‘ಇಗೋ ಕನ್ನಡ’ದ ವೆಂಕಟಸುಬ್ಬಯ್ಯರಿಗೆ ಇದೀಗ 93
ಬೆಂಗಳೂರು : ಭಾಷೆಗೆ ನೋವಾಗುವುದನ್ನು ತಡೆಯುವುದು ನನ್ನ ಸಂಕಲ್ಪ. ಈ ನಿಟ್ಟಿನಲ್ಲಿ ಭಾಷೆ, ಬರಹ ಮತ್ತು ನಿಘಂಟುಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ ಎಂದು ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದ್ದಾರೆ.
ಭಾರತೀಯ ವಿದ್ಯಾಭವನದಲ್ಲಿ ತಮ್ಮ 93ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅವರು, ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಸಾಹಿತ್ಯ ಪರಿಷತ್ತು ನಿಘಂಟು ಕೇಂದ್ರವನ್ನು ಮುಚ್ಚಲು ಮುಂದಾಗಿದೆ. ಸರ್ಕಾರ ಅಗತ್ಯ ಸಹಕಾರ ನೀಡಿ ಭಾಷೆಯನ್ನು ಬೆಳಸಲು ಪೂರಕವಾಗಿರುವ ನಿಘಂಟು ಕೇಂದ್ರವನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವಿಮರ್ಶಕ ಮತ್ತು ಬರಹಗಾರ ಪ್ರೊ.ಎಲ್.ಎಸ್.ಶೇಷಗಿರಿರಾವ್ ಮಾತನಾಡಿ, ಕನ್ನಡ ಭಾಷಾ ವಿಜ್ಞಾನ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಆದರೆ ವೈಯುಕ್ತಿಕ ನೆಲೆಗಟ್ಟಿನಲ್ಲಿ ಭಾಷೆಯನ್ನು ಉಳಿಸುವ ಪ್ರಯತ್ನಗಳು ನಡೆದಿವೆ. ಪ್ರೊ.ವೆಂಕಟಸುಬ್ಬಯ್ಯ ನಿಘಂಟು ರಚನೆ ಮೂಲಕ ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಜೀವನ ಚರಿತ್ರೆ : ಭಾರತೀ ಕಾಸರಗೋಡು ಅವರು ರಚಿಸಿರುವ ‘ಪ್ರೊ.ಜಿ.ವಿ. ಅವರ ಬದುಕು-ಬರಹ’ ಪುಸ್ತಕವನ್ನು ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಬಿಡುಗಡೆ ಮಾಡಿದರು.
ಭಾರತೀಯ ವಿದ್ಯಾಭವನದ ನಿರ್ದೇಶಕ ಡಾ.ಮತ್ತೂರು ಕೃಷ್ಣಮೂರ್ತಿ, ನಿರ್ದೇಶಕ ಎಚ್.ಎನ್.ಸುರೇಶ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)