ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಜು. 8 ರಂದು ಚುನಾವಣೆ
ಬೆಂಗಳೂರು : ಜುಲೈ 8 ರಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿಯಾಗಿ ನೇಮಕವಾಗಿರುವ ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ಕೆ. ನಾಗರಾಜು ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 7 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆಗೆ ಜೂನ್ 9 ಕೊನೆಯ ದಿನ. ನಾಮಪತ್ರಗಳನ್ನು ವಾಪಸ್ಸು ಪಡೆಯಲು ಜೂನ್ 13 ರ ಗಡುವನ್ನು ಗೊತ್ತು ಪಡಿಸಲಾಗಿದೆ. ಜೂನ್ 22 ರಂದು ಹೊರನಾಡು ಮತದಾರರಿಗೆ ರಿಜಿಸ್ಟರ್ ಅಂಚೆ ಮೂಲಕ ಮತಪತ್ರಗಳ ರವಾನೆ ಮಾಡಲು ಕೊನೆಯ ದಿನವಾಗಿದೆ. ಮೇ 23 ರಂದು ಅಂತಿಮ ಮತದಾರರ ಪಟ್ಟಿಯನ್ನು ಬೆಂಗಳೂರಿನ ಕಸಾಪ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗುವುದು.
ಜುಲೈ 10 ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಂದ್ರ ಕನ್ನಡ ಕಸಾಪದ ಆವರಣದಲ್ಲಿ ಮತ ಎಣಿಕೆ ನಡೆಯಲಿದೆ. ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಸಾವಿರ ರುಪಾಯಿ ಠೇವಣಿ ಹಾಗೂ ಜಿಲ್ಲಾ ಹಾಗೂ ಗಡಿನಾಡು ಘಟಕಗಳಿಗೆ ಸ್ಪರ್ಧಿಸುವವರಿಗೆ 500 ರು. ಠೇವಣಿಯನ್ನು ನಿಗದಿಪಡಿಸಲಾಗಿದೆ. ಸತತವಾಗಿ ಮೂರು ವರ್ಷಗಳ ಕಾಲ ಪರಿಷತ್ತಿನ ಸದಸ್ಯರಾಗಿರುವವರು ಚುನಾವಣೆಯಲ್ಲಿ ಮತ ಚಲಾಯಿಸಬಹುದು. 5 ವರ್ಷ ಪರಿಷತ್ತಿಗೆ ಸತತ ಸದಸ್ಯತ್ವ ಹೊಂದಿರುವವರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಾಗೂ 10 ವರ್ಷ ಸದಸ್ಯರಾಗಿರುವವರು ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications