ಬುದ್ಧಿಜೀವಿಗಳೋ ಲದ್ದಿಜೀವಿಗಳೋ?
‘‘ಆವರಣ’’ದಲ್ಲಿನ ಸಾಲುಗಳನ್ನು ಗಮನಿಸಿದರೆ ಭೈರಪ್ಪನವರೂ ಸಹಾ ಅನ್ವರ್ ಶೇಖ್ ಅವರ ಬರಹಗಳಲ್ಲಿನ ವರ್ಣನೆಗಳನ್ನೇ ಉಪಯೋಗಿಸಿಕೊಂಡಿದ್ದಾರೆ ಎಂದು ನನಗನಿಸುತ್ತದೆ. ಇರಲಿ, ಅದು ಬೇರೆ ವಿಷಯ. ಹೀಗೆ ಲೈಂಗಿಕ ಆಮಿಷವನ್ನೊಡ್ಡಿ ಮುಸ್ಲಿಮರಲ್ಲದವರನ್ನು ಕೊಲ್ಲಲು ಪ್ರಚೋದಿಸುವ ಅಗತ್ಯ ಸಾವಿರ ವರ್ಷಗಳ ಹಿಂದೆ ಇತ್ತು. ತನ್ನ ಕೊರೆಶ್ ಬುಡಕಟ್ಟು ಇಡೀ ಅರೇಬಿಯಾದ ಮೇಲೆ ಪ್ರಭುತ್ವ ಸ್ಥಾಪಿಸಲು ಅಗತ್ಯವಾದ ಸೈನ್ಯವನ್ನು ಕಟ್ಟಬೇಕಾದರೆ ಸೈನಿಕರಿಗೆ ಇಂತಹ ಪ್ರಲೋಭನೆಗಳನ್ನೊಡ್ಡುವ ಅಗತ್ಯವನ್ನು ಪೈಗಂಬರರು ಮನಗಂಡಿದ್ದರು. ಅಷ್ಟೇ ಅಲ್ಲ, ಅದನ್ನು ಆಚರಣೆಗೆ ತಂದರೂ ಕೂಡಾ.
ಯುದ್ಧದಲ್ಲಿ ಸೆರೆ ಸಿಕ್ಕಿದ ಹೆಂಗಸರನ್ನು ತಮ್ಮ ಸೈನಿಕರಿಗೆ ಹಂಚುತ್ತಿದ್ದರು. ಒಂದು ಸಂದರ್ಭದಲ್ಲಂತೂ ಸೆರೆ ಸಿಕ್ಕಿದ ಮೂವರು ಸುಂದರಿಯರನ್ನು ತಮ್ಮ ಅಳಿಯಂದಿರಾದ ಆಲಿ ಮತ್ತು ಉಸ್ಮಾನ್ ಹಾಗೂ ತಮ್ಮ ಮಾವ ಒಮರ್ಗೆ ಒಪ್ಪಿಸಿದರು. ಪೈಗಂಬರರ ಈ ಕೃತ್ಯದ ಬಗ್ಗೆ ನಾವು ಅಸಹ್ಯ ಪಡಬೇಕಾಗಿಲ್ಲ. ಪ್ರಾಚೀನ ಮಧ್ಯಏಶಿಯಾದಲ್ಲಿ ಇದು ತೀರಾ ಸಾಮಾನ್ಯವಾದ ಆಚರಣೆಯಾಗಿತ್ತು. ಪೈಗಂಬರರು ಅದನ್ನು ಮುಂದುವರೆಸಿದರಷ್ಟೇ.
