ಧರ್ಮಸ್ಥಳದ ವಸ್ತುಪ್ರದರ್ಶನದಲ್ಲಿ ಮೈ ಮರೆಸುವ ಮರದ ವಸ್ತು
ಕಾವೇರಿ ಭಾರದ್ವಾಜ್, ಎಸ್.ಡಿ.ಎಂ ಕಾಲೇಜು, ಉಜಿರೆ
ದೇಸಿ ಸಂಸ್ಕೃತಿ ಮತ್ತೆ ಪಾರಂಭವಾಗಿದೆ. ಆಧುನಿಕತೆಯಲ್ಲಿ ಪುರಾತನತ್ವ ಮತ್ತೆ ಮೈಗೂಡುತ್ತಿದೆ. ನಿತ್ಯ ಬಳಕೆಯ ವಸ್ತುಗಳ ಜೊತೆ ಅಲಂಕಾರಿಕ ವಸ್ತುಗಳಾಗಿ ಎಲ್ಲೆಡೆ 'ಮರದ ವಸ್ತುಗಳು' ಕಾಣಿಸಿಕೊಳ್ಳುತ್ತಿವೆ.
ಧರ್ಮಸ್ಥಳದ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ವವದಲ್ಲಿ ವಸ್ತುಪ್ರದರ್ಶನ ಕೇಂದ್ರ ಬಿಂದುವಾಗಿದೆ. ಪ್ರದರ್ಶನದಲ್ಲಿ ಮರದ ಆಟಿಕೆಗಳು, ಅಲಂಕಾರಿಕ ವಸ್ತುಗಳು ಹಾಗೂ ಗೃಹೋಪಯೋಗಿ ಸಲಕರಣೆಗಳು ಆಕರ್ಷಣೆ ಹೆಚ್ಚಿಸಿವೆ.
ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ

ಮರದ ಸೌಟು, ಚಮಚ, ನೈಲ್ ಕಟ್ಟರ್, ಮರದ ಟ್ರೇ, ಮಜ್ಜಿಗೆ ಕಡೆಯಲು ಬಳಸುವ ಕಡಗೋಲು, ಲಟ್ಟಣಿಗೆ-ಮಣೆ ಮತ್ತು ಹೂವಿನ ಬುಟ್ಟಿಗಳು ಗ್ರಾಹಕರನ್ನು ಸೆಳೆದುಕೊಳ್ಳುತ್ತಿವೆ.
ಬಳೆ ಸ್ಟ್ಯಾಂಡ್, ಕುಂಕುಮ ಭರಣಿ, ಬಾಚಣಿಗೆ , ಒಡವೆ ಪೆಟ್ಟಿಗೆ, ಬಳೆಗಳು ಎಲ್ಲವೂ ಮರದಿಂದಲೇ ತಯಾರಾಗಿರುವ ಅಲಂಕಾರಿಕ ಸಾಧನಗಳು. ಹೆಂಗಳೆಯರನ್ನು ತನ್ನತ್ತ ಆಕರ್ಷಿಸುತ್ತಿವೆ. ಮುದ್ದು ಮುದ್ದಾಗಿರುವ ಮರದ ಆಟಿಕೆಗಳು ನೋಡಲು ಸುಂದರವಾಗಿವೆ. ಮರದ ಪುಟ್ಟ, ಪುಟ್ಟ ಫಿರಂಗಿ, ಕಾರು, ಬುಗುರಿ, ಜೀಪು, ಎತ್ತಿನಗಾಡಿ, ಮೊಸಳೆ, ಹಾವು, ಸೈಕಲ್ ಮತ್ತು ಎತ್ತಿನಗಾಡಿಗಳು ಚಿಣ್ಣರ ಮನ ಗೆದ್ದಿವೆ.

ಚನ್ನಪಟ್ಟಣದಲ್ಲಿ ತಯಾರಾದ ಮರದ ವಸ್ತುಗಳು ದೀಪೋತ್ಸವದ ಅಂದ ಹೆಚ್ಚಿಸಿವೆ. ಈ ಎಲ್ಲಾ ಮರದ ವಸ್ತುಗಳನ್ನು ಮೈಸೂರು, ಚನ್ನಪಟ್ಟಣ ಹಾಗೂ ಉತ್ತರ ಪ್ರದೇಶದಿಂದ ತಂದು, ಮಾರಾಟ ಮಾಡಲಾಗುತ್ತಿದೆ.

ಪ್ಲಾಸ್ಟಿಕ್ ಯುಗವಾಗಿರುವ ಇಂದಿನ ಕಾಲಘಟ್ಟದಲ್ಲಿ ಮತ್ತೆ ಗತವೈಭವ ಮರುಕಳಿಸುತ್ತಿದೆ. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳಿಗೆ ಇಂದಿನ ಯುವ ಪೀಳಿಗೆ ಮಾರುಹೋಗುವಂತೆ ಮಾಡುತ್ತಿದೆ. ಯಾವುದೇ ದುಷ್ಪರಿಣಾಮಗಳಿಲ್ಲದೆ ಆರೋಗ್ಯಕ್ಕೆ ಮಾರಕವಲ್ಲದ ಮರದ ವಸ್ತುಗಳು ನೋಡಲು ಸುಂದರವಾಗಿರುವುದರ ಜೊತೆ ಪರಿಸರ ಸ್ನೇಹಿಯಾಗಿದೆ.











Click it and Unblock the Notifications