‘ತೆರೆ ಸರಿದಾಗ’ ಕಂಡದ್ದು ರಂಗಕಲಾವಿದೆ ಮಾಲತಿಶ್ರೀ
ಮಾಲತಿಶ್ರೀ ಆತ್ಮಕತೆ ಮತ್ತು ‘ವರನಟ’ ರಾಜ್ಕುಮಾರ್ ಚರಿತೆ ಬಿಡುಗಡೆಗೊಂಡಿವೆ.
ನಗರದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ, ‘ಎಲ್ಲಾ ಬಲ್ಲವ ನೀನೆ...’ ಎಂಬ ರಂಗಗೀತೆ ಹಾಡುತ್ತಲೇ ಸುಭದ್ರಮ್ಮ ಕೃತಿಯನ್ನು ಲೋಕಾರ್ಪಣೆಗೈದರು. ಆನಂತರ ಮಾತನಾಡಿದ ಅವರು, ನನಗೆ ಹಾಡುವುದಷ್ಟೇ ಗೊತ್ತು. ನಾನು ಮಾತು ಬಲ್ಲವಳಲ್ಲ. ಕಲಾವಿದರ ಬದುಕು ಸುಖದ ಸುಪ್ಪತ್ತಿಗೆಯಲ್ಲ, ಕಷ್ಟಕಾರ್ಪಣ್ಯಗಳಿಂದ ಕೂಡಿರುತ್ತದೆ. ‘ತೆರೆ ಸರಿದಾಗ’ ಕೃತಿಯಲ್ಲಿ ಕಲಾವಿದರ ಕಷ್ಟ ಸಮರ್ಥವಾಗಿ ಬಿಂಬಿತವಾಗಿದೆ ಎಂದು ಹೇಳಿದರು.
ಕೃತಿಯ ಲೇಖಕ ಪತ್ರಕರ್ತ ಗುಡಿಹಳ್ಳಿ ನಾಗರಾಜ ಮಾತನಾಡಿ, ಒಬ್ಬ ಕಲಾವಿದೆ ಕುರಿತು ಬರೆದರೆ, ನೂರಾರು ಕಲಾವಿದೆಯರ ತೆರೆಯ ಹಿಂದಿನ ಬದುಕಿಗೆ ಆ ಕೃತಿ ಸಾಕ್ಷಿಯಾಗುತ್ತದೆ. ಅಂತಹ ಕೃತಿ ಬರೆಯಬೇಕೆಂದು ಹತ್ತು ವರ್ಷಗಳ ಹಿಂದೆಯೇ ಕನಸು ಕಂಡಿದ್ದೆ. ಆ ಕನಸು ಈಗ ಈಡೇರಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಹಿರಿಯ ರಂಗ ಕಲಾವಿದರಾದ ಮಾಸ್ಟರ್ ಹಿರಣ್ಯಯ್ಯ, ಎಂ.ಎಸ್.ಕೊಟ್ರೇಶ್, ಕವಿ ಪ್ರೊ.ದೊಡ್ಡರಂಗೇಗೌಡ, ದೂರದರ್ಶನ ಕೇಂದ್ರದ ನಿರ್ದೇಶಕ ಮಹೇಶ್ ಜೋಶಿ ಮೊದಲಾದವರು ಭಾಗವಹಿಸಿದ್ದರು. ಕೃಷ್ಣಾಪುರದೊಡ್ಡಿಯ ಕೆ.ಎಸ್.ಮುದ್ದಪ್ಪ ಟ್ರಸ್ಟ್ ಇದನ್ನು ಪ್ರಕಟಿಸಿದೆ.
‘ವರನಟ’ ಪರಿಷ್ಕೃತ ಆವೃತ್ತಿ ಬಿಡುಗಡೆ : ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್ಕುಮಾರ್ ಕುರಿತು ಜಗನ್ನಾಥರಾವ್ ಬಹುಳೆ ಬರೆದಿರುವ ‘ವರನಟ’ ಕೃತಿಯ ಪರಿಷ್ಕೃತ ಆವೃತ್ತಿಯನ್ನು ಹಿರಿಯ ನಟ-ನಿರ್ಮಾಪಕ ಎಂ.ಪಿ.ಶಂಕರ್ ಬಿಡುಗಡೆ ಮಾಡಿದ್ದಾರೆ.
ಯವನಿಕಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಚಿತ್ರ ನಿರ್ದೇಶಕ ಗೀತಪ್ರಿಯ, ಲೇಖಕ-ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ರಾಘವೇಂದ್ರರಾಜ್ಕುಮಾರ್ ಮೊದಲಾದವರು ಭಾಗವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications