ನಿಸಾರ್ಗೆ ಸ್ವಗೃಹದಲ್ಲಿ ಸಂದ ‘ನಾಡೋಜ’
- ಗಿರಿಶಾಸ್ತ್ರಿ , ಬೆಂಗಳೂರು
ಕನ್ನಡದ ಸರ್ವ ಶ್ರೇಷ್ಠ ಕವಿಗಳೂ ವಿಮರ್ಶಕರೂ ಆದ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರಿಗೆ ಫೆಬ್ರವರಿ 25 ರಂದು ಅವರ ಸ್ವಗೃಹದಲ್ಲಿಯೇ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಜನವರಿ 5ರಂದು ಹಂಪಿಯಲ್ಲಿ ನಡೆದ ನುಡಿ ಹಬ್ಬದ ಸಂದರ್ಭದಲ್ಲಿ ಕನ್ನಡ ವಿ.ವಿಯ ಕುಲಪತಿಗಳು, ರಾಜ್ಯದ ರಾಜ್ಯಪಾಲರೂ ಆದ ಟಿ. ಎನ್. ಚತುರ್ವೇದಿ ಅವರು ನಾಡೋಜ ಪ್ರಶಸ್ತಿ ಪ್ರದಾನ ಮಾಡಿದ ಸಮಾರಂಭದಲ್ಲಿ , ಪ್ರೊ. ಕೆ.ಎಸ್.ಎನ್ ಅನಿವಾರ್ಯ ಕಾರಣಗಳಿಂದ ಭಾಗವಹಿಸಿರಲಿಲ್ಲ. ಹೀಗಾಗಿ ಅವರ ಸ್ವಗೃಹದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಯ್ತು.
ಹಂಪಿ ಕನ್ನಡ ವಿ.ವಿಯ ಕುಲಸಚಿವರಾದ ಪ್ರೊ. ಕೆ.ವಿ. ನಾರಾಯಣ್ ಅವರು ಕೆಎಸ್ಎನ್ರ ಬಗೆಗಿನ ಅಭಿನಂದನ ಪತ್ರವನ್ನು ವಾಚಿಸಿದರು. ನಂತರ ಕುಲಪತಿಗಳಾದ ಪ್ರೊ. ಎಚ್.ಜಿ. ಲಕ್ಕಪ್ಪ ಗೌಡ ಅವರು ನಿಸಾರರಿಗೆ ನಾಡೋಜ ಪ್ರಶಸ್ತಿ ನೀಡಿ, ಶಾಲು ಹೊದೆಸಿ, ಸರಸ್ವತಿ ವಿಗ್ರಹ, ಫಲ, ತಾಂಬೂಲ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿಗಳು ಕನ್ನಡ ನಾಡು, ನುಡಿಗೆ ನಿಸಾರರು ನೀಡಿರುವ ಕೊಡುಗೆ ಅಪಾರವೆಂದು ಪ್ರಶಂಸಾರ್ಹ ನುಡಿಗಳನ್ನಾಡಿದರು. ಪ್ರೊ.ನಿಸಾರರು ತಮಗೆ ನೀಡಿದ ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಕೃತಜ್ಞತೆಗಳನ್ನರ್ಪಿಸಿ, ತಮಗೆ ಪ್ರಿಯವಾದ, ‘ರಾಮನ್ ಸತ್ತ ಸುದ್ದಿ ’ ಕವನವನ್ನು ವಾಚಿಸಿದರು.
ಆರಂಭದಲ್ಲಿ ಹಂಪಿ ಕನ್ನಡ ವಿ.ವಿಯ ಸಿಂಡಿಕೇಟ್ ಸದಸ್ಯರಾದ ಪ್ರೊ. ಕೆ.ಆರ್. ಇಕ್ಬಾಲ್ ಅಹಮದ್ ಅವರು ಸ್ವಾಗತಿಸಿದರು. ಕೊನೆಯಲ್ಲಿ ಪ್ರೊ. ಧ್ರುವ ನಾರಾಯಣ ಅವರು ವಂದಿಸಿದರು.
ಅಚ್ಚುಕಟ್ಟಾಗಿ ನಡೆದ ಸರಳ ಸಮಾರಂಭದಲ್ಲಿ ನಿಸಾರರ ಪತ್ನಿ ಶ್ರೀಮತಿ ಷಾನವಾಜ್ ಬೇಗಂ ಹಾಗೂ ಕುಟುಂಬದವರು, ಹಂಪಿ ಕನ್ನಡ ವಿ.ವಿಯ ಸಿಂಡಿಕೇಟ್ ಸದಸ್ಯರು, ಹಿತೈಷಿಗಳು ಹಾಜರಿದ್ದರು.












Click it and Unblock the Notifications