ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲಿಷ್‌ ಭಾಷಾ ಕಲಿಕೆ ಮತ್ತು ಭಾಷಾ ನೀತಿ

By Staff
|
Google Oneindia Kannada News


ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಎರಡು ಅಥವಾ ಮೂರನೇ ವಯಸ್ಸಿಗೆ ಇಂಗ್ಲಿಷನ್ನು ರೂಢಿಸಿಕೊಳ್ಳಲು ಸಮಸ್ಯೆಯಾಗದಿದ್ದಾಗ, ಅದೇಕೆ ಕನ್ನಡ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಹೊರೆಯಾಗುತ್ತದೆ ಎನ್ನುವ ವಿಚಾರ ಗಮನಾರ್ಹವಾಗಿದೆ. ಮನೋಭಾಷಾವಿಜ್ಞಾನದ ಪ್ರಕಾರ ಪ್ರತಿಯಾಂದು ಸಾಮಾನ್ಯ ಮಗುವೂ ಜೈವಿಕ ಮತ್ತು ಮಾನಸಿಕವಾಗಿ ಭಾಷೆಯನ್ನು ರೂಢಿಸಿಕೊಳ್ಳುವ ಸ್ಥಿತಿಯನ್ನು ಪಡೆದುಕೊಂಡಿರುತ್ತದೆ. ಇದಕ್ಕಿಂತ ಹೆಚ್ಚಾಗಿ ನಮ್ಮ ದೇಶದ ಬಹುತೇಕ ಸಮುದಾಯಗಳು ದ್ವಿಭಾಷ ಸಮುದಾಯಗಳು ಆಗಿರುವದು. ಈ ಸಮುದಾಯದ ಮಕ್ಕಳು ತಮ್ಮ ಎಳೆ ವಯಸ್ಸಿನಲ್ಲಿ ಸ್ಪುಟವಾಗಿ ಆ ಎರಡು ಭಾಷೆಗಳನ್ನು ಮಾತನಾಡುವ ಸಾಮರ್ಥ್ಯವನ್ನು ಪಡೆದುಕೊಳ್ಳುವುದು.

ಇವತ್ತಿನ ಜಾಗತೀಕರಣದ ಎಲ್ಲಾಸಾಧ್ಯತೆಗಳನ್ನು ಒಪ್ಪಿಕೊಂಡು ಅವುಗಳ ಮಧ್ಯ ನಮ್ಮ ಸಾಸ್ಕೃತಿಕ ವೈವಿಧ್ಯತೆ ಮತ್ತು ಚಹರೆಗಳನ್ನು ಉಳಿಸಿಕೊಳ್ಳುವ ಪ್ರಯತ್ನದಂತೆ, ಇಂಗ್ಲಿಷ್‌ ಕಲಿಕೆಯ ಸಂದರ್ಭದಲ್ಲಿಯೂ ಕೂಡ ನಾವು ನಮ್ಮ ಭಾಷಿಕ ಚಹರೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳನ್ನು ಕಾಪಾಡಿಕೊಳ್ಳುವ ಸಾಮರ್ಥ್ಯವನ್ನು ದಕ್ಕಿಸಿಕೊಳ್ಳಬೇಕು ಎನ್ನುವ ವಾದವನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು.

ಇವತ್ತಿನ ಜಗತ್ತಿನಲ್ಲಿ, ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ ಮುಂತಾದ ಆಧುನಿಕ ಜ್ಞಾನ ಶಾಖೆಗಳ ಅವಿಷ್ಕಾರ, ಅನುಭವ, ಜ್ಞಾನ ತಕ್ಷಣಕ್ಕೆ ನಮಗೆ ಲಭ್ಯವಾಗುವದು ಇಂಗ್ಲಿಷ್‌ನ ಮೂಲಕ ಎನ್ನುವ ಎಚ್ಚರ/ಕಾಳಜಿಯನ್ನು ಕೂಡ ನಾವು ಬಹಳ ಪ್ರಜ್ಞಾಪೂರಕವಾಗಿ ನೋಡಬೇಕು. ಈ ಎಲ್ಲಾ ಜ್ಞಾನ ಸಾಧ್ಯತೆಗಳನ್ನು ನಾವು ನಮ್ಮ ಭಾಷೆಯಿಂದ ಪಡೆದುಕೊಳ್ಳುವುದಕ್ಕೆ ಅಸಾಮರ್ಥ್ಯವನ್ನು, ನಾವು ನಮ್ಮ ಭಾಷೆಯಾಂದಿಗೆ ಕೂಡಿಸಿಕೊಂಡಿಲ್ಲ ಎನ್ನುವ ತಿಳುವಳಿಕೆಯೂ ಕೂಡ ನಮಗಿರಬೇಕು.

