ಹಿರಿಯ ವಿಮರ್ಶಕ ಕಿರಂ ಇನ್ನಿಲ್ಲ
ಮೂಲತಃ ಹಾಸನ ಜಿಲ್ಲೆಯ ಕಿತ್ತಾನೆ ಗ್ರಾಮದವರಾದ ಕಿರಂ, ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರೊಫೆಸರ್. ಅವರ ಪತ್ನಿ ವಿಜಯಲಕ್ಷ್ಮಿ ಕಳೆದ ವರ್ಷ ನಿಧನರಾಗಿದ್ದರು. ಅವರ ಮೂವರು ಹೆಣ್ಣು ಮಕ್ಕಳ ಪೈಕಿ ಚಂದನಾ ಅವರೊಂದಿಗೆ ವಾಸವಾಗಿದ್ದರು. ಶನಿವಾರ ಸಂಜೆ ಸುಚಿತ್ರಾ ಫಿಲಂ ಸೊಸೈಟಿ ಸಭಾಂಗಣದಲ್ಲಿ ಬೇಂದ್ರೆ ಕಾವ್ಯದ ಬಗ್ಗೆ ಸುಮಾರು ಎರಡು ಗಂಟೆ ಕಾಲ ಉಪನ್ಯಾಸ ನೀಡಿದ ನಂತರ ನಿವಾಸಕ್ಕೆ ತೆರಳಿದವರೇ ಎದೆ ನೋವಿಗೆ ಒಳಗಾದರು.
ತಕ್ಷಣವೇ ಅವರನ್ನು ಬೆಂಗಳೂರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ನನಗೇನೂ ಆಗಿಲ್ಲ ಎಂದು ಕಿರಂ ಆಸ್ಪತ್ರೆಯಲ್ಲಿ ವೈದ್ಯರಿಗೆ ಹೇಳಿದರು. ಪ್ರಾಥಮಿಕ ಚಿಕಿತ್ಸೆ ನೀಡಿ ಅವರನ್ನು ವಾಪಸ್ಸು ಮನೆಗೆ ಕರೆದುಕೊಂಡು ಬರಲಾಯಿತು. ಕೆಲ ನಿಮಿಷದ ನಂತರ ಮತ್ತೊಮ್ಮೆ ತೀವ್ರ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಬೆಂಗಳೂರು ಆಸ್ಪತ್ರೆಗೆ ಕರದೊಯ್ಯಲಾಯಿತು. ಆದರೆ, ಕಿರಂ ಮಾರ್ಗ ಮಧ್ಯೆದಲ್ಲಿ ಕೊನೆಯುಸಿರೆಳೆದರು. ಕಿರಂ ಮೂವರು ಹೆಣ್ಣಮಕ್ಕಳು, ಅಪಾರ ಶಿಷ್ಯ ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.