ನಿಂಬೆಗಿಡದಲ್ಲಿ ಅರಳಿದ ಕೆಂಡಸಂಪಿಗೆ ಹೂ ಕಣ್ಮರೆ?

* ಸುಶ್ರುತ ದೊಡ್ಡೇರಿ, ಬೆಂಗಳೂರು
ಸಂಪಿಗೆಯ ಪರಿಮಳ ಆಘ್ರಾಣಿಸಿದವರಿಗೇ ಗೊತ್ತು. ಕಾಡ ನಡುವಿರಲಿ, ಬಟಾಬಯಲಿರಲಿ, ಅಲ್ಲೊಂದು ಸಂಪಿಗೆಯ ಮರವಿದೆಯೆಂದರೆ ಮೈಲುಗಳವರೆಗೆ ಘಮದ ಪ್ರಸರಣ. ಜಾಡು ಹಿಡಿದೇ ಸಾಗಬಹುದು ಮರದ ಬುಡಕೆ.
ಈ ಸಂಪಿಗೆಯೂ ಹಾಗೇ: ಇದಕ್ಕೆ ಕನ್ನಡದ ಬೆಡಗು ಮತ್ತು ಪರಿಮಳ. ಕಥೆಗಾರ ಅಬ್ದುಲ್ ರಶೀದ್ ಸಂಪಾದಕತ್ವದ ಕೆಂಡಸಂಪಿಗೆ ವೆಬ್ಸೈಟ್, ಇರುವ ಸಾವಿರಾರು ಕನ್ನಡ ಬ್ಲಾಗು, ವೆಬ್ಸೈಟುಗಳ ನಡುವೆ ವಿಶಿಷ್ಟವಾಗಿ ಹರಡಿ ನಿಂತು ಸುವಾಸನೆ ಬೀರುತ್ತಿತ್ತು. ಅಕ್ಷರ ಪ್ರೇಮಿಗಳನ್ನೆಲ್ಲ ಬಳಿಗೆ ಕರೆಯುತ್ತಿತ್ತು.
ಮೈಸೂರ್ ಪೋಸ್ಟ್ ಎಂಬ ಬ್ಲಾಗಿನಲ್ಲಿ ಬರೆದುಕೊಂಡು ಬರುತ್ತಿದ್ದ ಕಥೆಗಾರ ಅಬ್ದುಲ್ ರಶೀದ್, ಇಂಥದ್ದೊಂದು ಸೈಟ್ ಶುರುಮಾಡುತ್ತಿರುವ ಸುದ್ದಿ ಬಂದಾಗ ಎಲ್ಲರಿಗೂ ಸಹಜವಾಗಿಯೇ ಕುತೂಹಲ ಉಂಟಾಗಿತ್ತು. ಹೇಗಿರಬಹುದು? ಏನಿರಬಹುದು ವಿಶೇಷ? ಉಳಿದೆಲ್ಲ ಸೈಟುಗಳಿಗಿಂತ ಭಿನ್ನವಾಗಿರಬಹುದೇ? -ಎಂಬೆಲ್ಲ ಕುತೂಹಲದ ಪ್ರಶ್ನೆಗಳಿಗೆ ಉತ್ತರವೆಂಬಂತೆ 2007ರ ಡಿಸೆಂಬರ್ 31ರಂದು ಚಿಗುರಿ ನಿಂತೇಬಿಟ್ಟಿತು ಕೆಂಡಸಂಪಿಗೆ: "ಆಹಾ! ಬರಲಿದೆ ಕೆಂಡಸಂಪಿಗೆ" ಎಂಬ ಶೀರ್ಷಿಕೆ ಹೊತ್ತು ಶುರುವಾದ ಸೈಟ್ ನೋಡಿ ಎಲ್ಲರಿಗೂ ಖುಶಿ. "ಬರಲಿದೆ" ಎಂಬಾಗಲೇ ಇಷ್ಟಿರುವಾಗ ಬಂದೇಬಿಟ್ಟಮೇಲೆ ಹೇಗಿರಬಹುದು ಎಂಬ ತುಡಿತ.
ಅದಾಗಿ ಮೂರು ತಿಂಗಳ ನಂತರ ಕೆಂಡಸಂಪಿಗೆ ಪೂರ್ಣಪ್ರಮಾಣದಲ್ಲಿ ಚಾಲನೆಗೆ ಬಂತು. ಸಂಸ್ಕೃತಿ, ಸರಣಿ, ವ್ಯಕ್ತಿ, ವಿಶೇಷ ಅಂತೆಲ್ಲ ಕವಲುಗಳನ್ನು ಹೊಂದಿ, ರಂಗುರಂಗಿನೊಂದಿಗೆ ಅರಳಿ ನಿಂತಿತು. ದಿನಕ್ಕೊಂದು ಕವಿತೆ, ಪ್ರತಿ ಭಾನುವಾರ ಒಂದು ಕತೆ, ಮಕ್ಕಳ ಪ್ರತಿಭೆಗೊಂದು ವಿಭಾಗ, ಕಾಲೇಜು ಸಂಪಿಗೆ, ಕನ್ನಡ ಬ್ಲಾಗುಗಳ ಪರಿಚಯ, ವಿಶ್ವದಲ್ಲಾದ ಆಸಕ್ತಿಕರ ಘಟನೆಯೆಡೆಗೊಂದು ಬೆಳಕಿಂಡಿ... ಹೀಗೆ ಎಲ್ಲ ತರಹದ ಆಕರ್ಷಣೆಗಳೂ ಇಲ್ಲಿ ಮೈತಳೆದು ನಿಂತವು. ಅತಿಥಿ ಸಂಪಾದಕರನ್ನು ನೇಮಿಸಿ ಒಂದು ವಾರ ಅವರಿಂದ ಸೈಟ್ ಉಸ್ತುವಾರಿ ಮಾಡಿಸುವ ಪ್ರಯೋಗವನ್ನೂ ಕೆಂಡಸಂಪಿಗೆ ಮಾಡಿಸಿತು. ಧಾರಾವಾಹಿಗಳು, ಕಾದಂಬರಿಯ ಅಧ್ಯಾಯಗಳು, ಪ್ರವಾಸ ಕಥನಗಳು ಇಲ್ಲಿ ಜಾಗ ಕಂಡವು.