ನಿಜ, ಯಾವುದೇ ಭಾಷೆ ಆಧುನಿಕ ಜಗತ್ತಿನ ಸವಾಲುಗಳಿಗೆ ಪ್ರತಿಸ್ಪಂದಿಸಲು ಮುಖ್ಯವಾಗಿ ಎಲ್ಲಾ ಕ್ರಿಯಾತ್ಮಕ ರಂಗಗಳಲ್ಲಿ ಬಳಕೆಯಾಗಬೇಕು ಶಿಕ್ಷಣವನ್ನೊಳಗೊಂಡು ಹಾಗಾಗಿ, ಕಾಲ-ದೇಶಕ್ಕೆ ತಕ್ಕ ಹಾಗೆ ನಮ್ಮ ಶಿಕ್ಷಣ ಕ್ರಮ ಮತ್ತು ಭಾಷಾ ನೀತಿಗಳು ರೂಪುಗೊಳ್ಳಬೇಕು. ಇಲ್ಲಿ ಇಂಗ್ಲಿಷ್‌ ಕೇವಲ ಒಂದು ಭಾಷೆಯಾಗಿ ಬೇಧಿಸಲಾಗವುದು. ಇದರ ಮುಖ್ಯ ಉದ್ಧೇಶ ಭಾಷಾ ಕೌಶಲಗಳನ್ನು ರೂಢಿಸಿಕೊಳ್ಳುವಲ್ಲಿ ಸಫಲವಾಗಬೇಕು ಎನ್ನುವುದು ಕೂಡ ಮುಖ್ಯ ಕಾಳಜಿಯಾಗಬೇಕು. ಶಿಕ್ಷಣ ಮಾಧ್ಯಮವಾಗಿ ಇಂಗ್ಲಿಷ್‌ ಭಾಷೆ ಮತ್ತು ಕೇವಲ ಭಾಷಾ ಕಲಿಕೆಯಾಗಿ ಇಂಗ್ಲಿಷ್‌ ಇದರ ನಡುವೆ ಶೈಕ್ಷಣಿಕ ಮತ್ತು ತಾತ್ತ್ವಿಕ ವ್ಯತ್ಯಾಸಗಳಿವೆ. ಇದನ್ನ ಮರೆಮಾಚಿ ಜನಸಾಮಾನ್ಯರನ್ನು ದ್ವಂದ್ವಕ್ಕಿಡುಮಾಡಬಾರದು.

ಚಾರಿತ್ರಿಕ ದಾಖಲೆ ಮತ್ತು ವಿವರಗಳನ್ನು ಪರಿಶೀಲಿಸಿದಾಗ, ಕನ್ನಡ ನಾಡು, ನುಡಿ ಮತ್ತು ಜನ ಹಲವಾರು ಸಾಂಸ್ಕೃತಿಕ ಸ್ಥಿತ್ಯಂತರ ಮತ್ತು ಪಲ್ಲಟಗಳಿಗೆ ಒಳಗಾಗಿದ್ದಾರೆ ಅಂತಹ ಸಂಕಷ್ಟಗಳಲ್ಲಿಯೂ ಕೂಡಾ ನಾವು ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಗೀತ ಮುಂತಾದವುಗಳನ್ನು ಬಹಳ ಜತನದಿಂದ ಕಾಪಾಡಿಕೊಂಡು ಬಂದಿರುವುದು ಚಾರಿತ್ರಿಕವಾಗಿ ಮಹತ್ವವನ್ನು ಪಡೆದುಕೊಳ್ಳುತ್ತದೆ. ಆದ್ದರಿಂದ, ಇವತ್ತು 70% ಪ್ರತಿಶತ ಜನ ಸುಶಿಕ್ಷಿತರಾಗಿದ್ದರಿಂದ, ನಾವು ನಮ್ಮ ಸಾಂಸ್ಕೃತಿಕ, ಚಾರಿತ್ರಿಕ ಮತ್ತು ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸಿಕೊಂಡಿದ್ದರಿಂದ ಇಂಗ್ಲಿಷ್‌ನಂತ ಭಾಷೆಯಿಂದ ನಮಗೆ ಯಾವುದೆ ಸಾಂಸ್ಕೃತಿಕ ಅಪಾಯಗಳು ಅಷ್ಟಾಗಿ ಆಗಲಾರವು ಎನ್ನುವುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು.

