Get Updates
Get notified of breaking news, exclusive insights, and must-see stories!

ಹಬ್ಬಗಳಿಗೆ ತಳಿರುತೋರಣದಿ ಕಳೆತರುವ ಮಾಮರದ ಜೀವಸ್ವರ

ಶ್ರಾವಣ‌ ನಾಡಿಗೆ ಬರುವಾಗ ಹಬ್ಬಹರಿದಿನಗಳ ಸುರಿಮಳೆ. ಗಿಡಮರಗಳಲ್ಲಿ ಪುಷ್ಪವೃಷ್ಟಿ. ಬೇವು ಚಿಗುರಿ ಮಾವು ನಗುವ ಬೆಡಗಿನ ಕಾಲ. ಮನೆಯ ಮುಂದೆ ಚಂದದ ವರ್ಣಮಯ ರಂಗೋಲಿಯ ಚಿತ್ತಾರ, ಮಾವಿನೆಲೆಯ ತೋರಣ, ಮನೆಯೊಳಗೆ ಪೂಜೆ ಪುನಸ್ಕಾರ, ಕಾಯಿಬೆಲ್ಲದ ಸವಿಪಾಕದ ಅಡುಗೆ... ಹೀಗೆ ಅಂಗಳದ ಒಳನೋಟ, ಬಾಳೆಲೆ ಊಟ ಎಲ್ಲವೂ ವಿಶೇಷವೇ.

ಬಾಲ್ಯದಲ್ಲಿ ಅಪ್ಪ‌ ಮನೆಯನ್ನು ನಗುವ‌‌ ನಂದನವನ್ನಾಗಿಸಿ ನಮಗೆ ಎಲ್ಲೆಲ್ಲೂ ಯಥೇಚ್ಛವಾಗಿ ಹಸಿರುಚಿಗುರಿನ ಬೆರಗು. ಈ ಸಸ್ಯಸಂಕುಲದಲ್ಲಿ ತೆಂಗು, ದಾಳಿಂಬೆ, ಮಾದಲಾ,‌ ಪೇರಲಾ, ಅಮಟೆ, ನುಗ್ಗೇ, ಸಪೋಟ, ಪರಂಗಿ ಇವುಗಳೊಂದಿಗೆ ಹೊಂದಿದ ಮಲ್ಲಿಗೆ, ಗುಲಾಬಿ, ಸೇವಂತಿಗೆ, ಸ್ಪಟಿಕ, ಮರುಗಾ, ದವನದ ಸಹಬಾಳ್ವೆ. ಬಾದಾಮಿ ಜಾತಿಯ ಮೈಯೆಲ್ಲ ಸಿಹಿತುಂಬಿಕೊಂಡ‌ ರೆಂಬೆಕೊಂಬೆ ದಶದಿಕ್ಕಿಗೆ ‌ಚಾಚಿದ ಸೊಂಪಾದ ಮಾವು.

ನಮ್ಮನೆಯ ಮಾಮರದ ಖ್ಯಾತಿ ಸುತ್ತೆಲ್ಲ ಹಬ್ಬಿ ಈ ಸಾಲು ಸಾಲುಹಬ್ಬದ ಶ್ರಾವಣಮಾಸದಲ್ಲಿ ಅಮ್ಮನಿಗೆ ಧರ್ಮಸಂಕಟ. ಪರಿಚಯದವರು ಮಾವಿನ ‌ಎಲೆಗಾಗಿ ಕದತಟ್ಟಿದರೆ ಸಾಕು, ಪ್ರತಿ ಎಲೆ, ಚಿಗುರು, ಕಾಯಿಯ ಲೆಕ್ಕವಿಟ್ಟ ನನ್ನಪ್ಪ ಬಂದವರೆದುರೇ‌‌ ನಿಸ್ಸಂಕೋಚವಾಗಿ ಪ್ರವಚನ‌ ಪ್ರಾರಂಭಿಸಿಬಿಡುವರು.

