ಸಂಸದರಿಗೆ ದೆಹಲಿ ಕನ್ನಡಿಗರ ಅಭಿನಂದನೆ
ಮೊನ್ನೆ , ಜುಲೈ ತಿಂಗಳ 15 ರಂದು, ಗುರುವಾರ ದೆಹಲಿಯಲ್ಲಿ ದಿಮುಗುಡುವ ಸೆಕೆ ಇಳಿದು, ಮಳೆಬಾರದೇ ಮುನಿಸಿಕೊಂಡ ಬಾನು ಮೋಡಗವಿಯುವದೊಮ್ಮೆ, ಮಗದೊಮ್ಮೆ ಮೈ-ಮನಸುಗಳಿಗೆ ‘ಹಾಯ್’ಯೆನಿಸುವ ಸರಿದು ಬೀಸುವಗಾಳಿ. ಇಂಥದೊಂದು ರಮ್ಯಸಂಜೆಯಲ್ಲಿ ಲೋಧಿ ಎಸ್ಟೇಟಿನ, ದೆಹಲಿಯ ಕನ್ನಡಶಾಲಾವರಣದಲ್ಲಿ ಕಿಕ್ಕಿರಿದು ನೆರೆದಿರುವ ಕನ್ನಡಿಗರು. ಎಲ್ಲೆಲ್ಲೂ ಲವಲವಿಕೆ, ಉತ್ಸಾಹದ ಮಾತುಗಳು, ಹಕ್ಕಿಗಳು ಕಲರವಿಸಿ ಗಾನಮೇಳೈಸಿದೆಯೇನೋ ಎಂಬಂತಿತ್ತು ನೋಡಲು. ಜನ ತಮ್ಮ ದೈನಂದಿನ ಬಿಜಿ ಜೀವನದಲ್ಲೂ ಅಂದಿನ ಸಮರಂಭಕ್ಕಾಗಮಿಸಿ ಕಳೆಯನ್ನು ತಂದಿದ್ದರು. ಅದು ದೆಹಲಿ ಕನ್ನಡ ಸಂಘವೇರ್ಪಡಿಸಿದ ‘ಕರ್ನಾಟಕದ ನೂತನ ಸಂಸತ್ ಸದಸ್ಯರಿಗೆ ಸ್ವಾಗತ ಮತ್ತು ಅಭಿನಂದನೆ’ ಸಮಾರಂಭ.
ದೆಹಲಿ ಕನ್ನಡ ಶಾಲೆಯ ಆವರಣದಲ್ಲಿ ದೆಹಲಿ ಕನ್ನಡ ಸಂಘವು ಆಯೋಜಿಸಿದ ‘ನೂತನ ಸಂಸದೀಯರ ಅಭಿನಂದನಾ ಸಮಾರಂಭ’ ತುಂಬಾ ಚೆನ್ನ್ನಾಗಿ ನಡೆಯಿತು. ಇಂಥಾದ್ದೊಂದು ಸಮಾರಂಭ, ಅದೂ ಬೇರೆ ಬೇರೆ ಪಕ್ಷದ ಸಂಸದೀಯರನ್ನು ಒಂದೇ ವೇದಿಕೆಯ ಮೇಲೆ ಏಕ ಕಾಲಕ್ಕೆ ಆಮಂತ್ರಿಸಿ ಕಾರ್ಯಕ್ರಮ ನಡೆಸುವದು ಚಿಕ್ಕ ಕೆಲಸವೇನೂ ಅಲ್ಲ . ಅದು ದೆಹಲಿಯಂಥ ಸ್ಥಳದಲ್ಲಿ ಮಾತ್ರವೇ ಸಾಧ್ಯ. ಆಮಂತ್ರಣವನ್ನು ಹೃತ್ಪೂರ್ವಕವಾಗಿ ಒಪ್ಪಿಕೊಂಡು ಬಂದವರಲ್ಲಿ ಕೇಂದ್ರ ಸಚಿವರಾದ ಆಸ್ಕರ್ ಫರ್ನಾಂಡಿಸ್, ಕೆ. ರೆಹಮಾನ ಖಾನ್ (ಇದೀಗ ರಾಜ್ಯಸಭೆಯ ಉಪಾಧ್ಯಕ್ಷರು), ಎಮ್.ವಿ.ರಾಜಶೇಖರನ್ ಹಾಗೂ ಮುನಿಯಪ್ಪ , ಇವರೊಂದಿಗೆ ಇನ್ನುಳಿದ 14 ಜನ ಸಂಸತ್ ಸದಸ್ಯರುಗಳು ತಮ್ಮೆಲ್ಲಾ ಕಾರ್ಯಗಳನ್ನು ಬದಿಗಿರಿಸಿ, ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಟ್ಟು ಸಮಾರಂಭಕ್ಕೆ ಅರ್ಥವಂತಿಕೆ ತಂದಿದ್ದರು.