ಇಡೀ ಅರೇಬಿಯಾದಲ್ಲಿ ತಮ್ಮ ಧರ್ಮವನ್ನು ಸ್ಥಾಪಿಸಿದ ನಂತರ ಇಸ್ಲಾಮನ್ನು ಇಡೀ ಜಗತ್ತಿಗೆ ಹರಡುವ ಉದ್ದೇಶದಿಂದಾಗಿ ಜಿಹಾದ್ ಪರಿಕಲ್ಪನೆಯನ್ನು ರೂಪಿಸಿದರು. ಧರ್ಮಕ್ಕಾಗಿ ಪ್ರಾಣ ಕೊಡಬಲ್ಲಂತಹ ಸೈನಿಕರನ್ನು ತಯಾರು ಮಾಡಲು ಸ್ವರ್ಗ ಮತ್ತಲ್ಲಿ ದೊರೆಯುವ ವೈಭೋಗಗಳ ಚಿತ್ರಣ ನೀಡಿದರು. ಅದೆಲ್ಲವೂ ಆ ಕಾಲದ ಅಗತ್ಯವಾಗಿತ್ತು. ಹಾಗೆ ಮಾಡದಿದ್ದರೆ ಇಸ್ಲಾಂ ಅರೇಬಿಯಾದಲ್ಲೂ ಗಟ್ಟಿಯಾಗಿ ನೆಲೆಯೂರುತ್ತಿರಲಿಲ್ಲ.
ಸೆಕ್ಯೂಲರಿಸಂ ಅಂದ್ರೆ ಇದಾ?
ಆದರೀಗ ಕಾಲ ಬದಲಾಗಿದೆ. ಇಸ್ಲಾಂನ ಈ ಪರಿಕಲ್ಪನೆಗಳು ಈ ಆಧುನಿಕ ಯುಗಕ್ಕೆ ಹೊಂದಿಕೆಯಾಗುವುದಿಲ್ಲ. ಅವುಗಳ ಆಚರಣೆಯಿಂದ ದೇಶದೇಶಗಳ ನಡುವೆ ವೈಷಮ್ಯ ಹಾಗೂ ಕೊನೆಯಿಲ್ಲದ ರಕ್ತಪಾತಗಳು ಮುಂದುವರಿಯುತ್ತಲೇ ಇರುತ್ತವೆ. ಇದನ್ನು ನಮ್ಮ ವಿಚಾರವಾದಿಗಳು ಅರಿಯುವ ಅಗತ್ಯವಿದೆ.
ಹಿಂದೂಧರ್ಮದ ಹುಳುಕುಗಳನ್ನು ಯಾವ ಹಿಂಜರಿಕೆಯೂ ಇಲ್ಲದೇ ಬಹಿರಂಗವಾಗಿ ತೆಗಳುವ ಈ ‘‘ಸೆಕ್ಯೂಲರಿಸ್ಟ್’’ಗಳು ಇಸ್ಲಾಮಿನ ಹುಳುಕುಗಳ ಬಗ್ಗೆ ಯಾಕೆ ಮೌನವಾಗುತ್ತಾರೆ? ಮೌನವಾಗಿರಿ ಎಂದು ಇತರರಿಗೂ ಯಾಕೆ ಹೇಳುತ್ತಾರೆ? ಸೆಕ್ಯೂಲರಿಸಂ ಅಂದರೆ ಹಿಂದೂಧರ್ಮವನ್ನು ತೆಗಳುವುದು ಮಾತ್ರ ಎಂದು ಅರ್ಥವೇ? ಅಥವಾ ಟೀಕಿಸುವ ಸ್ವಾತಂತ್ರ್ಯವನ್ನು ತನ್ನವರಿಗೆ ನೀಡಿರುವುದೇ ಹಿಂದೂಧರ್ಮದ ತಪ್ಪೇ? ಈ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು ಹಿಂದೂಧರ್ಮವನ್ನು ತೆಗಳಿ ಸುಲಭವಾಗಿ ‘‘ವಿಚಾರವಾದಿ’’ ಎಂಬ ಬಿರುದು ಗಳಿಸಿ ಜನರಿಂದ ಗೌರವ, ಸಂಘಸಂಸ್ಥೆಗಳಿಂದ ಬಿರುದುಬಾವಲಿ, ಹಾಗೂ ಸರಕಾರದಿಂದ ಪದವಿ ಸವಲತ್ತುಗಳನ್ನು ಪಡೆದುಕೊಳ್ಳುವ ಹುನ್ನಾರ ನಮ್ಮ ‘‘ಎಡಪಂಥೀಯ’’ ಸೆಕ್ಯೂಲರಿಸ್ಟರಿಗಿದೆಯೇ?