Hindu festivals and Mango tree leaves

"ಮಹಾಶಯರೇ ಇದು ಅಂತ ಇಂಥ ಜಾತಿ‌ ಮರವಲ್ಲ. ಕಸಿ ಮಾಡಿದ‌ ಬಾದಾಮಿ. ಹಾಗೆಲ್ಲ ಎಲೆ‌ ಕಿತ್ತರೆ ಕಾಯಿ ಕಮ್ಮಿ ಆಗತ್ತೆ. ಎಲೇನೇ ಅಲ್ವೇ ಕಾಯಿಗೆ ಪೋಷಣೆ. ನಾನೇ ಮಾರ್ಕೆಟಿನಿಂದ ಕೊಂಡು ತಂದೆ. ಎರಡು ರೂಪಾಯಿ ಕೊಟ್ಟರೆ ಬೇಕಾದಷ್ಟು ಬರತ್ತೆ".

ಹೀಗೆ ಅಪ್ಪನ ಪ್ರವರ ಸಾಗಿರುವಾಗ ದಾಕ್ಷಿಣ್ಯದ ಮುದ್ದೆಯಾಗಿ ಅಮ್ಮ ಒಳಗೆ ಸರಿದುಬಿಡುವರು. ಹಬ್ಬಗಳು ಬಂತೆಂದರೆ ಮಾಮರಕ್ಕೆ ಅಪ್ಪನ ಸರ್ಪಗಾವಲು. ಹಣ್ಣುಬಿಡುವ ಕಾಲದಲ್ಲಿ ಅಮ್ಮ ನಾವು ತಿಂದೆವೋ ಬಿಟ್ಟೆವೋ ನೋಡದೆ ಹಂಚುತ್ತಿದ್ದುದೇ ಹೆಚ್ಚು. ಹಾಗೆ ಪಾಲು ಬಿಟ್ಟುಹೋದ‌ ಯಾರಾದರೂ "ಏನು ‌ಜಯಲಕ್ಶ್ಮಮ್ಮ‌ ನಮಗೆ ಈ ಸಲ‌ ನಿಮ್ಮ ಮರದ ಹಣ್ಣು ಸಿಗಲೇ ಇಲ್ಲ" ಹೀಗೆಂದರೆ ಸಾಕು ಅಮ್ಮ "ನಿಮ್ಮನ್ನು ಮರೆಯೋದುಂಟಾ? ಒಳಗಿನ ರಂಬೇಲಿ ಒಂದಷ್ಟು‌ ಹಣ್ಣಿಗೆ ಬಂದಿರೋ ಕಾಯಿಗಳಿವೆ" ಎಂದುತ್ತರಿಸಿ ಒಳ್ಳೆಯ ಜಾತಿಹಣ್ಣು ತರಿಸಿ ಅವರಿಗೆ ಕಳಿಸುತ್ತಿದ್ದರು.

Hindu festivals and Mango tree leaves

ಅಪ್ಪನೂ ಹಣ್ಣಿನ ವಿತರಣೆ ಬಗ್ಗೆ ಚಕಾರವೆತ್ತರು. ಜೊತೆಯಲ್ಲೇ "ನಿಮ್ಮಅಮ್ಮನ ಮುಲಾಜಿಗೆ ಇಲಾಜೇ ಇಲ್ಲ" ಎಂದು ಅಪ್ಪ ನಗೆಯಾಡುವರು. ನಮ್ಮ ಸಾಮಿಮಾಮನ ಬಾಡಿಗೆ ಮನೆಯಲ್ಲಿ ಒಂದು ಮಾಮರ. ಇವರು ವಾಸಕ್ಕೆ ಬಂದ ಹೊಸತು. ಪ್ರೀತಿ, ಆರೈಕೆಯಿಲ್ಲದೆ ಬಹಳವೇ ಸೊರಗಿತ್ತು. ಕಲ್ಯಾಣಿ ಆಂಟಿ ನೀರಿನೊಂದಿಗೆ ಅದರ ಬುಡಕ್ಕೆ ಅಕ್ಕರೆಯ‌ ಹೊಳೆಯನ್ನೇ ಹರಿಸಿ ಕೆಲವೇ ವರುಷಗಳಲ್ಲಿ ಅದು ಫಲಭರಿತವಾಯಿತು, ಸವಿಸವಿ ಹಣ್ಣಿನ‌ ಮಳೆಗೆರೆಯಿತು.

