ಬಿಜೆಪಿಯನ್ನು ಮುನ್ನಡೆಸುವ ಹೊಣೆ ಯಾರ ಮೇಲೆ?
ಬಿಜೆಪಿ ಸಂಘಟನೆಯ ಕೊರತೆ ಎಂದು ಕಂಡಿರಲಿಲ್ಲ, ಉತ್ಸಾಹ ಎಂದೂ ಕುಂದಿರಲಿಲ್ಲ. ಪಕ್ಷದ ಹಿರಿಯರು ಬಿಜೆಪಿಯನ್ನು ಭಾರತಿಯ ಜಿನ್ನಾ ಪಾರ್ಟಿ ಮಾಡಲು ಮುಂದಾಗಿದ್ದಾರೆ! ಇನ್ನು ಎರಡನೇ ವರ್ಗದ ನಾಯಕರಿಗೆ ಹಿಂದುತ್ವವೋ ಅಥವಾ ಸೆಕ್ಯುಲರೋ ಎಂದು ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡುತ್ತಾ ಮಂಕಾಗಿದ್ದಾರೆ. ಇನ್ನು ಹಿಂದೂ ಸಂಘಟನೆಗಳು ಈ ಬದಲಾವಣೆಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಗೊತ್ತಾಗದೆ ಈ ಬಿಕ್ಕಟಿಗೆ ತುಪ್ಪಸುರಿದು ತನಗೇನು ಸಂಬಂಧವಿಲ್ಲದಂತೆ ಸುಮ್ಮನೆ ಕೂತಿವೆ. ಅಡ್ವಾಣಿಯವರು ತೆರೆಮನೆ ಸರಿಯುವ ಮುಂಚೆ ಅವರೇ ಕಟ್ಟಿದ ಪಕ್ಷಕ್ಕೆ ಒಬ್ಬ ವಾರಸುದಾರನನ್ನು ಕೂರಿಸುವ ಅನಿವಾರ್ಯ. ಜಸ್ವಂತ್ ಸಿಂಗ್ ಹೊರಬಿದ್ದ ನಂತರ ಮುಂದೆ ಯಾರು ಎನ್ನುವ ಪ್ರಶ್ನೆ ಸ್ವಲ್ಪ ಸುಲಭವಾಯ್ತು. ಮುರಳಿ ಮನೋಹರ್ ಜೋಷಿ, ನರೇಂದ್ರ ಮೋದಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಈ ನಾಲ್ವರ ನಡುವೆ ಪೈಪೋಟಿ ಇದೆ. ಆದರೆ ಯಾರಿಗೆ ಆ ಹೊಣೆ ನೀಡುತ್ತಾರೆಂಬುದು ಇನ್ನು ಪ್ರಶ್ನೆಯಾಗೇ ಉಳಿದಿದೆ. ರಾಜನಾಥ್ ಸಿಂಗ್ ಅವರ ಅಧಿಕಾರಾವಧಿ ಡಿಸೆಂಬರ್ ನಲ್ಲಿ ಪೂರ್ಣವಾಗಲಿದ್ದು ಅದರ ಹೊಣೆ ಹಾಗು ಮುಂದಿನ ಪಕ್ಷದ ನಾಯಕ ಯಾರೆಂಬುದು ಅಡ್ವಾಣಿ ಮೇಲಿರುವ ದೊಡ್ಡ ಜವಾಬ್ದಾರಿ.
ಡಾ.ಮುರಳಿ ಮನೋಹರ್ ಜೋಷಿ ಪಕ್ಷದಲ್ಲಿ ಹಿರಿಯರ ಸಾಲಿನವರು. ಆರ್.ಎಸ್.ಎಸ್.ನ ಕಟ್ಟಾಳು. ಈಗ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 60 ವರ್ಷದಿಂದ ಆರ್.ಎಸ್.ಎಸ್ ನಂಟನ್ನು ಇಟ್ಟುಕೊಂಡಿದ್ದಾರೆ. ವಾಜಪೇಯಿ ಸರ್ಕಾರದಲ್ಲಿ ಮೊದಲಿಗೆ ಕೇಂದ್ರ ಗೃಹ ಸಚಿವರಾಗಿ(13 ದಿನಗಳ ಸರ್ಕಾರದಲ್ಲಿ) ತದನಂತರ ಮಾನವ ಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದರು. ಆದರೆ ಈಗ ಜೋಷಿಯವರಿಗೆ ಯುವಕರನ್ನು ಸೆಳೆಯುವ ಶಕ್ತಿ ಇಲ್ಲ.