ಮೊದಲಿಗೆ ದೆಹಲಿ ಕನ್ನಡ ಶಾಲಾ ಮಕ್ಕಳಿಂದ ಸ್ವಾಗತಗೀತೆ ‘ಹಚ್ಚೇವು ಕನ್ನಡದ ದೀಪ’ ನೃತ್ಯ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು. ನಂತರ ಕನ್ನಡ ಸಂಘದ ಪ್ರಸ್ತುತಿ - ಸಂಘದ ಚಟುವಟಿಕೆಗಳ ಬಗೆಗಿನ 28 ನಿಮಿಷಗಳ ಸಾಕ್ಷ ್ಯ ಚಿತ್ರ. ನಂತರ ಅಭಿನಂದನಾ ಸಮಾರಂಭ. ಸಂಘದ ಪ್ರಧಾನ ಕಾರ್ಯದರ್ಶಿ ಸರವೂ ಕೃಷ್ಣ ಭಟ್ಟರಿಂದ ಸ್ವಾಗತ ಭಾಷಣ. ಅಧ್ಯಕ್ಷರಾದ ಡಾ.ಫುರುಷೊತ್ತಮ ಬಿಳಿಮಲೆಯವರಿಂದ ಪ್ರಾಸ್ತಾವಿಕ ಭಾಷಣ ಹಾಗೂ ಸಂಘದ ವಿವಿಧ ಪದಾಧಿಕಾರಿಗಳಿಂದ ಅತಿಥಿಗಳಿಗೆ ಪುಷ್ಪಗುಚ್ಛ ಅರ್ಪಣೆ.
ಅಭಿನಂದನೆಗೆ ಪ್ರತಿಕ್ರಿಯಿಸಿದ ಕೇಂದ್ರಸರ್ಕಾರದ ಮಾಜಿ ಸಚಿವ ಅನಂತಕುಮಾರ್- ದೆಹಲಿಯ ಕರ್ನಾಟಕ ಭವನ ಸರ್ಕಾರದ ಕಾರ್ಯಕಲಾಪಗಳಿಗೆ ಸೀಮಿತವಾಗಿದೆ, ಆದರೆ ದೆಹಲಿ ಕನ್ನಡ ಸಂಘದ ಭವನ ಕನ್ನಡಿಗರೆಲ್ಲರ ಭವನವಾಗಿದೆ. ದೆಹಲಿಯಂಥ ಸ್ಥಳದಲ್ಲಿ ಸರ್ಕಾರಕ್ಕೂ ಜನತೆಗೂ ಸಂಪರ್ಕವೊದಗಿಸುವ ಸ್ಥಾನ ಕನ್ನಡ ಸಂಘದ ಭವನ. ಹಳೆಯ ಸಂಘದ ಸ್ಥಾನದಲ್ಲೀಗ ಹೊಸ ಸಾಂಸ್ಕೃತಿಕ ಸಮುಚ್ಛಯದ ನಿರ್ಮಾಣವಾಗುತ್ತಿದೆ - ಎಂದು ಹರ್ಷ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ಸಮುಚ್ಛಯದ ನಿರ್ಮಾಣ ಈಗಾಗಲೇ ಅರ್ಧ ಮುಗಿದಿದ್ದು , ಮುಂದಿನ ಹಂತಗಳಿಗಿನ್ನೂ ಹಣದ ಅವಶ್ಯಕತೆ ಇದೆ. ಕನ್ನಡಿಗರೂ ದಾನಿಗಳು ಮುಂದೆ ಬರುತ್ತಿದ್ದಾರೆ. ಅನಂತಕುಮಾರ್ ಕೂಡಾ ಉದಾರತೆಯಲ್ಲಿ ಹಿಂದುಳಿಯಲಿಲ್ಲ . ಸಮಾರಂಭಕ್ಕೆ ಆಗಮಿಸಿದ್ದ ಎಲ್ಲ ಸಂಸದೀಯರ ಪರವಾಗಿ ಮಾತನಾಡಿದ ಅವರು- ಎಲ್ಲ ಸಂಸದರಿಂದ ತಲಾ ಹತ್ತು ಲಕ್ಷ ರೂಪಾಯಿ ಕೊಡಿಸುವ ಭರವಸೆ ನೀಡಿದರು. ತಮ್ಮ ವೈಯಕ್ತಿಕ ಮೂಲಗಳಿಂದ ಸದ್ಯದಲ್ಲೇ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವ ವಾಗ್ದಾನ ಮಾಡಿದರು. ಸಂಸದ್ ನಿಧಿಯಿಂದ ಹಣ ಒದಗಿಸುವದಕ್ಕೆ ಸರಕಾರದ ವಿಶೇಷ ಅನುಮತಿ ಬೇಕಾದ್ದರಿಂದ ಅದನ್ನು ಕೇಂದ್ರ ಸರ್ಕಾರದ ಸಚಿವರಾದ ಆಸ್ಕರ್ ಫರ್ನಾಂಡೀಸ್ ಒದಗಿಸಬೇಕೆಂದು ಒತ್ತಾಯಪಡಿಸಿದರು.
