Get Updates
Get notified of breaking news, exclusive insights, and must-see stories!

ರಾಷ್ಟ್ರ ರಾಜಕಾರಣದಲ್ಲಿ ಸೋನಿಯಾ ಸಾಗಿಬಂದ ಹಾದಿ

Sonia Gandhi
ಹನ್ನೆರಡು ವರುಷಗಳ ಹಿಂದೆ ಅಂದರೆ, 15ನೇ ಮಾರ್ಚ್, 1998ರಂದು, ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಸಾರಥ್ಯವನ್ನು ವಹಿಸಿಕೊಂಡಿದ್ದು, ತದನಂತರ ಭಾರತೀಯ ರಾಜಕೀಯ ಆಗಸದಲ್ಲಿ ಸಂಭವಿಸಿದ ಬದಲಾದವಣೆಗಳು ಯಾರನ್ನಾದರೂ ಅಚ್ಚರಿಗೊಳಿಸುವಂತಿದೆ. ಸೀತಾರಾಮ ಕೇಸರಿ ಇವರ ಕಡೆಯಿಂದ ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಸ್ಠಾನವನ್ನು ಪಡೆದುಕೊಂಡು, ಅಂದಿನಿಂದ ಇಂದಿನವರೆಗೆ, ಕಾಂಗ್ರೆಸ್ ಪಕ್ಷವನ್ನು ಪಾತಾಳದಿಂದ ಮೇಲಕ್ಕೆತ್ತಿ, ಅಧಿಕಾರರೂಢ ಪಕ್ಷವನ್ನಾಗಿ ಮಾಡಿದ ಕೀರ್ತಿ ಸೋನಿಯಾ ಗಾಂಧಿಯ ನಾಯಕತ್ವಕ್ಕೆ ಸಲ್ಲಬೇಕಾದುದೇ ಅಲ್ಲವೇ? ಈ ಹಿನ್ನೆಲೆಯಲ್ಲಿ ಸೋನಿಯಾ ಅಧಿಕಾರಗ್ರಹಣದ ಹನ್ನೆರಡು ವರುಷಗಳ ಆಗು- ಹೋಗುಗಳ ಸಿಂಹಾವಲೋಕನ ಇಲ್ಲಿದೆ.

ಅಧಿಕಾರವನ್ನು ಕಳೆದುಕೊಂಡು ಹತ್ತು ವರುಷಗಳ ಕಾಲ ಅಧಿಕಾರದ ಬರದಿಂದ ಬಳಲುತ್ತಿದ್ದ ಕಾಂಗ್ರೆಸ್ ಪಕ್ಷವನ್ನು, ಈ ದುಸ್ಠಿತಿಯಿಂದ ಪಾರು ಮಾಡಿ, ದಿಲ್ಲಿಯಲ್ಲಿ ಅಧಿಕಾರಗದ್ದುಗೆಗೆ ಏರಿಸುವುದರೊಡನೆ, ಈ ಪಕ್ಷ ಗತವೈಭವ ಪಡೆಯುವ ದಿಶೆಯಲ್ಲಿ ಸಾಗುವಂತೆ ಮಾಡಿದ ಸೋನಿಯಾ ಗಾಂಧಿ ಪರಿಶ್ರಮವು, ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವೆಂದೇ ಹೇಳಬೇಕು. ಕಾಂಗ್ರೆಸ್ ಪಕ್ಷವು ಸೀತಾರಾಮ್ ಕೇಸರಿ ನೇತೃತ್ವದಲ್ಲಿ ಕುಸಿಯುತ್ತಿದ್ದದನ್ನು ಗಮನಿಸಿದ, ಪಕ್ಷದ ಮುಖಂಡರು, ಪಕ್ಷವನ್ನು ನೆಹರೂ ಮನೆತನದ ಸೊಸೆ ಸೋನಿಯಾ ಗಾಂಧಿಗೆ ಒಪ್ಪಿಸುವುದೊಂದೇ ಪರಿಹಾರ ಮಾರ್ಗವೆಂದು ಭಾವಿಸಿ, ಈ ದಿಟ್ಟ ಹೆಜ್ಜೆಯನ್ನಿಟ್ಟಾಗ, ಕಾಂಗ್ರೆಸ್ ಪಕ್ಷವು ತನ್ನ ಭವಿತವ್ಯದ ಬಗ್ಗೆ ಕಗತ್ತಲಲ್ಲಿತ್ತು. 1999ರಲ್ಲಿ ಚುನಾವಣೆಗಳಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ, ಬಿಜೆಪಿಯು ವಿಜಯವನ್ನು ಸಾಧಿಸಿತ್ತು. ಈ ಸಂಧಿಕಾಲದಲ್ಲಿ ಮಂಡಲ್ ತಾಕಲಾಟದಿಂದ ಉತ್ತರ ಭಾರತದಲ್ಲಿ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಮತ ಬ್ಯಾಂಕುಗಳಾದ ಮುಸ್ಲಿಮರು, ಇತರ ಹಿಂದುಳಿದ ವರ್ಗಗಳು ಹಾಗೂ ದಲಿತರಲ್ಲಿ ತನ್ನ ಹಿಡಿತವನ್ನು ಕಳೆದುಕೊಂಡಿತ್ತು. ಅಷ್ಟೇ ಅಲ್ಲದೆ ಭಾರತದ ಇತರೆಡೆಗಳಲ್ಲಿ ಕೂಡ, ಕಾಂಗ್ರೆಸ್ ಪಕ್ಷವು ಅಧಿಕಾರವನ್ನು ಕಳೆದುಕೊಂಡಿತ್ತು. ಬಿಜೆಪಿ ಪಕ್ಷವು ಶುದ್ಧ ಆಡಳಿತವನ್ನು ನೀಡುವ ಭರವಸೆ ನೀಡಿದಾಗ, ಅದಕ್ಕೂ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರ ಹಾಗೂ ಹೊಂದಾಣಿಕೆಗಳ ರಾಜಕೀಯ, ಪ್ರಜೆಗಳಲ್ಲಿ ಭ್ರಮನಿರಶನವನ್ನು ತಂದಿತ್ತು.

