ಕುವೆಂಪು ವಿಶ್ವವಿದ್ಯಾಲಯ ; ಒಂದು ಮನವಿ
ಕುವೆಂಪು ವಿಶ್ವವಿದ್ಯಾನಿಲಯವು ವಿಶ್ವದಲ್ಲಿರುವ ಉತ್ತಮ ವಿಶ್ವವಿದ್ಯಾನಿಲಯವಾಗಬೇಕೆಂಬ ಮಹದಾಶೆಯನ್ನು ಹೊತ್ತು ಆ ದಿಕ್ಕಿನಲ್ಲಿ ಹಲವಾರು ದಿಟ್ಟ ದೃಢ ಹೆಜ್ಜೆಗಳನ್ನಿಡುತ್ತಿದೆ. ಕಳೆದೆರಡು ವರ್ಷಗಳಲ್ಲಿ ಶಿವಮೊಗ್ಗದ ಸಹ್ಯಾದ್ರಿಯ ಮಡಿಲಲ್ಲಿರುವ ವಿಶ್ವವಿದ್ಯಾನಿಲಯವು ಪ್ರೊ.ಕೆ.ಚಿದಾನಂದಗೌಡ ಕುಲಪತಿಗಳು, ಹಾಗೂ ಪ್ರವೀಣಚಂದ್ರ ಪಾಂಡೆ, ಕುಲಸಚಿವರು ಇವರ ನೇತೃತ್ವದಲ್ಲಿ ಶಿಕ್ಷಣ ಕೇತ್ರದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ. ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳಲ್ಲಿ ಅತ್ಯಂತ ಮಹತ್ವಾಕಾಂಕ್ಷಿಯುಳ್ಳ ಕಾರ್ಯಕ್ರಮವೆಂದರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಹೊರಗಿರುವ ಜನಸಾಮಾನ್ಯರಿಗೆ ಶಿಕ್ಷಣವನ್ನು ನೀಡುವುದು.
ಕುವೆಂಪು ವಿಶ್ವವಿದ್ಯಾನಿಲಯವು ಸಾಕ್ಷರತೆಯ ಕ್ಷೇತ್ರದಲ್ಲಿ ಒಂದು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ 56 ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳು ತಮ್ಮ ಹಳ್ಳಿಯಲ್ಲಿರುವ ಅನಕ್ಷರಸ್ಥರಿಗೆ ಅಕ್ಷರಾಭ್ಯಾಸ ಮಾಡಿಸುವ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ. ಕನಿಷ್ಠ ಐದು ಮಂದಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿ ಸ್ನಾತಕೋತ್ತರ ವಿಭಾಗದಲ್ಲೂ ಒಂದು ಸ್ಥಾನವನ್ನು ಮೀಸಲಾಗಿರಿಸಿದೆ. ಈ ಕಾರ್ಯಕ್ರಮವು ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗಿದೆ.
ವಿಶ್ವವಿದ್ಯಾನಿಲಯವು ಈ ದಿಕ್ಕಿನಲ್ಲಿ ಹಮ್ಮಿಕೊಳ್ಳುತ್ತಿರುವ ಮತ್ತೊಂದು ಮಹತ್ವದ ಕಾರ್ಯಕ್ರಮವೆಂದರೆ ಗ್ರಾಮೀಣ ಪ್ರದೇಶವನ್ನು ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಬೆಳೆಯುತ್ತಿರುವ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರುಗಳಿಗೆ ಕಂಪ್ಯೂಟರ್ ಹಾಗೂ ಮಾಹಿತಿ ತಂತ್ರಜ್ಞಾನದ ಲಾಭವು ಸಿಗುವಂತೆ ಮಾಡುವುದು. ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಪ್ರತಿ ಜಿಲ್ಲೆಯಲ್ಲಿ 25 ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳನ್ನು ಗುರುತಿಸಿ ಆ ಶಾಲೆಗಳಿಗೆ ಕಂಪ್ಯೂಟರ್ ಒದಗಿಸಿಕೊಡುವುದು. ಆ ಶಾಲೆಯ ಒಬ್ಬ ಅಧ್ಯಾಪಕರಿಗೆ ಮಾಹಿತಿ ಅಂತರ್ಜಾಲ (Internet) ಬಳಕೆಯ ಬಗ್ಗೆ ತರಬೇತಿ ನೀಡುವುದು. ತರಬೇತಿ ನೀಡುವ ಜವಾಬ್ದಾರಿಯನ್ನು ವಿಶ್ವವಿದ್ಯಾನಿಲಯ ಕಂಪ್ಯೂಟರ್ ವಿಭಾಗವು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಕನ್ನಡದಲ್ಲಿ ಸಾಫ್ಟ್ವೇರ್ ಸಿದ್ಧಪಡಿಸುವುದು.