ಅನಂತಕುಮಾರ್ ಮಾತಿಗೆ ತಮ್ಮ ಭಾಷಣದಲ್ಲಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಪ್ರತಿಕ್ರಿಯಿಸಿದರು. ಕರ್ನಾಟಕ ಸರ್ಕಾರದಿಂದ ಸಂಘಕ್ಕೆ ಸಿಗಬೇಕಾಗಿದ್ದ ಐವತ್ತು ಲಕ್ಷ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಧರ್ಮಸಿಂಗರನ್ನು ಆಗ್ರಹಿಸಿದ್ದು, ಸಂಘದ ಪದಾಧಿಕಾರಿಗಳು ಆ ಹಣವನ್ನು ತಕ್ಷಣವೇ ಪಡೆಯಬಹುದು. ಇನ್ನು ಸಂಸದೀಯ ನಿಧಿಯಿಂದ ಸಂಘದ ಸಾಂಸ್ಕೃತಿಕ ಸಮುಚ್ಛಯದ ನಿರ್ಮಾಣಕ್ಕೆ ಹಣವೊದಗಿಸುವ ಸಾಧ್ಯಾಸಾಧ್ಯತೆಗಳನ್ನು ತಾವು ಪರಿಶೀಲಿಸುವದಾಗಿ ಆಸ್ಕರ್ ಭರವಸೆಯಿತ್ತರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ರಾಜಶೇಖರನ್ ಕನ್ನಡ ಭಾಷೆ ‘ಪುರಾತನಭಾಷೆ’ ಎಂಬ ಸ್ಥಾನಮಾನಕ್ಕಾಗಿ ದೆಹಲಿ ಕನ್ನಡ ಸಂಘ ಯತ್ನಿಸಬೇಕು ಎಂದರು. ಕನ್ನಡ ಸಂಘದ ಐದು ದಶಕಗಳ ಸಾಧನೆಯನ್ನು ಕೇಳಿದ ಸಂಸದೀಯರು ದೆಹಲಿಯಲ್ಲಿ ನಿಜಕ್ಕೂ ಕನ್ನಡ ಕೆಲಸ ಸಕಾರಾತ್ಮಕವಾಗಿ ನಡೆಯುತ್ತಿದೆ ಎಂದು ಕೊಂಡಾಡಿ ಸಂಘಕ್ಕೆ ಯಾವುದೇ ಸಂದರ್ಭದಲ್ಲೂ ತಮ್ಮ ಸಂಪೂರ್ಣ ಬೆಂಬಲ ಕೊಡುವುದಾಗಿ ತಿಳಿಸಿದರು.
ವೇದಿಕೆಯಲ್ಲಿನ ಏಕೈಕ ಮಹಿಳೆ, ಕಾಂಗ್ರೆಸ್ ಸದಸ್ಯೆ ತೇಜಸ್ವಿನಿಯವರು ದೆಹಲಿಯಲ್ಲಿನ ವಿಶಿಷ್ಟ ಕನ್ನಡಿಗರ ಮಾಹಿತಿ ಸಿಗುವಂತಾಗಬೇಕು ಎಂದರು.
ಕಾರ್ಯಾಕ್ರಮದ ನಂತರ ಭೋಜನ ಏರ್ಪಡಿಸಲಾಗಿತ್ತು. ಸಭೆಗೆ ಆಗಮಿಸಿದ್ದ 750 ಜನ ಕನ್ನಡಿಗರು ಭೋಜನ ಮುಗಿಸಿ ಮನೆಗಳಿಗೆ ತೆರಳುವುದರೊಂದಿಗೆ ಅಂದಿನ ಸುಂದರ ಸಂಜೆಗೆ ತೆರೆ ಬಿದ್ದಿತ್ತು.












Click it and Unblock the Notifications