ಇಂಥ ರಾಜಕೀಯ ಸ್ಥಿತಿಯಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಆಡಳಿತವನ್ನು ವಹಿಸಿಕೊಂಡಿದ್ದುದು. ಈ ಆಹ್ವಾನವು ಇಂದಿರಾ ಗಾಂಧಿ 1977ರಲ್ಲಿ ಅಧಿಕಾರವನ್ನು ಕಳೆದುಕೊಂಡ ಪರಿಸ್ಥಿತಿಗಿಂತಲೂ ತೀರ ವಿಭಿನ್ನವಾಗಿತ್ತಲ್ಲದೆ, ಹೆಚ್ಚು ಕ್ಲಿಷ್ಟವೂ ಆಗಿತ್ತು. ಏಕೆಂದರೆ ಅನೇಕ ಕಾಂಗ್ರೆಸ್ ಮುಖಂಡರೇ ಅಧಿಕಾರರೂಢ ಬಿಜೆಪಿಯನ್ನು ಸೇರಲು ಕಾರಣಗಳನ್ನು - ನೆಪಗಳನ್ನು ಹುಡುಕುತ್ತಿದ್ದ ಕಾಲ ಅದು. ಇದಲ್ಲದೆ ವಿದೇಶೀ ಮೂಲದ ಸೋನಿಯಾ ಗಾಂಧಿಯು ಕಾಂಗ್ರೆಸ್ ಪಕ್ಷವನ್ನು ಅಧಃಪತನದಿಂದ ರಕ್ಷಿಸ ಬಲ್ಲಳೇ? ಎಂಬ ಸಂಶಯವೂ ಇವರನ್ನು ಕಾಡುತ್ತಿತ್ತು. 1999ರ ಚುನಾವಣೆಗಳಲ್ಲಿ ಕಾಂಗ್ರೆಸ್ ಲೋಕಸಭೆಯಲ್ಲಿ ಕೇವಲ 114 ಸ್ಥಾನಗಳನ್ನು ಪಡೆದುಕೊಂಡಿತ್ತು; ಬಿಜೆಪಿಯು ಏಕಮೇವ ದೊಡ್ಡ ಪಕ್ಷವಾಗಿ ಗೆದ್ದು, ಕೇಂದ್ರದಲ್ಲಿ ಅಧಿಕಾರವನ್ನು ವಹಿಸಿಕೊಂಡಿತ್ತು.