ಈ ಕಾರ್ಯಕ್ರಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಕಂಪ್ಯೂಟರ್ಗಳು ಬೇಕಾಗಿದ್ದು, ನಾವು ಅಮೇರಿಕಾದ ಆಶಾ ಫಾರ್ ಎಜುಕೇಷನ್ ಎನ್ನುವ ಸಂಸ್ಥೆಯನ್ನು ಕೋರಿದೇವು. ಈ ಸಂಸ್ಥೆಯ ಸಕ್ರಿಯ ಸದಸ್ಯರಾದ ಶ್ರೀಮತಿ ಹನ್ಸಾ ಷಾ ಇವರು ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಅಮೇರಿಕಾದ WCE ಸಂಸ್ಥೆಯಿಂದ 250 ಕಂಪ್ಯೂಟರ್ಗಳನ್ನು ಒದಗಿಸಲು ಏರ್ಪಾಡು ಮಾಡಿರುತ್ತಾರೆ.
ಆದರೆ, ಈ ಕಂಪ್ಯೂಟರ್ಗಳನ್ನು ಭಾರತಕ್ಕೆ ತರುವ ಸಾಗಾಣಿಕೆ ವೆಚ್ಚ ಸುಮಾರು 17,500 ಡಾಲರ್ ಎಂದು ಅಂದಾಜು ಮಾಡಲಾಗಿದೆ. ಸುಮಾರು ಅಷ್ಟೆ ಮೊತ್ತದ ಹಣ ಕಂಪ್ಯೂಟರ್ಗಳ Installationಗೆ ಬೇಕಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಶಿಕ್ಷಣವನ್ನು ಗ್ರಾಮೀಣ ಬಡ ಜನತೆ ತೆಗೆದುಕೊಂಡು ಹೋಗುವ ಈ ಕಾರ್ಯಕ್ರಮಕ್ಕೆ ತಮ್ಮ ಸಹಾಯ ಹಸ್ತವನ್ನು ನೀಡಬಯಸುವವರು ಉದಾರ ಮನಸ್ಸಿನಿಂದ ಧನ ಸಹಾಯ ಮಾಡಿದರೆ ಈ ಕಾರ್ಯಕ್ರಮವು ಖಂಡಿತ ಯಶಸ್ವಿಯಾಗುತ್ತದೆ. ಸಂಪೂರ್ಣ ವೆಚ್ಚವನ್ನು ಯಾರಾದರೂ ಭರಿಸಲು ಇಚ್ಛಿಸಿದರೆ (ಅಂದರೆ 17,500) ವಿಶ್ವವಿದ್ಯಾನಿಲಯದಲ್ಲಿ ಈ ಉದ್ದೇಶಕ್ಕಾಗಿ ತೆರೆಯುವ ಕೇಂದ್ರಕ್ಕೆ ಅವರ ಅಥವಾ ಅವರು ಸೂಚಿಸುವ ಯಾರದಾದರೂ ಹೆಸರನ್ನು ಇಡುವ ಉದ್ದೇಶವೂ ವಿಶ್ವವಿದ್ಯಾನಿಲಯಕ್ಕಿದೆ.
ಆಸಕ್ತರು ಸಂಪರ್ಕಿಸಬೇಕಾದ ವಿಳಾಸ :
Prof. J. S. Sadananda
Email: [email protected]
Phone: 09448319693 (M)
08182-249970 (R)
(ಇನ್ಫೋ ವಾರ್ತೆ)












Click it and Unblock the Notifications