ಮನೆಯ ಮಾಲೀಕ ಇದ್ದದು ದೂರದ ಚೆನ್ನೈಲ್ಲಿ. ಅಪರೂಪಕ್ಕೊಮ್ಮೆ ಭೇಟಿ‌ ನೀಡುವ ಆತನ ದೃಷ್ಟಿ ಸಮೃದ್ದ ಮಾಮರದ ಮೇಲೆ ಬೀಳಬೇಕೇ? ಆತನಿಂದ ಆಂಟಿಗೆ ಆದೇಶ ಬಂತು. "ಈ ಮಾವಿನಮರದಿಂದ ಮನೆಯ ಅಡಿಪಾಯಕ್ಕೆ ಅಪಾಯ. ಕಡಿಸಿಬಿಡಿ". ಸಸ್ಯಪ್ರಿಯರಾದ ಕಲ್ಯಾಣಿ ಆಂಟಿ, ಸಾಮಿಮಾಮನಿಗೆ ಜೀವ ಹಿಂಡಿದಂತಾಯಿತು. ಮಾಲೀಕನ ಮಾತು ತಿರಸ್ಕರಿಸುವಂತಿಲ್ಲ. ತಾವೆಷ್ಟಾದರೂ ಬಾಡಿಗೆದಾರರು ಎಂಬ ಕಹಿವಾಸ್ತವ ಮನಗಂಡು ಆ ಮಾಮರಕ್ಕೆ ಅಶ್ರುತುಂಬಿ‌ ವಿದಾಯ‌ ಹೇಳಿದರು.

Hindu festivals and Mango tree leaves

"ಮರ ಕಡಿದರೆ ಮನೆಯ ಯಜಮಾನನ ಜೀವಕ್ಕೆ ಆಪತ್ತು" ಇದು ಬಾಳಿ‌ಬದುಕಿದ ಹಿರಿಯರು ನಂಬಿ ನಡೆದುಕೊಂಡು ಬಂದ ಮಾತು. ಮಾಮರ ಧರೆಗುರುಳಿದ ಎರಡೇ ವಾರದಲ್ಲಿ ಸಾಮಿಮಾಮನ ಅಂತಿಮ ಪ್ರಯಾಣದ ಗಳಿಗೆ ‌ಬಂದೇಬಿಟ್ಟಿತು. ಅವರಿಗೆ ಅನಾರೋಗ್ಯವಿದ್ದು ವೈದ್ಯಕೀಯ ಉಪಚಾರ ನಡೆಯುತ್ತಿದ್ದದು ನಿಜವಾದರೂ ಮಾಮನ ಸಾವು‌ ಒಂದರ್ಥಕ್ಕೆ ಅನಿರೀಕ್ಷಿತವೇ. "ಫಲ ಬಿಟ್ಟು ಪಾಪ ‌ಕಳಿ"

"ಹಣ್ಣು ಹಂಚಿ‌ ತಿನ್ನಬೇಕು ‌ಹೂ ‌ಕೊಟ್ಟು‌ ಮುಡೀಬೇಕು" ಇಂತಹ ಗಾದೆಮತೆಲ್ಲ‌ ಚಾಲ್ತೀಲಿ‌‌ ಇನ್ನೂ‌ ಇದೆ ಅಂದರೆ ಅದರ‌ ಹಿಂದಿನ ಜೀವನದರ್ಶನದ ‌ಬೆಳಕು‌ ನಾವು ಹೃದಯ‌ಪಾತ್ರೇಲಿ ತುಂಬಿಕೋಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+