ಇವತ್ತು ನಮ್ಮ ಹಲವಾರು ಬುಡಕಟ್ಟು ಭಾಷೆ, ಸಂಸ್ಕೃತಿ ಮತ್ತು ಸಾಮುದಾಯದ ನಾಶಕ್ಕೆ ನೇರವಾಗಿ ಇಂಗ್ಲಿಷನ್ನು ಹೊಣೆಮಾಡುವುದು ಸೂಕ್ತವಾದದ್ದಲ್ಲ. ಯಾಕೆಂದರೆ, ಭಾರತದಂತಹ ಒಂದು ಉಪಖಂಡದಲ್ಲಿ ಹಲವಾರು ದೇಶಗಳು ಯಾವುದೆ ಒಂದು ಪಟ್ಟಭದ್ರ ಹಿತಾಸಕ್ತಿ ಮತ್ತು ಪುರೋಹಿತಶಾಹಿಯ ಯಜಮಾನ್ಯದ ಪ್ರಾಬಲ್ಯ ಮತ್ತು ದೌರ್ಜನ್ಯದಿಂದ ನಶಿಸಿ ಹೋಗಿವೆ ಎನ್ನುವುದನ್ನು ನಾವು ಮನಗಾಣಬೇಕು.

ಬಹುರಾಷ್ಟ್ರೀಯ ಕಂಪನಿಯ ಎಲ್ಲಾ ಸಾಧ್ಯತೆಗಳನ್ನು ಮತ್ತು ಲಾಭವನ್ನು ಪಡೆದುಕೊಳ್ಳುವ ಜನರು ಇಂಗ್ಲಿಷ್‌ ಕಲಿಕೆ ಬೇಡ ಎನ್ನುವುದು ಯಾವ ತಾತ್ವಿಕ ಸಮರ್ಥನೆ ಎನ್ನುವುದು ವಿಚಿತ್ರವಾಗಿ ತೋರುವುದು. ಪ್ರಸ್ತುತ ಆರ್ಥಿಕ ಉಧಾರಿಕರಣ, ಜಾಗತೀಕರಣ ಮತ್ತು ಅಂತರಾಷ್ಟ್ರೀಯತೆಯ ಪರಿಣಾಮದಿಂದ ಇಂಗ್ಲಿಷ್‌ ಎಲ್ಲ ಜನಸಾಮಾನ್ಯರ ಬದುಕಿನ ಭಾಗವಾಗಿದೆ. ಯಾವ ತರ್ಕದ ಆಧಾರದ ಮೇಲೆ ಇಂಗ್ಲಿಷ್‌ ಕಲಿಕೆ ಜನಸಾಮಾನ್ಯರಿಗೆ ಹೊರೆಯಾಗುತ್ತದೆ ಎಂದು ವಾದಿಸುವುದು ತಿಳಿಯದ ಸತ್ಯವಾಗಿದೆ.

ಭಾರತದಂತಹ ಬಹುಭಾಷಿಕ ದೇಶಗಳಲ್ಲಿ ಭಾಷಾನೀತಿಯನ್ನು ರೂಪಿಸುವ ಸಂದರ್ಭದಲ್ಲಿ ನಾವು ಪರಿಗಣಿಸಬೇಕಾದ ಅಂಶಗಳು ವೈಜ್ಞಾನಿಕ ಮತ್ತು ವೈಚಾರಿಕ ನಿಲುವುಗಳಿಂದಕೂಡಿರಬೇಕು ಇಲ್ಲದೆ ಹೋದರೆ ಕೆಲವೇ ಕೆಲವು ಜನ ಅಥವಾ ಜನಗಳ ಗುಂಪು ತಮ್ಮದೇ ತಾತ್ವಿಕತೆಯಿಂದ ಜನಪರವಾದ ತೀರ್ಮಾನಗಳನ್ನು ಜನ ವಿರೋಧಿ ನಿಲುವುಗಳೆಂದು ಬಿಂಬಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ದೇಶೀ ಭಾಷೆಗಳೊಂದಿಗೆ ಇಂಗ್ಲಿಷನ್ನು ಕಲಿಸಬೇಕು ಎನ್ನುವುದು ಸಂವಿಧಾನಾತ್ಮಾಕವಾದ ಶಾಸನವಾದ್ದರಿಂದ ಇದನ್ನು ಒಂದನೆ ತರಗತಿಯಿಂದ ಕಲಿಸುವುದರಲ್ಲಿ ಏನು ಕಷ್ಟ ಇರಲಾರದು. ಈ ಮೇಲೆ ಚರ್ಚಿಸಿದ ಎಲ್ಲಾ ಅಂಶಗಳ ಆಧಾರದ ಮೇಲೆ ಕನ್ನಡ ವಿರೋಧಿ ನೆಲೆ ಎನ್ನುವ ಸರಳ ತೀರ್ಮಾನಕ್ಕೆ ಬರುವಷ್ಟು ಸುಲಭದ ನಿಲುವುಗಳು ಇವು ಆಗಲಾರವು ಎನ್ನುವುದು ಕೂಡ ಗಮನಾರ್ಹವಾದ ಮಾತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X