ನಿಮಗೆ ಹೊಸತೀ ಹಳೆ ಕಂಠ
ಟಿ.ಆರ್.ಶ್ರೀನಿವಾಸನ್ ಎಂಬ ಪ್ರತಿಭೆಯನ್ನೂ ಕೆಸೆಟ್ಟು ಅನಾವರಣಗೊಳಿಸುತ್ತದೆ. ಈತ ಸಂಯೋಜಕರೂ ಹೌದು, ಗಾಯಕರೂ ಹೌದು. ಡಿವಿಜಿಯವರ ‘ಏನೇ ಶುಕಭಾಷಿಣಿ’, ಕುವೆಂಪು ವಿರಚಿತ ‘ಹೊಳೆವ ನೀರ ಮೇಲೆ’ ಹಾಗೂ ‘ನಿನ್ನ ಬಾಂದಳದಂತೆ’ಗಳಿಗೆ ಸ್ಪಷ್ಟತೆ ಹಾಗೂ ಮುಗ್ಧತೆಯ ರಾಗ ತುಂಬಿ ಹಾಡಿದ್ದಾರೆ. ಪುಷ್ಪ ಜಗದೀಶ್ ಜೊತೆ ಬಸವಣ್ಣನ ‘ಮಾತು ಬೆಳ್ಳಿ’ ರಚನೆಗೂ ಇವರು ಜೀವ ತುಂಬಿದ್ದಾರೆ. ಪಿ.ಕಾಳಿಂಗ ರಾವ್ ಹಾಗೂ ಶಿವಮೊಗ್ಗ ಸುಬ್ಬಣ್ಣ ಅವರ ಕಂಠಕ್ಕೆ ಮಧ್ಯದ ಸ್ಥಾಯಿ ಹೊಂದಿದ ಇವರ ಕಂಠ ನಿಮಗೀಗ ಹೊಸತು.
ಕೆಸೆಟ್ಟೊಂದರ ಒಂದು ಹಾಡಿಗೂ, ಮತ್ತೊಂದು ಹಾಡಿಗೂ ಸಂಯೋಜನೆಯಲ್ಲಾಗಲೀ ಅರ್ಥದಲ್ಲಾಗಲೀ ವೈವಿಧ್ಯತೆ ಇದೆ. ಇಂಥಾ ನಾನ್ಸ್ಟಾಪ್ ಹಿಟ್ಸ್ ಕನ್ನಡದಲ್ಲಿ, ಅದೂ ಸುಗಮ ಸಂಗೀತ ಕ್ಷೇತ್ರದಲ್ಲಿ ಹೊರ ಬರುತ್ತಿರುವುದು ಇದೇ ಮೊದಲು.
ವೆರೈಟಿ : ಶ್ಯಾಮಲಾ ಭಾವೆಯವರ ತೇಲುದನಿಯಲ್ಲಿ ಪುರಂದರ ದಾಸರ ಕೀರ್ತನೆ ಕೇಲಿ, ಅನಂತ ಸ್ವಾಮಿಯವರ ಮನ ನಾಟುವ ಏರಿಳಿತ, ಸಿ.ಅಶ್ವತ್ಥ್ರ ‘ರೆರೆರೆರೆ ರೆರೆರಾ...’, ರತ್ನಮಾಲ ಅವರ ವೇರಿಯೇಶನ್, ಬಿ.ಕೆ.ಸುಮಿತ್ರಾ ಡೆಡಿಕೇಶನ್, ಶಿವಮೊಗ್ಗ ಸುಬ್ಬಣ್ಣನವರ ಖದರು, ಮೋಹನ್ ಕುಮಾರಿ- ಸೋಹನ್ ಕುಮಾರಿ ಕಟ್ಟಿಕೊಡುವ ಹಳೇ ಹಿಂದಿ ಸಿನಿಮಾ ಗೀತೆಯ ನೆನಪುಗಳು, ಕಸ್ತೂರಿ ಶಂಕರ್ ಒಣಗಿದೆದೆಗೆ ತರುವ ಮಳೆ, ಪುಷ್ಪಲತಾ ಹಾಗೂ ಪುಷ್ಪ ಜಗದೀಶ್ ಸ್ಫುಟತೆ, ಕಂಬಾರರ ಜೋಕುಮಾರ ಸ್ವಾಮಿಯ ಪದಗಳು, ಆಗಿನ ಆಕಾಶವಾಣಿ ಕಲಾವಿದ ಹೆಚ್.ಕೆ. ನಾರಾಯಣ ಮೊನಚು ಇನ್ನೂ ಏನೇನೋ ಬಣ್ಣಿಸಲಸದಳವಾದ ಅಂಶಗಳು ಕೆಸೆಟ್ಟುಗಳಲ್ಲುಂಟು.
