡೂ ಜೀನ್ಸ್ ತೊಡಲು, ಕೌಬಾಯ್ ಬೂಟ್ ಹಾಕಿಕೊಳ್ಳಲು ಹಾತೊರೆಯುತ್ತೇವಲ್ಲ ಹಾಗೆ.
ನಾವು ನಮ್ಮ ಸಂಗೀತದ ಇತಿಹಾಸದ ಬಗೆಗೆ ಮಾತಾಡುತ್ತೇವೆ. ಆಫ್ರಿಕನ್ ಡ್ರಮಿಂಗ್ ಸಂಸ್ಕೃತಿ 2000 ವರ್ಷಗಳಷ್ಟು ಹಳೆಯದು. ಜಪಾನಿನ ಟೈಕೋ ಡ್ರಮಿಂಗ್ಗೆ 3000 ವರ್ಷಗಳ ಇತಿಹಾಸವಿದೆ. ಗಮೋಲಿನ್ ಸಂಗೀತ ಇನ್ನೂ ಹಳೆಯದು. ನಾನು ಈಚೆಗೆ ಜಪಾನಿನ ಕೋಡೋ ಎಂಬ ಟೈಕೋ ಡ್ರಮಿಂಗ್ ಗ್ರೂಪ್ ಜೊತೆ ಕೆಲಸ ಮಾಡಿದೆ. ದೊಡ್ಡದಾದ ಡ್ರಮ್ಮುಗಳು ಎಂಥಾ ಮುದ ಕೊಡುತ್ತವೆ ಗೊತ್ತೆ? ಫ್ಯೂಷನ್ ಸಂಗೀತದಿಂದ ನಮ್ಮ ಸಂಗೀತವನ್ನು ಹಾಳು ಮಾಡುವವರೂ ಇದ್ದಾರೆ. ಆದರೆ ಸರಿಯಾಗಿ ಕೆಲಸ ಮಾಡಿದರೆ, ಸಂಗೀತವನ್ನು ಇದರ ಮೂಲಕ ಬೆಳೆಸಬಹುದು. ಬೇರೆಯವರಿಗೂ ನಮ್ಮ ಸಂಗೀತ ಸಂಪ್ರದಾಯವನ್ನು ಪರಿಚಯಿಸಬಹುದು. ಇದೊಂದು ರೀತಿ ಕೊಡು- ಕೊಡುಗೆ ಇದ್ದಂತೆ.
ಬಡೇ ಗುಲಾಂ ಅಲಿ ಸಾಬ್ ಬಂದಾಗ, ಹಿಂದೂಸ್ತಾನಿ ಸಂಗೀತಕ್ಕೇ ಒಂದು ಹೊಸ ವೇಗ ದಕ್ಕಿತು. ಇದಕ್ಕೆ ಕಾರಣ ಅವರ ಪ್ರಯೋಗಶೀಲತೆ. ರಾಗಗಳನ್ನು ಹಾಳುಗೆಡಹದೆ, ಅವುಗಳ ಜೊತೆ ಜಾಣತನದಿಂದ ಆಟವಾಡುವವರು ಹೊಸ ಛಾಪು ಮೂಡಿಸುವುದು ಸಾಧ್ಯ. ಇಲ್ಲವಾದರೆ ಹೊಸತನವನ್ನು ನಿರೀಕ್ಷಿಸುವುದಾದರೂ ಹೇಗೆ?
ಜಾಕಿರ್ ವಾದವನ್ನು ನೀವು ಒಪ್ಪುತ್ತೀರಾ?
ವಾರ್ತಾ ಸಂಚಯ












Click it and Unblock the Notifications