ವಿಕ್ರಮಾದಿತ್ಯನೂ ನಿರುತ್ತರನಾದ, ಬೇತಾಳ ಹೇಳಿದ ಕೊನೆಯ ಕಥೆಯಿದು...
ಇದು ಒಂದು ಕಥೆ. ಸಂಬಂಧಗಳು ಗೌರವ ಕಳೆದುಕೊಂಡ ಸಮಾಜ ಹೇಗೆ ಗೊಂದಲಕ್ಕೆ ಕಾರಣವಾಗಬಹುದು ಎಂಬುದನ್ನು ತಿಳಿಸುವುದಕ್ಕೆ ಈ ಕಥೆ ಹೆಣೆದಿರಬಹುದು. ಕೆಲವರ ಪ್ರಕಾರ ಇದು ವಿಕ್ರಮ-ಬೇತಾಳ ಕಥೆಯಲ್ಲಿ ಬರುವ ಕೊನೆ ಕಥೆಯಂತೆ. ಬಹಳ ವಿಚಿತ್ರವಾಗಿ ಅನಿಸಿದ್ದರಿಂದ ಇಲ್ಲಿ ಬರೆಯಲಾಗಿದೆ. ಈ ಕಥೆಯ ಮೂಲ ಗೊತ್ತಾದವರು ಈ ಬಗ್ಗೆ ತಿಳಿಸಬಹುದು.
ಒಂದು ದಿನ ಕಾಡಿನ ದಾರಿಯಲ್ಲಿ ಹೊರಟ ತಂದೆ-ಮಗನಿಗೆ ಹೆಣ್ಣುಮಕ್ಕಳದು ಎನಿಸುವಂಥ ದೊಡ್ಡ ಹಾಗೂ ಸಣ್ಣ ಗಾತ್ರದ ಹೆಜ್ಜೆ ಗುರುತುಗಳು ಕಂಡುಬರುತ್ತವೆ. ಆಗಲೇ ಅವರಿಬ್ಬರು ಒಂದು ತೀರ್ಮಾನಕ್ಕೆ ಬರುತ್ತಾರೆ. ದೊಡ್ಡ ಹೆಜ್ಜೆಯ ಹೆಣ್ಣುಮಗಳನ್ನ ತಂದೆ ಮದುವೆ ಆಗೋದು, ಸಣ್ಣ ಹೆಜ್ಜೆಯವಳನ್ನ ಮಗನು ಮದುವೆಯಾಗೋದು ಎಂಬ ಒಪ್ಪಂದ ಆಗುತ್ತದೆ.

ಹಾಗೇ ಕೆಲ ದೂರ ನಡೆದ ನಂತರ ಆ ಇಬ್ಬರೂ ಹೆಣ್ಣುಮಕ್ಕಳು ಇವರಿಗೆ ಸಿಗ್ತಾರೆ. ಅವರಿಬ್ಬರು ತಾಯಿ-ಮಗಳಾಗಿರುತ್ತಾರೆ. ಸಣ್ಣ ಹೆಜ್ಜೆಯು ತಾಯಿಯದಾಗಿರುತ್ತದೆ-ದೊಡ್ಡ ಹೆಜ್ಜೆಯು ಮಗಳದಾಗಿರುತ್ತದೆ. ಅಗ ಈ ತಂದೆ-ಮಗನಿಗೆ ಜಿಜ್ಞಾಸೆ ಶುರುವಾಗುತ್ತದೆ. ಆದರೆ ಅದಾಗಲೇ ಒಪ್ಪಂದವಾಗಿದೆ. ಜತೆಗೆ ಮಾತು ತಪ್ಪುವ ಹಾಗಿಲ್ಲ ಎಂದುಕೊಂಡು, ಮಗ-ವಯಸ್ಸಾದ ಹೆಂಗಸನ್ನು, ಚಿಕ್ಕ ವಯಸ್ಸಿನವಳನ್ನ-ವಯಸ್ಸಾದ ತಂದೆ ಮದುವೆಯಾಗುತ್ತಾನೆ.
ಒಂದೆರಡು ವರ್ಷದಲ್ಲಿ ಸಣ್ಣ ವಯಸ್ಸಿನವಳಿಗೆ ಒಂದು ಗಂಡು ಮಗು ಆಗತ್ತೆ. ಈಗ ಸಂಬಂಧದ ಬಗ್ಗೆ ಪ್ರಶ್ನೆ ಎದುರಾಗುತ್ತೆ.
ಆಗ ಹುಟ್ಟಿದ ಮಗು ಸಣ್ಣ ವಯಸ್ಸಿನ ಹುಡುಗನಿಗೆ ವರಸೆಯಿಂದ ಮೊಮ್ಮಗು ಆಗಬೇಕು, ಮತ್ತೊಂದು ಕಡೆಯಿಂದ ತಮ್ಮ ಆಗಬೇಕು.
ಆ ಸಣ್ಣ ವಯಸ್ಸಿನ ಹುಡುಗಿ ಒಂದು ಕಡೆಯಿಂದ ಚಿಕ್ಕಮ್ಮ, ಮತ್ತೊಂದು ಕಡೆಯಿಂದ ಮಗಳಾಗಬೇಕು, ಸ್ವತಃ ಆತನ ತಂದೆಯೇ ಅಳಿಯನಾಗಬೇಕು.
ಇನ್ನು ವಯಸ್ಸಾದ ಹೆಂಗಸಿಗೆ ಅಳಿಯನಾದವನೇ ಮಾವನೂ ಹೌದು. ಹುಟ್ಟಿದ ಮಗು ಮೊಮ್ಮಗುವೂ ಹೌದು, ಗಂಡನ ತಮ್ಮನೂ ಹೌದು.
ಸಣ್ಣ ವಯಸ್ಸಿನ ಹುಡುಗಿಗೆ ತಂದೆ ಹಾಗೂ ಮಗನ ವರಸೆಯಲ್ಲಿ ಒಬ್ಬನೇ ಇದ್ದಾನೆ. ತನ್ನ ತಾಯಿಯೇ ಆಕೆಗೆ ಸೊಸೆ ಕೂಡ ಆಗುತ್ತಾಳೆ.
ಇನ್ನು ವಯಸ್ಸಾದವನ ಪಾಲಿಗೆ ತನ್ನ ಮಗನೇ ಮಾವ, ಸೊಸೆಯೇ ಅತ್ತೆ ಕೂಡ. ಹೆಂಡತಿಯಾದವಳು ಮೊಮ್ಮಗಳ ವರಸೆಯಾಗುತ್ತದೆ. ಹುಟ್ಟಿದವನು ಮಗನೂ ಹೌದು, ಮರಿ ಮಗನೂ ಹೌದು.
ಇಂಥ ಗೋಜಲಾದ ಸಂಬಂಧಗಳ ಬಗ್ಗೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ? ಆ ವಿಕ್ರಮಾದಿತ್ಯನೂ ಇದಕ್ಕೆ ಉತ್ತರಿಸಲಾಗಲಿಲ್ಲವಂತೆ. ಆದರೆ ಸಂಬಂಧಗಳು ಹಾದಿ ತಪ್ಪಾದರೆ ಸೃಷ್ಟಿಸುವ ಗೊಂದಲದ ಬಗ್ಗೆ ಅರಿವು ಮೂಡಿಸಲು ಈ ಕಥೆ ಒಂದು ಕೈ ಮರ.












Click it and Unblock the Notifications