ಇಸ್ಲಾಮನ್ನೂ ತೆಗಳಿದರೆ ಯಾವನಾದರೊಬ್ಬ ಮೌಲ್ವಿ ತಮ್ಮ ಮೇಲೆ ‘‘ಫತ್ವಾ’’ ಹೊರಡಿಸಿ ತಮ್ಮ ಬಲಿ ಕೇಳಬಹುದೆಂಬ ಭಯವೇ ಇವರು ಇಸ್ಲಾಂನ ಬಗ್ಗೆ ಮೌನವಾಗಿರಲು ಕಾರಣವೇ? ಇವರ ಸೆಕ್ಯೂಲರಿಸಂ ಹೇಡಿತನದಿಂದ ಪ್ರೇರಿತವಾದ ಒಂದು ಅವಕಾಶವಾದವೇ? ಹಿಂದೂಧರ್ಮ ನೀಡುವ ಸ್ವಾತಂತ್ರ್ಯ, ಇಸ್ಲಾಂ ಒಡ್ಡುವ ಬೆದರಿಕೆ- ಎರಡನ್ನೂ ವಿಶ್ಲೇಷಿಸಿ ಅದಕ್ಕೆ ತಕ್ಕಂತೆ ತಮ್ಮ ವಿಚಾರಗಳನ್ನು ರೂಪಿಸಿಕೊಳ್ಳುವ ಆಷಾಡಭೂತಿಗಳೇ ನಮ್ಮ ಬುದ್ಧಿಜೀವಿಗಳು, ಲದ್ದಿಜೀವಿಗಳು? ಹಾಗೇ ಕಾಣುತ್ತಿದೆ.
ನನ್ನ ಅಭಿಪ್ರಾಯದಲ್ಲಿ ಹಿಂದೂಧರ್ಮ ಹಾಗೂ ಇಸ್ಲಾಂ ಎರಡೂ ಈ ನಾಡಿನ ಪ್ರಮುಖ ಧರ್ಮಗಳು; ಹಿಂದೂಧರ್ಮ ಹೇಗೆ ಮಾನವೀಯವಾಗಬೇಕೆಂದು, ಆಧುನಿಕವಾಗಬೇಕೆಂದು ನಾವು ಬಯಸುತ್ತೇವೆಯೋ ಹಾಗೇ ಇಸ್ಲಾಂ ಸಹಾ ಮಾನವೀಯವಾಗಬೇಕು, ಆಧುನಿಕವಾಗಬೇಕು. ಹಾಗಾದಾಗ ಮಾತ್ರ ಈ ನಾಡಿನಲ್ಲಿ ಸೆಕ್ಯೂಲರಿಸಮ್ ತನ್ನ ನಿಜವಾದ ಅರ್ಥದಲ್ಲಿ ಆಚರಣೆಗೆ ಬರುತ್ತದೆ.
ಅನಂತಮೂರ್ತಿ ಯಾಕೆ ಹೀಗೆ?
ಇಸ್ಲಾಂನ ಬಗ್ಗೆ ಏನೂ ಟೀಕೆ ಮಾಡಲೇಕೂಡದು ಎಂದು ಹೇಳುವ ಅನಂತಮೂರ್ತಿಯವರಂತಹ ಲದ್ದಿಜೀವಿಗಳೇ ಇಸ್ಲಾಂನ ನಿಜವಾದ ವಿರೋಧಿಗಳು. ಇಸ್ಲಾಂ ದ್ವೇಷವನ್ನು ಬಿತ್ತುವ ಒಂದು ಮಧ್ಯಯುಗೀನ ಆಚರಣೆಗಳ, ಕಂದಾಚಾರೀ ಧರ್ಮವಾಗಿಯೇ ಉಳಿಯಬೇಕೆಂದು ಇವರು ಬಯಸುತ್ತಾರೆ.