ಕೇವಲ ಒಂದು ದಶಕದಲ್ಲೇ ಪರಿಸ್ಥಿತಿಯು ತಿರುವು-ಮುರುವು ಆಗಿತ್ತು. ಕಾಂಗ್ರೆಸ್ ಲೋಕಸಭೆಯಲ್ಲಿ ಏಕಮೇವ ಅತಿದೊಡ್ಡ ಪಕ್ಷವಾಗಿ ಗೆದ್ದಿತ್ತು. 2004ರ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಕೆಂದ್ರದಲ್ಲಿ ತನ್ನ ನೇತೃತ್ವದಲ್ಲಿ ಅಧಿಕಾರವನ್ನು ಪಡೆದುಕೊಳ್ಳುವ ಮಹಾನ್ ಸಾಧನೆಯನ್ನು ಮಾಡಿತ್ತು.

ಸೋನಿಯಾ ಗಾಂಧಿ ರೂಪಿಸಿದ್ದ "ಆಂ ಅದ್ಮಿ" ಘೋಷಣೆ, ಹಾಗೂ ಕೈಗೊಂಡ ಕೆಲ ಪ್ರಗತಿಪರ ಧೋರಣೆಗಳು ಹಾಗೂ ವಿವಿಧ ಪ್ರಾದೇಶಿಕ ಪಕ್ಷಗಳೊಡನೆ ಮಾಡಿಕೊಂಡ ಹೊಂದಾಣಿಕೆಗಳು, ಕಾಂಗ್ರೆಸ್ ಪಕ್ಷವು ಅಧಿಕಾರವನ್ನು ಪಡೆದುಕೊಳ್ಳಲು ಅನುಕೂಲ ಮಾಡಿಕೊಟ್ಟಿತ್ತು. ಇದಲ್ಲದೆ ಮುಸ್ಲಿಂ ಮತದಾರರ ವಿಶ್ವಾಸವನ್ನು ಮತ್ತೆ ಪಡೆದುಕೊಳ್ಳುವಲ್ಲಿ ಸೋನಿಯಾ ರೂಪಿಸಿದ್ದ ಕ್ರಮಗಳು ಹಾಗೂ ಉತ್ತರಭಾರತದಲ್ಲಿ ಮೇಲ್ಜಾತಿಗಳನ್ನು ಕಾಂಗ್ರೆಸ್ ಕಡೆಗೆ ಸೆಳೆದುಕೊಳ್ಳಲು ಕೈಗೊಂಡ ಕ್ರಮಗಳು ಕಾಂಗ್ರೆಸ್ ಪಕ್ಷಕ್ಕೆ ಹೊಸ ಬಲವನ್ನು ತಂದುಕೊಟ್ಟಿತ್ತು. 2008ರಲ್ಲಿ ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಗಳಲ್ಲಿ ಪಡೆದುಕೊಂಡಿರುವ ಮತಗಳನ್ನು ಪರಿಶೀಲಿಸಿದಾಗ, ಮುಂದಿನ ವಿಧಾನಸಭೆಯ ಚುನಾವಣೆಗಳಲ್ಲಿ ಅದು ಮತ್ತೆ ಅಧಿಕಾರವನ್ನು ಗಿಟ್ಟಿಸಿಕೊಳ್ಳಬಹುದೇನೋ ಎಂಬ ಸ್ಥಿತಿಯನ್ನು ನಿರ್ಮಿಸಿದೆ.

ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರವು ಸಾಲ ಮನ್ನಾ, ಗ್ರಾಮಿಣ ಭಾಗಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಗಳ ಜಾರಿ ಮುಂತಾದ ಕ್ರಮಗಳ ಪರಿಣಾಮವಾಗಿ, ಅದು ಇಂದಿರಾಗಾಂಧಿ ನೇತೃತ್ವದಲ್ಲಿ ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ದತಿ, ಗರೀಬೀ ಹಠಾವೋ ಮುಂತಾದ ಕ್ರಮಗಳಿಂದ ಪಡೆದುಕೊಂಡಿದ್ದ ಜನಪ್ರಿಯತೆಯನ್ನು ಮತ್ತೆ ಪಡೆದು ಕೊಳ್ಳಲಾರಂಭಿಸಿದಂತೆ ತೋರುತ್ತದೆ. ನಗರ ಯುವಕರಲ್ಲಿ ಹೊಸ ಭರವಸೆ ಮೂಡುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಕಾರ್ಯಕ್ರಮಗಳು ಕೂಡ ಕಾಂಗ್ರೆಸ್ ಪಕ್ಷಕ್ಕೆ ಹೊಸ ಭರವಸೆಯನ್ನು ಮೂಡಿಸುತ್ತಿದೆ ಎಂದೇ ಹೇಳಬೇಕು.

