ಕನ್ನಡಿಗರ ಮನಸ್ಸುಗಳ ಏಕೀಕರಣವಾಗದ ಹೊರತು ಕರ್ನಾಟಕ್ಕೆ ಉಳಿಗಾಲವಿಲ್ಲ.
- ಸಂಪಿಗೆ
[email protected]
ಕರ್ನಾಟಕದ ಏಕೀಕರಣಕ್ಕೆ ಬಹಳ ಜನ ನಮ್ಮ ಹಿರಿಯರು ಹೋರಾಡಿದ್ದಾರೆ. ಕನ್ನಡದ ಬೇರೆ ಬೇರೆ ಭಾಗಗಳ ಏಕೀಕರಣವಾಗಿ, ಬಹಳ ವರ್ಷಗಳೇ ಕಳೆದರೂ ನಮ್ಮ ಜನರ ಮನಸ್ಸುಗಳು ಇನ್ನೂ ಒಂದಾಗಿಲ್ಲ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ತುಳು, ಕೊಂಕಣಿ, ಕೊಡವ ಎಂದು ಭೇದ ಕಲ್ಪಿಸುವುದು ಆರೋಗ್ಯಕರ ಬೆಳವಣಿಗೆಯಲ್ಲ.
ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಹಳೇ ಮೈಸೂರಿನವರು ಸ್ಪಂದಿಸಬೇಕು. ಅದೇ ರೀತಿ ಹಳೇ ಮೈಸೂರಿನ ಸಮಸ್ಯೆಗಳಿಗೆ ಉತ್ತರ ಕರ್ನಾಟಕದ ಮಂದಿಯೂ ಸ್ಪಂದಿಸಬೇಕು. ಹೇಗೆ ನಮಗೆ ಕಾವೇರಿ ಸಮಸ್ಯೆ ಮುಖ್ಯವೊ, ಕೃಷ್ಣಾ ನದಿ ನೀರಿನ ವಿವಾದ ಕೂಡ ಅಷ್ಟೇ ಪ್ರಮುಖವಾದ ವಿಷಯ.
ಈಗ ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಪೀಠಕ್ಕಾಗಿ ಹೋರಾಟ ನಡೆಯುತ್ತಿದೆ. ಖಂಡಿತವಾಗಿ ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ಪೀಠದ ಅವತ್ಯಕತೆಯಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಎಲ್ಲಿ ಪೀಠ ಸ್ಥಾಪನೆಯಾಗ ಬೇಕು ಎಂಬ ಬಗ್ಗೆ ಒಮ್ಮತವಿಲ್ಲ. ಕಲ್ಬುರ್ಗಿಯವರು ಕಲ್ಬುರ್ಗಿಯಲ್ಲೆಂದು, ಹುಬ್ಬಳ್ಳಿಯವರು ಹುಬ್ಬಳ್ಳಿಯಲ್ಲೇ ಪೀಠ ಸ್ಥಾಪನೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಹಾಗೆ ನೋಡಿದರೆ ಬಾಗಲಕೋಟೆ ಉತ್ತರ ಕರ್ನಾಟಕದ ಮಧ್ಯದಲ್ಲಿದೆ, ಸದ್ಯಕ್ಕೆ ದೊಡ್ಡ ಸದ್ದು ಆ ಭಾಗದಿಂದ ಎದ್ದಿಲ್ಲ.
ಹಳೇ ಮೈಸೂರಿನವರು ಪೀಠದ ಹೋರಾಟಕ್ಕೆ ಬೆಂಬಲಿಸಬೇಕಾಗಿದೆ. ಅದೇ ರೀತಿ ಉತ್ತರ ಕರ್ನಾಟಕದ ಮಂದಿ ಕಾವೇರಿ ಹೋರಾಟಕ್ಕೆ ಮತ್ತು ಈಗ ನಡೆಯುತ್ತಿರುವ ಕನ್ನಡ ಚಿತ್ರರಂಗದ ಹೋರಾಟಕ್ಕೆ ಹಳೇ ಮೈಸೂರಿನವರೊಂದಿಗೆ ಹೋರಾಟದಲ್ಲಿ ಕೈಸೇರಿಸಬೇಕು. ಆಗ ಮಾತ್ರ ಕನ್ನಡಿಗರ ಮನಸ್ಸುಗಳ ನಿಜವಾದ ಏಕೀಕರಣವಾಗುತ್ತದೆ.
ಇನ್ನು ನಮ್ಮ ಕರಾವಳಿ ಸೀಮೆಯವರ ಬಗ್ಗೆ ಹೇಳುವುದಕ್ಕೆ ತುಂಬ ಹೆಮ್ಮೆಯಾಗುತ್ತದೆ. ತುಳು, ಕೊಂಕಣಿ ಬಾಂಧವರು ನಮ್ಮ ರಾಜ್ಯದಲ್ಲಿಯೇ ಹೆಚ್ಚು ವಿದ್ಯಾವಂತರು, ಬುದ್ಧಿವಂತರು ಆಗಿದ್ದಾರೆ. ಅವರೂ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಮ್ಮ ಮೈಸೂರು-ಬೆಂಗಳೂರು ಕನ್ನಡಿಗರು ಕರಾವಳಿ ಸಮಸ್ಯೆಗಳಾದ ಸಮುದ್ರ ಕೊರೆತ, ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು.
ಕಾಸರಗೋಡಿನ ಹಿರಿಯರಾದ ಕಯ್ಯಾರ ಕಿಞಣ್ಣ ರೈ, ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವುದಕ್ಕೆ ತಮ್ಮ ಜೀವಮಾನವನ್ನೆ ಸಮರ್ಪಿಸಿದ್ದಾರೆ. ಅವರ ಕನಸನ್ನು ನನಸು ಮಾಡಲು ನಾವೆಲ್ಲ ಕನ್ನಡಿಗರೂ ಸರ್ಕಾರವನ್ನು ಆಗ್ರಹಿಸಬೇಕು. ಇಲ್ಲಿನ ವೀರ ಕೊಡವರು ಕ್ರೀಡೆಗಳಲ್ಲಿ, ದೇಶದ ರಕ್ಷಣಾ ಪಡೆಗಳಲ್ಲಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿದ್ದಾರೆ. ಕರ್ನಾಟಕದ ಕಾಶ್ಮೀರ ಎಂದು ಹೆಸರಾಗಿರುವ. ನಮ್ಮ ಸುಂದರ ಕೊಡಗು ಜಿಲ್ಲೆಯ ಅಭಿವೃದ್ದಿಗೆ ನಾವೆಲ್ಲ ಕೈಜೋಡಿಸಬೇಕು. ತಲಕಾವೇರಿಯಲ್ಲಿ ನಡೆಯುವ ಕಾವೇರಿ ಸಂಕ್ರಮಣ ಕಾರ್ಯಕ್ರಮಕ್ಕೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಬೇಕು.
ಕೂಪ ಮಂಡೂಕಗಳಾಗದೇ ಸಮಗ್ರತೆಯ ಅರಿವನ್ನು ಕನ್ನಡಿಗರು ಬೆಳೆಸಿಕೊಳ್ಳ ಬೇಕಾಗಿದೆ. ಎಲ್ಲ ಕನ್ನಡಿಗರ ಮನಸ್ಸು ಗಳ ಏಕೀಕರಣವಾದರೆ ಮಾತ್ರ ಕನ್ನಡಿಗರ ಬಲ ಹೆಚ್ಚುತ್ತದೆ. ಕನ್ನಡದ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.












Click it and Unblock the Notifications