ಕನ್ನಡದ ಹಳೆ ಹೊಸ ಬರಹಗಾರರಿಂದೆಲ್ಲ ಕೆಂಡಸಂಪಿಗೆ ಬರೆಸಿತು. ಇಂಟರ್ನೆಟ್ಟಿನ ಪರಿಚಯವೇ ಇಲ್ಲವೇನೋ ಎಂದು ನಾವಂದುಕೊಂಡಿದ್ದವರೆಲ್ಲ ಕೆಂಡಸಂಪಿಗೆಯಲ್ಲಿ ಕಾಣಿಸಿಕೊಳ್ಳತೊಡಗಿದರು. ಕೆ.ಟಿ. ಗಟ್ಟಿ, ಕುಂವೀ, ಚಿತ್ತಾಲ, ದೇವನೂರು, ವೈದೇಹಿ, ಕಿ.ರಂ., ಮೊಗಳ್ಳಿ... ಹೀಗೆ ಹಿಂದೆಲ್ಲೂ ಅಂತರ್ಜಾಲ ಲೋಕದಲ್ಲಿ ಕಂಡಿಲ್ಲದ ಕನ್ನಡ ಲೇಖಕರು ಇಲ್ಲಿ ಸಿಗುವಂತಾದರು. ಅಚ್ಚರಿಯೆಂಬಂತೆ, ಬರೆಯುತ್ತಾರೆ ಎಂದೇ ಗೊತ್ತಿಲ್ಲದ ರಾಜೇಶ್ವರಿ ತೇಜಸ್ವಿ ಇಲ್ಲಿ "ತೇಜಸ್ವಿ ನೆನಪು"ಗಳನ್ನು ಹಂಚಿಕೊಂಡರು. ಇದ್ದಕ್ಕಿದ್ದಂತೆ ಕೃಪಾಕರ-ಸೇನಾನಿ ಬರೆದುಬಿಟ್ಟರು. ಅನಂತಮೂರ್ತಿಗಳು ತಮ್ಮ ಅನುವಾದದ ಬ್ರೆಕ್ಟ್ ಕವಿತೆಗಳನ್ನು ಮೊದಲು ಅನಾವರಣಗೊಳಿಸಿದ್ದೂ ಇಲ್ಲೇ.
ರಶೀದರ ಶ್ರದ್ಧೆಯ ಸಂಪಾದಕತ್ವದಲ್ಲಿ ಕೆಂಡಸಂಪಿಗೆ ಅದೆಷ್ಟು ಚೆನ್ನಾಗಿ ಮೂಡಿಬರುತ್ತಿತ್ತೆಂದರೆ, ಪ್ರತಿದಿನ ಅಲ್ಲಿಗೊಂದು ವಿಸಿಟ್ ಕೊಡಲಿಲ್ಲ ಎಂದರೆ ಏನೋ ಮಿಸ್ ಮಾಡಿಕೊಂಡಂತೆನಿಸುತ್ತಿತ್ತು. ಜಾಹೀರಾತುಗಳಿಲ್ಲದೇ ಅದು ಹೇಗೆ ತಾನೆ ನಡೆಸುತ್ತಿದ್ದಾರೆ ಈ ವೆಬ್ಸೈಟು ಎಂಬ ಕುತೂಹಲ ಮಾತ್ರ ಹಾಗೇ ಉಳಿದಿತ್ತು.
ಈಗ ಕೆಂಡಸಂಪಿಗೆ ನಿಂತಿದೆ. "ಇನ್ನು ಇಲ್ಲಿ ಯಾವುದೇ ಬರಹ ಪ್ರಕಟವಾಗುವುದಿಲ್ಲ" ಎಂಬ ಸಂಪಾದಕರ ಷರಾ ಕಣ್ಣಿಗೆ ರಾಚುವಂತಿದೆ. ಕನ್ನಡ ಅಂತರ್ಜಾಲ ಲೋಕದಲ್ಲಿ ತಲ್ಲಣವುಂಟುಮಾಡುವಂತಹ ಅನೇಕ ಬದಲಾವಣೆಗಳಾಗುತ್ತಿರುವ ದಿನಗಳು ಇವು... ಇಂತಹ ಸಂದರ್ಭದಲ್ಲಿ ಕೆಂಡಸಂಪಿಗೆಯಂತಹ ಸದಭಿರುಚಿಯ ತಾಣ ನಿಂತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಕನ್ನಡ ಅಂತರ್ಜಾಲ ವೃಕ್ಷದಿಂದ ತೊಟ್ಟು ಕಳಚಿ ಬಿದ್ದಂತೆ ತೋರುತ್ತಿರುವ ಕೆಂಡಸಂಪಿಗೆಯನ್ನು ನೋಡಲು ಖೇದವೆನಿಸುತ್ತಿದೆ. ಬಿದ್ದಿರುವ ಹೂವನ್ನೇ ನೋಡುತ್ತ, ಮತ್ತೆ ಬೀಜ ಮೊಳೆತು ಚಿಗುರಲಿ ಎಂಬುದಷ್ಟೇ ನನ್ನ ಮತ್ತು ನನ್ನಂಥವರ ನಿರೀಕ್ಷೆ.
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ












Click it and Unblock the Notifications