ರಾಜ್ಯ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ, ಅದು ರಾಜ್ಯ ಸಭೆಯ ಅನುಮೋದನೆ ಹೊಂದುವಂತೆ ಮಾಡಿರುವ ಕಾಂಗ್ರೆಸ್ ತಂತ್ರಗಾರಿಕೆಯು ಒಂದು ಮಹತ್ವದ ಹೆಜ್ಜೆಯೆಂದೇ ಹೇಳಬೇಕು. ಏಕೆಂದರೆ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನೆಲಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿಯು ರಾಜ್ಯ ಸಭೆಯಲ್ಲಿ ವಿರೋಧಿ ಪಕ್ಷಗಳಾದ ಬಿಜೆಪಿ ಹಾಗೂ ಎಡಪಕ್ಷಗಳ ಬೆಂಬಲ ಪಡೆದಿದ್ದು, ಒಂದು ಮಹತ್ವದ ಸಾಧನೆಯೆಂದೇ ಹೇಳಬೇಕು. ಆದರೆ ಈ ಮಸೂದೆಯನ್ನು ಯಾದವತ್ರಯರಾದ ಮುಲಾಯಮಸಿಂಗ್ ಯಾದವ್, ಲಾಲೂ ಪ್ರಸಾದ್ ಯಾದವ್ ಹಾಗೂ ಶರದ್ ಯಾದವ್ ವಿರೋಧಿಸುತ್ತಿರುವುದು, ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವಲ್ಲಿ ವಿಳಂಬಕ್ಕೆ ಕಾರಣವಾಗಿದೆ. ಮಹಿಳಾ ಮಸೂದೆಯನ್ನು ವಿರೋಧಿಸುತ್ತಿರುವ ಪಕ್ಷಗಳು ಮಹಿಳಾ ಮಸೂದೆಯಲ್ಲಿ ಆಂತರಿಕ ಮೀಸಲಾತಿಯನ್ನು ಮುಸ್ಲಿಂ ಅಲ್ಪಸಂಖ್ಯಾತರು, ಇತರ ಹಿಂದುಳಿದ ವರ್ಗದವರು ಹಾಗೂ ದಲಿತರಿಗೆ ನೀಡಬೇಕೆಂಬ ಪಟ್ಟು ಹಿಡಿದಿವೆ. ಈ ಕುರಿತು ಕೇಂದ್ರ ವಿತ್ತ ಮಂತ್ರಿಗಳಾದ ಪ್ರಣಬ್ ಮುಖರ್ಜಿ ಇವರಿಗೆ ಈ ವಿರೋಧಿ ಮುಖಂಡರೊಡನೆ ಮಾತುಕತೆ ನಡೆಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಬಹುಶಃ ಇದರಲ್ಲಿ ಕೆಲವು ಹೊಂದಾಣಿಕೆಗಳನ್ನು ಮಾಡಿ, ಏಪ್ರಿಲ್ 12ರ ನಂತರ ಈ ಮಸೂದೆಯನ್ನು ಮಂಡಿಸುವ ಸೂಚನೆಗಳು ಕಂಡುಬರುತ್ತಿವೆ. ಇದು ಏನೇ ಇರಲಿ, ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಭದ್ರಗೊಳ್ಳುವ ದಿಕ್ಕಿನಲ್ಲಿ ಮುನ್ನಡೆದಿರುವುದು ಗಮನಾರ್ಹವಾಗಿದೆ.

ಈ ಹನ್ನೆರಡು ವರುಷಗಳಲ್ಲಿ ಕಾಂಗ್ರೆಸ್ ಪಕ್ಷವು ಸೋನಿಯಾ ಗಾಂಧಿ ನೇತೃತ್ವದಲ್ಲಿ ಮುನ್ನಡೆಯುತ್ತಿರುವುದನ್ನು ವಿಶ್ಲೇಷಿಸಿದಾಗ, ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ಕೇಂದ್ರದಲ್ಲಿ ತನ್ನದೇ ಆದ ಸ್ವಬಲದಿಂದ ಅಧಿಕಾರವನ್ನು ಪಡೆದುಕೊಳ್ಳುವ ಹುನ್ನಾರವನ್ನು ಅದು ರೂಪಿಸುತ್ತಿರುವುದು ಸ್ಪಷ್ಟವಾಗಿದೆ. ಇದು ಫಲಿಸುವುದೆ? ಎಂಬುದೇ ಯಕ್ಷ ಪ್ರಶ್ನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+