ತಮ್ಮ ಬರಹಗಳ ಮೂಲಕ ಹಿಂದೂಧರ್ಮದಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದ ಇವರು ಅಂತಹ ಬದಲಾವಣೆಯ ಗಾಳಿ ಇಸ್ಲಾಂನಲ್ಲಿ ಬೀಸದಂತೆ ತಡೆಯುತ್ತಿದ್ದಾರೆ. ಈ ಲದ್ದಿಜೀವಿಗಳ ಮಾತುಗಳನ್ನು ಮುಸ್ಲಿಮರೇ ತಿರಸ್ಕರಿಸಬೇಕು. ಜಿಹಾದ್, ಅದು ಒಡ್ಡುವ ಲೈಂಗಿಕ ಸ್ವರ್ಗಸುಖದ ಆಮಿಷ, ಬಹುಪತ್ನಿತ್ವ, ಮೂರು ಸಲ ಪಟಪಟನೆ ತಲಾಕ್ ಹೇಳುವ ಸ್ತ್ರೀವಿರೋಧಿ ಅಮಾನವೀಯ ಪದ್ದತಿಗಳನ್ನು ತಾವಾಗಿಯೇ ದೂರ ಸರಿಸಿ ಇಸ್ಲಾಂ ಅನ್ನು ಈ ಶತಮಾನದ ಅಗತ್ಯಗಳಿಗನುಗುಣವಾಗಿ ಮಾನವೀಯಗೊಳಿಸಬೇಕು. ಇಸ್ಲಾಂ ಸಹನಶೀಲವಾಗಬೇಕು.
ಜತೆಗೇ ಇಸ್ಲಾಂ ಪ್ರತಿಪಾದಿಸುವ ಸಮಾನತೆ, ಬಡ್ಡಿವ್ಯವಹಾರ ನಿಷೇದ, ಆದಾಯದ ಒಂದು ಭಾಗವನ್ನು ಇಲ್ಲದವರಿಗೆ ಹಂಚುವ ನಿಜವಾದ ಕಮ್ಯೂನಿಸ್ಟ್ ತತ್ವ- ಮುಂತಾದ ಉದಾತ್ತ ವಿಚಾರಗಳನ್ನು ಬಲಪಡಿಸಿ ಅವುಗಳನ್ನು ಸಮಾಜದ ಎಲ್ಲ ವರ್ಗಗಳಿಗೂ ಅನ್ವಯವಾಗುವಂತೆ ಆನುಷ್ಠಾನಗೊಳಿಸಬೇಕು. ತನ್ಮೂಲಕ ಇಸ್ಲಾಂಗೆ ತಗುಲಿರುವ ಕೆಟ್ಟಹೆಸರನ್ನು ತೊಲಗಿಸಬೇಕು.
ಕೊನೆಯ ಮಾತು : ಭೈರಪ್ಪ ಹಾಗೂ ಅನಂತಮೂರ್ತಿ ಇಬ್ಬರೂ ತಮ್ಮ ಇತಿಮಿತಿಗಳಿಂದ ಇನ್ನಾದರೂ ಹೊರಬರಬೇಕಾಗಿದೆ. ತಮ್ಮ ‘‘ಬ್ರಾಹ್ಮಣಶ್ರೇಷ್ಠ’’ ಮೂಢನಂಬಿಕೆ ಹಾಗೂ ‘‘ಬ್ರಾಹ್ಮಣ ವೈಭವೀಕರಣ’’ ಚಪಲಗಳನ್ನು ಭೈರಪ್ಪನವರು ದೂರ ಸರಿಸಬೇಕು. ಹಾಗೇ ಅನಂತಮೂರ್ತಿಯವರು ತಮ್ಮ ಆಷಾಢಭೂತಿ ಮುಖವಾಡವನ್ನು ಕಿತ್ತೊಗೆದು ಎಲ್ಲ ಧರ್ಮಗಳನ್ನು ಸಮಾನ ದೃಷ್ಟಿಕೋನದಿಂದ ನೋಡುವ ನಿಜವಾದ ‘‘ಸೆಕ್ಯೂಲರಿಸ್ಟ್’’ ಆಗಿ ಬದಲಾಗಬೇಕು. ಆಗ ಅವರಿಬ್ಬರಿಂದ ಇನ್ನೂ ಉತ್ತಮ, ಅರ್ಥಪೂರ್ಣ ಹಾಗೂ ಸಾರ್ವಕಾಲಿಕ ಮಾನ್ಯತೆ ಪಡೆಯಬಲ್ಲ ಕೃತಿಗಳನ್ನು ನಾವು ನಿರೀಕ್ಷಿಸಬಹುದು.












Click it and Unblock the Notifications