ಮಧ್ಯಮ ವರ್ಗದ ‘ಆಕಾಶ ಬುಟ್ಟಿ ’ : ಕಾಯ್ಕಿಣಿ ಸಂದರ್ಶನ
- ಕಥನ
ನನ್ನ ಸಣ್ಣ ಕತೆ ನಾಟಕವಾಗುತ್ತಿಲ್ಲ. ನಾನೇ ನನ್ನ 2-3 ಕತೆಗಳನ್ನು ಆಧಾರವಾಗಿಟ್ಟುಕೊಂಡು ಒಂದು ನಾಟಕ ಬರೆದಿದ್ದೇನೆ.ಆ ದೃಷ್ಟಿಯಿಂದ ಮೊದಲ ಬಾರಿ ನನ್ನ ಸ್ವತಂತ್ರ ನಾಟಕವೊಂದು ರಂಗವೇರುತ್ತದೆ.
ಸ್ವತಂತ್ರ ನಾಟಕ ರಂಗವೇರುವಾಗ ಏನನಿಸುತ್ತದೆ?
ಸಹಜವಾಗಿಯೇ ಸಂತೋಷ, ಜತೆಗೆ ಹೇಗಾಗುತ್ತದೋ ಎಂಬ ಹೆದರಿಕೆ.
ಕತೆಯ ವಸ್ತು ಏನು?
‘ಆಕಾಶ ಬುಟ್ಟಿ ’ ನಗರೀಕರಣ ಕುರಿತದ್ದು. ನನ್ನೆಲ್ಲಾ ಕತೆಗಳಲ್ಲಿ ಪ್ರಸ್ತಾಪವಾಗುವ ನಗರ ಜೀವನ ಈ ನಾಟಕದುದ್ದಕ್ಕೂ ಇದೆ. ನನ್ನ ಪ್ರಕಾರ ನಗರದ ಹೊರಗಿಂದ ಬಂದ ಜನರಿಂದ ‘ನಗರ ’ ಆಗಿದೆ. ಆ ನಗರದ ಮಧ್ಯಮ ವರ್ಗದವರ ಬಗ್ಗೆ ನಾಟಕ ಕಾಳಜಿವಹಿಸುತ್ತದೆ. ಅವರ ಮೇಲಿನ ಕನಸುಗಳ ದಾಳಿ, ಅವರ ಕನಸಿನಲ್ಲಿ ಅವರೇ ಸಿಕ್ಕಿಬೀಳುವ ರೀತಿ, ತಲ್ಲಣ ಇತ್ಯಾದಿಗಳನ್ನು ‘ಆಕಾಶ ಬುಟ್ಟಿ’ ಹೇಳುತ್ತದೆ.
ನಿರ್ದೇಶನದ ಬಗ್ಗೆ...
ಇದನ್ನು ಸಿ. ಬಸಲಿಂಗಯ್ಯ ನಿರ್ದೇಶಿಸುತ್ತಿದ್ದಾರೆ. ಬೆನಕ ತಂಡ ಅಭಿನಯಿಸುತ್ತಿದೆ. ಬಸಲಿಂಗಯ್ಯ ರಂಗಾಯಣದಿಂದ ಬಂದವರು. ಈಗಾಗಲೇ ದೇವನೂರು ಮಹಾದೇವರ ಕತೆಗಳನ್ನು ಯಶಸ್ವಿಯಾಗಿ ರಂಗರೂಪಕ್ಕಿಳಿಸಿದ್ದಾರೆ. ನನ್ನ ನಾಟಕ ಅವರ ಕೈಯ್ಯಲ್ಲಿ ಒಪ್ಪವಾಗುವ ಭರವಸೆ ನನಗಿದೆ. ಬಿ.ವಿ.ಕಾರಂತರ 75ನೇ ಜನ್ಮದಿನದ ಅಂಗವಾಗಿ ಈ ಪ್ರದರ್ಶನ ನಡೆಯುತ್ತಿದೆ.
ನಿಮ್ಮ ಕತೆಗಳಲ್ಲಿ ದೃಶ್ಯ ಮಾಧ್ಯಮಕ್ಕೆ ಒಗ್ಗುವಂಥ ಅಪೂರ್ವ ಚಿತ್ರಕ ಅಂಶಗಳಿರುತ್ತದೆ. ಆದರೆ ಈವರೆಗೆ ಯಾಕೆ ಒಂದೂ ಕತೆಯನ್ನು ಯಾರೂ ನಾಟಕವಾಗಿ ತೆಗೆದುಕೊಳ್ಳಲಿಲ್ಲ?
ಬಹುಶಃ ಅವರ್ಯಾರೂ ನನ್ನ ಕತೆ ಓದಿಲ್ಲ, ಓದಿದರೂ ಹಾಗೆ ಅನ್ನಿಸದೇ ಇರಬಹುದು. (ನಗು)
(ಸ್ನೇಹ ಸೇತು : ವಿಜಯ ಕರ್ನಾಟಕ)