ಮಾರ್ಚ್ 15ರಂದು ಬೆಂಗಳೂರಲ್ಲಿ ಅಟಲ್ ಕವನಗಳಿಗೆ ಜಗ್ಜಿತ್ ರಾಗ
ಬೆಂಗಳೂರಿಗರಿಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾವ್ಯವ ಹಾಡಿನ ರೂಪದಲ್ಲಿ ಸವಿಯುವ ಅವಕಾಶ; ಅದೂ ಪ್ರಸಿದ್ಧ ಹಿಂದೂಸ್ಥಾನಿ ಗಾಯಕ ಜಗ್ಜಿತ್ ಸಿಂಗ್ ಕಂಠದ ಮೂಲಕ. ಮಾರ್ಚ್ 15ರಂದು ಚೌಡಯ್ಯ ಸ್ಮಾರಕ ಭವನದಲ್ಲಿ.
ಘಜಲ್ಗಳು ಹಾಗೂ ಭಜನೆಗಳ ಮೂಲಕ ಮನೆಮಾತಾಗಿರುವ ಜಗ್ಜಿತ್ ಸಿಂಗ್, ಹಿಂದಿ ಸಿನಿಮಾ ಗೀತೆಗಳ ಮೆಚ್ಚುವವರಿಗೆ ಪರಿಚಿತರು. ಅರ್ಥ್ ಚಿತ್ರದ ‘ತುಮ್ ಇತ್ನ ಜೋ ಮುಸ್ಕುರಾ ರಹೇ ಹೋ...’, ‘ಪ್ರೇಮ್ಗೀತ್’ನ ‘ಹೋಟೋಂ ಸೇ ಚೂಲೋ ತುಮ್ ಮೇರಾ ಗೀತ್ ಅಮರ್ ಕರ್ದೋ...’ ಗೀತೆಗಳ ಮೂಲಕ ಛಾಪು ಮೂಡಿಸಿದ ಜಗ್ಜಿತ್ ಸಿಂಗ್, ಸರ್ಫರೋಷ್ ಚಿತ್ರದ ‘ಹೋಶ್ ವಾಲೋಂ ಕೋ ಖಬರ್ ಕ್ಯಾ....’ ಹಾಡಿನ ಮೂಲಕ ಹದಿಹರೆಯದವರಿಗೂ ಹಿಡಿಸಿದರು.
ಉಸ್ತಾದ್ ಜಮಾಲ್ ಖಾನ್ ಗರಡಿಯಲ್ಲಿ ಪಳಗಿರುವ ಜಗ್ಜಿತ್ಗೆ ಪ್ರಧಾನಿ ಅಟಲ್ ಗೀತೆಗಳೆಂದರೆ ತುಂಬಾ ಇಷ್ಟ. ಆ ಕಾರಣಕ್ಕೇ ಅಟಲ್ ಅವರ ಸಂವೇದನಾ ಎಂಬ ಸಂಕಲನದ ಗೀತೆಗಳಿಗೆ ರಾಗ ಕಟ್ಟಿರುವುದು. ಜಗಜಿತ್ಗೆ ರಾಜಕೀಯ ಅಂದರೆ ಅಷ್ಟಕ್ಕಷ್ಟೆ. ನನಗೆ ವಾಜಪೇಯಿ ಅವರ ಕವನಗಳಲ್ಲಿ ರಾಜಕೀಯದ ಸಣ್ಣ ನೆರಳೂ ಕಾಣುವುದಿಲ್ಲ. ಅವುಗಳಲ್ಲಿ ಒಬ್ಬ ಬಡವನ ಅಳಲು, ಶ್ರೀಮಂತನ ತೊಳಲಾಟ ಎಲ್ಲದರ ಸೆಳಕಿದೆ. ನಾನು ಪ್ರಧಾನಿ ಅನ್ನುವುದನ್ನು ಅಪ್ಪಿತಪ್ಪಿಯೂ ತಮ್ಮ ಕವನಗಳಲ್ಲಿ ವಾಜಪೇಯಿ ತೋರಿಸಿಲ್ಲ ಅನ್ನುತ್ತಾರೆ ಜಗ್ಜಿತ್.
ತಮ್ಮ ಈ ಹೊಸ ಆಲ್ಬಂನ ಪ್ರಚಾರಕ್ಕೆ ಬೆಂಗಳೂರಿನ ಕಚೇರಿ ಅನ್ನುವುದೇನೋ ದಿಟ. ಆದರೆ, ಅಂದು ವಾಜಪೇಯಿ ವಿರಚಿತ ಗೀತೆಗಳನ್ನಲ್ಲದೆ ಇತರೆ ಘಜಲ್ಗಳನ್ನು ಹಾಡುವುದಾಗಿ ಜಗ್ಜಿತ್ ಪ್ರಾಮಿಸ್ ಮಾಡಿದ್ದಾರೆ. ನೀವೂ ಬಿಡುವು ಮಾಡಿಕೊಂಡು ಹೋಗಿಬನ್ನಿ.
(ಇನ್ಫೋ ವಾರ್ತೆ)