ಆವುದೀ ಶಕ್ತಿ ?
ಏಳು ಕೆಸೆಟ್ಟುಗಳಲ್ಲಿ ಒಟ್ಟು 75 ಹಾಡುಗಳಿವೆ. ಅನಂತಸ್ವಾಮಿ ಹಾಡಿರುವ ‘ಕುರಿಗಳು ಸಾರ್’ ಚೇಷ್ಟೆಯೆಂಬಂತೆ ಹಾಡಲು ಪ್ರಚೋದಿಸಿದರೆ, ‘ಆವು ಈವಿಗೆ ನಾವು ನೀವಿಗೆ ಆನು ತಾನಾದ ತನನನ’ ಅನುಭಾವಿಯ ಮೈನವಿರೇಳಿಸುತ್ತದೆ. ಎಲ್ಲಕ್ಕಿಂತ ಗಮನ ಸೆಳೆವ ಮತ್ತೊಂದು ದನಿಯಿದೆ. ಅದು ಯಾರದೋ ಗೊತ್ತಿಲ್ಲ. ಕವನದ ಕರ್ತೃವೂ ಗೊತ್ತಿಲ್ಲ. ಸಂಯೋಜನೆ ಯಾರದೆಂಬುದೂ ತಿಳಿಯದು. ಆದರೆ ಆ ಸಾಲುಗಳಿಗೆ ನಮ್ಮನ್ನು ಹಿಡಿದಿಡುವ ಬಲವಾದ ಶಕ್ತಿಯಿದೆ-
‘ಎಂದೋ ನನ್ನ ಕಿಂದರಿಯಲಿ ತಾವು ಕೇಳಿದೊಂದು ಹಾಡು ನನ್ನದೆಂದು ಅರಿತ ಮಂದಿ ನನ್ನ ಕರೆದರು...’ ಹೀಗೆ ಶುರುವಾಗುವ ಹಾಡು ‘ನಾನು ಮರೆತ ಹಾಡು ಇವರ ಹೃದಯದೊಳಗೆ ಸೇರಿಹೋದ ಸುದ್ದಿ ನನ್ನ ಕಿವಿಗೆ ಬಿದ್ದು ಬೆಳಕು ಹರಿಯಿತು’ ಎಂದು ಕೊನೆಗೊಳ್ಳುತ್ತದೆ.
ಒಮ್ಮೆ ಟ್ರೆೃ ಮಾಡಿ. ಈ ಸಾಲುಗಳಿಗೆ ರಾಗ ಕಟ್ಟುವುದು ಸರಳವಲ್ಲ. ಜೊತೆಗೆ ಸಾಲುಗಳಲ್ಲಿನ ಜೀವಸತ್ವಕ್ಕೆ ಬೆಲೆ ಕಟ್ಟಲಾಗದು. ಹ್ಞಾಂ, ನೀವು 140 ರುಪಾಯಿ ಖರ್ಚು ಮಾಡಿ 7 ಕೆಸ್ಟೆಟುಗಳ ಸೆಟ್ಟು ಅಥವಾ 500 ರುಪಾಯಿ ಕೊಟ್ಟು 5 ಸಿಡಿಗಳ ಸೆಟ್ಟನ್ನು ಕೊಂಡು ಹೊಸ ಅನುಭವ ಕಟ್ಟಿಕೊಳ್ಳಬಹುದು.
ಮುಖಪುಟ / ಸಾಹಿತ್ಯ ಸೊಗಡು