ಸುಷ್ಮಾ ಸ್ವರಾಜ್, ಮಧ್ಯ ಪ್ರದೇಶದ ವಿದಿಶಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಗಿದ್ದಾರೆ. ಉತ್ತಮ ವಾಕ್ಪಟು. ವಾಜಪೇಯಿ ಸರ್ಕಾರದಲ್ಲಿ ವಾರ್ತಾ ಮತ್ತು ಪ್ರಸಾರ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಆರ್.ಎಸ್.ಎಸ್.ನಿಂದ ಬಂದಿಲ್ಲವಾದರು ಅಡ್ವಾಣಿಯವರಿಗೆ ಆಪ್ತರು. ಮಾಸ್ ಲೀಡರ್ ಅಲ್ಲದಿದ್ದರೂ ಕ್ಲಾಸ್ ಲೀಡರ್ ಎಂದು ಹೆಸರು ಮಾಡಿದಾರೆ. ಇಂದಿರಾ ಗಾಂಧಿಯ ನಂತರ ಪ್ರಧಾನಿ ಹುದ್ದೆಗೆ ಮೊದಲ ಸ್ತ್ರೀಅಭ್ಯರ್ಥಿಯಾಗುವ ಅವಕಾಶವಿದೆ.
ನರೇಂದ್ರ ಮೋದಿ, ಬಿಜೆಪಿಯ ಮಾಸ್ ನಾಯಕ. ಹಿಂದುತ್ವದ Symbol. ಗುಜರಾತ್ ನ ಜನಪ್ರಿಯ ಮುಖ್ಯಮಂತ್ರಿ. ಅಡ್ವಾಣಿಯವರ ಶಿಷ್ಯ ಮೇಲಾಗಿ ಅವರಿಗೆ ಅರ್.ಎಸ್.ಎಸ್ ಬೆಂಬಲವಿದೆ. ಆದರೆ ಇವರ ದೌರ್ಬಲ್ಯವೆಂದರೆ ಎಲ್ಲವರ್ಗದ ಜನರು ಇವರನ್ನು ಒಪ್ಪುದಿಲ್ಲ. ಗೋಧ್ರಾ, fake ಎನ್ ಕೌಂಟರ್ ನಿಂದಾಗಿ ಅಲ್ಪಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೋದಿಯ ಪ್ರಭಾವ ಗುಜರಾತ್ ನಲ್ಲಿ ಮಾತ್ರ ಸೀಮಿತ ಎಂಬುದು ಕಳೆದ ಚುನಾವಣೆಯೆಲ್ಲಿ ಸಾಬೀತಾಗಿದೆ. ಇವರನ್ನು ಪ್ರಧಾನಿ ಅಭ್ಯರ್ಥಿ ಮಾಡಿದರೆ ಕಡಿಮೆ ಎಂದರು 200ಸೀಟುಗಳು ಜಯಿಸಲೇ ಬೇಕಾದ ಅನಿವಾರ್ಯ. ಇಲ್ಲವಾದಲ್ಲಿ ಎನ್.ಡಿ.ಎ. ಮೈತ್ರಿಗೆ ಅನ್ಯಪಕ್ಷಗಳು ಹಸ್ತ ನೀಡಲು ಅಂಜುತ್ತವೆ. ಕಾರಣ ಎಲ್ಲಿ ಅಲ್ಪ ಸಂಖ್ಯಾತರ ವೋಟು ತಪ್ಪಿಹೊಗುತ್ತದೆನ್ನುವ ಭಯ. ಗುಜರಾತ್ ಮಾದರಿ ಕೇಂದ್ರದಲ್ಲಿ ಅಧಿಕಾರ ಮಾಡುವುದು ಕಷ್ಟ. ಆದರೆ ರಾಹುಲ್ ಎದುರು ಸಡ್ದೆ ಹೊಡೆದು ನಿಲ್ಲಬಲ್ಲ ಏಕೈಕ ವ್ಯಕ್ತಿ.
ಅರುಣ್ ಜೈಟ್ಲಿ , ಕಾರ್ಯತಂತ್ರ ರೂಪಿಸುವುದರಲ್ಲಿ ಎತ್ತಿದ ಕೈ. ಗುಜರಾತ್, ಕರ್ನಾಟಕ, ಬಿಹಾರದಲ್ಲಿ ಇವರ ಕೈಚಳಕ ಸಾಬೀತಾಗಿದೆ. ಜನಪ್ರಿಯ ಕ್ಲಾಸ್ ಲೀಡರ್, ಅಡ್ವಾಣಿಯವರ ಆಶಿರ್ವಾದವೂ ಸಿಗಬಹುದು. ಅರ್.ಎಸ್.ಎಸ್. ಸ್ವಲ್ಪ ಮಟ್ಟಿಗೆ ಬೆಂಬಲಿಸಬಹುದು. ವಾಜಪೇಯಿ ಸರ್ಕಾರದಲ್ಲಿ ವಾಣಿಜ್ಯ, ಕಾನೂನು, ವಾರ್ತಾ ಮತ್ತು ಪ್ರಸಾರ ಹೀಗೆ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಆದರೆ ಉತ್ತರ ಭಾರತಕ್ಕೆ ಹಾಗು educated ವರ್ಗಕ್ಕೆ ಮಾತ್ರ ಇವರ ಜನಪ್ರಿಯರಾಗಿದ್ದಾರೆ ಎಂಬುದು ಇವರ ವೀಕ್ನೆಸ್. ಬಹುಷಃ ಎಲ್ಲ ಮೈತ್ರಿಗಳನ್ನು ಸೆಳೆಯುವ ವರ್ಚಸ್ಸು ಇವರಿಗಿದೆ.
ಈ ಎಲ್ಲ ನಾಯಕರಲ್ಲೂ ನಾಯಕ ಪ್ರಭಾವಶಾಲಿಗಳಾದರು ಸರ್ಕಾರ ನಡೆಸಲು ಆ ಮ್ಯಾಜಿಕಲ್ ನಂಬರ್ 272ಬೇಕೇಬೇಕು. ವಾಜಪೇಯಿ ಹಾಗು ಅಡ್ವಾಣಿಯಂತೆ ಶಾಂತಿ ಹಾಗು ಕ್ರಾಂತಿಯ ಸಮಾಗಮವಾಗುವಂಥ ಇಬ್ಬರು ನಾಯಕರನ್ನು ಆಯ್ಕೆ ಮಾಡುವ ಹೊಣೆ ಅಡ್ವಾಣಿಯವರ ಮೇಲಿದೆ. ಬದಲಾಗುತಿರುವ ಸಮಾಜದಲ್ಲಿ ಸಿದ್ಧಾಂತಗಳನ್ನೂ ಸಣ್ಣ ಸಣ್ಣ ತಿದ್ದುಪಡಿ ಮಾಡುವುದರಲ್ಲಿ ಏನು ತಪ್ಪಿಲ್ಲ. ಏಕೆಂದರೆ ಅಧಿಕಾರಕ್ಕೆ ಬರಲಿ ಬಿಡಲಿ ವಿರೋಧ ಪಕ್ಷವು ಯಾಮಾರಿದರೆ ಅಧಿಕಾರದಲ್ಲಿರುವ ಪಕ್ಷ ದುರಾಡಳಿತ ನಡೆಸುವ ಅಪಾಯವಿದೆ. ಬಹುಷಃ ಕಳೆದಸಲ ವಿರೋಧದಪಕ್ಷದಲ್ಲಿದ್ದು ಒಳ್ಳೆಯ ಕೆಲಸಮಾಡಿದರೂ ಬಿಜೆಪಿ ಚುನಾವಣೆಯ ವೇಳೆ ಅದನ್ನು ಜನರ ಮುಂದೆ ಬಿಂಬಿಸುವಲ್ಲಿ ಸಂಪೂರ್ಣ ವಿಫಲವಾಯಿತು. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನರಸಿಂಹ ರಾವ್ ಹೀಗೆ ಎಲ್ಲರ ಅವಧಿಯಲ್ಲೂ ಹೆಸರು ವಾಸಿಯಾದ ಪಕ್ಷ ಇಂದು ಭಾರತೀಯ ಬತ್ತುತ್ತಿರುವ ಪಕ್ಷವಾಗುತ್ತಿದೆ. ಅಭ್ಯರ್ಥಿಯನ್ನು ಇಗಲೇ ಆಯ್ಕೆ ಮಾಡಿದ್ದರಿಂದ ಪಕ್ಷಕ್ಕೂ ಹಾಗು ದೇಶಕ್ಕೂ ಒಳ್ಳೇದು. ಆಯ್ಕೆ ಆದ ವ್ಯಕ್ತಿ ಬರುವ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ದಾರಿ ಸುಲಭವಾದೀತು.