‘ನಾಳೆ’ಯ ಚಿಂತೆಯಿಂದ ಪಾರಾಗಲು ಏನು ಮಾಡಬೇಕು? ಇಲ್ಲಿದೆ ನಿಮಗಾಗಿ ಸಲಹೆ
ನಾವೆಲ್ಲರೂ ನಾಳೆಯ ಚಿಂತೆಯಲ್ಲಿ ಇವತ್ತಿನ ಸುಖಮಯ ಕ್ಷಣಗಳನ್ನು ಹಾಳುಮಾಡಿಕೊಂಡವರೇ..ಅದ್ಯಾಕೋ ಗೊತ್ತಿಲ್ಲ ನಮ್ಮೆಲ್ಲರಿಗೂ ಇವತ್ತಿಗಿಂತ ನಾಳೆಯ ಚಿಂತೆಯೇ ತುಸು ಜಾಸ್ತಿ ಕಾಡುತ್ತದೆ. ಹೀಗಾಗಿಯೇ ನಾವು ಕೆಲವೊಮ್ಮೆ ಮಾನಸಿಕವಾಗಿ ಕುಗ್ಗಿಹೋಗುತ್ತೇವೆ. ಇವತ್ತು ಮಾಡಬೇಕಾದ ಕೆಲಸಗಳನ್ನು ಮಾಡದೆ ನಾಳೆಗೆ ಇವತ್ತಿನ ಸಮಸ್ಯೆಗಳ ಬುತ್ತಿಯನ್ನು ಹೊತ್ತುಕೊಂಡೇ ಹೋಗುತ್ತಿದ್ದೇವೆ.
ನಮ್ಮ ಬದುಕು ಪ್ರಾಣಿ ಪಕ್ಷಿಗಳಂತಿಲ್ಲ. ಇವತ್ತು ದುಡಿದು ಇವತ್ತೇ ತಿಂದು ಮಲಗುವ ಸ್ಥಿತಿಯಲ್ಲಿ ನಾವಿಲ್ಲ. ರಾತ್ರಿ ಮಲಗುವಾಗಲೂ ನಾಳೆ ಬೆಳಿಗ್ಗೆ ತಿಂಡಿ ಏನು? ಊಟ ಮಾಡಿ ಉಳಿದ ಪದಾರ್ಥಗಳನ್ನು ಬಿಸಿ ಮಾಡಿ ನಾಳೆಗೆ ಸಾಕಾಗುತ್ತದೆ ಎಂಬ ಆಲೋಚನೆಯಲ್ಲಿ ಮಲಗುತ್ತೇವೆ. ಹೀಗಿರುವಾಗ ನಾಳೆ ಬಗ್ಗೆ ಚಿಂತೆ ಮಾಡಬೇಡಿ ಎನ್ನುವುದು ನಮಗೆ ನಾವೇ ಮಾಡಿಕೊಳ್ಳುವ ವಂಚನೆಯಾಗುತ್ತದೆ.

ಸಾಮಾನ್ಯವಾಗಿ ನಾವ್ಯಾರೂ ಇವತ್ತಿನ ಬಗ್ಗೆ ಚಿಂತಿಸುವುದೇ ಇಲ್ಲ. ಕೂತರೂ ನಿಂತರೂ ನಮಗೆ ನಾಳೆಯದ್ದೇ ಚಿಂತೆ. ಪ್ರಾಣಿ ಪಕ್ಷಿಗಳು ಹಾಗಿಲ್ಲ. ಇವತ್ತು ಸಿಕ್ಕಿದನ್ನು ಉಂಡು ಮಲಗಿ ನೆಮ್ಮದಿಯಾಗಿ ನಿದ್ದೆ ಮಾಡುತ್ತವೆ. ಆದರೆ ನಾವು ಮನುಷ್ಯರು ರಾತ್ರಿ ಮೃಷ್ಟಾನ್ನ ಉಂಡು ಸುಪ್ಪತ್ತಿಗೆಯಲ್ಲಿ ಮಲಗಿದರೂ ನಾಳೆ ಎಂಬ ಚಿಂತೆ ನಮ್ಮನ್ನು ಸುಖವಾಗಿ ನೆಮ್ಮದಿಯಾಗಿ ನಿದ್ದೆ ಮಾಡಲು ಬಿಡುವುದಿಲ್ಲ. ನಾಳೆ ಏನಾಗುತ್ತೋ ಎಂಬ ಆತಂಕ ನಮ್ಮನ್ನು ಕಾಡುತ್ತಲೇ ಇರುತ್ತದೆ.
ನಾಳೆ ಏನು ಬೇಕಾದರೂ ಆಗಬಹುದು?
ಇವತ್ತಿದ್ದಂತೆ ನಾಳೆಯೂ ಇರುತ್ತೆ ಎಂಬ ನಂಬಿಕೆ ನಮಗಿಲ್ಲ. ನಾಳೆ ಏನು ಬೇಕಾದರೂ ಆಗಬಹುದು. ಕೆಲಸವೇನೋ ಇದೆ. ಭದ್ರತೆಯಿಲ್ಲ. ಅದು ಕೂಡ ನಾಳೆ ಕೈ ತಪ್ಪಿ ಹೋದರೂ ಹೋಗಬಹುದು. ಬರಬೇಕಾದ ಹಣ ಬರದೆಯೂ ಇರಬಹುದು. ಅದು ನಮಗೆ ಗೊತ್ತಿಲ್ಲ. ಆದರೆ ಅದನ್ನು ಇವತ್ತೇ ಕಲ್ಪಿಸಿಕೊಂಡು ಚಿಂತೆ ಮಾಡುವುದು ಮಾತ್ರ ಮೂರ್ಖತನವಾಗಿ ಬಿಡುತ್ತದೆ. ನಾಳೆ ಏನು ಬೇಕಾದರೂ ಆಗಬಹುದು ಎಂಬ ಸತ್ಯ ಗೊತ್ತಿದ್ದರೂ ಇಲ್ಲ ಸಲ್ಲದ ವಿಚಾರಗಳನ್ನು ತಲೆಗೆ ಹಾಕಿಕೊಂಡು ಚಿಂತೆ ಮಾಡುತ್ತಿರುತ್ತೇವೆ.
ನಮ್ಮ ಸಂಪಾದನೆಯಲ್ಲಿ ಕೊಡಬೇಕಾದುದೆಲ್ಲವನ್ನೂ ಕೊಟ್ಟು ಕೈಖಾಲಿ ಆದಾಗ ಮುಂದೆ ಹೇಗಪ್ಪಾ ಎಂಬ ಚಿಂತೆ ಕಾಡುತ್ತದೆ. ಕೇವಲ ಚಿಂತಿಸುತ್ತಾ ಕೂತರೂ ಏನು ಪ್ರಯೋಜನವಿಲ್ಲ ಅದಕ್ಕೊಂದು ಮಾರ್ಗ ಹುಡುಕಲೇ ಬೇಕು. ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ಸಮಸ್ಯೆ ಎದುರಾದಾಗ ಅದನ್ನು ಪರಿಹರಿಸುವ ಮಾರ್ಗ ಹುಡುಕಬೇಕೇ ವಿನಃ ಚಿಂತೆ ಮಾಡುತ್ತಾ ಆತ್ಮಸ್ಥೈರ್ಯ ಕುಂದಿಸಿಕೊಳ್ಳುವುದಲ್ಲ.

ಚಿಂತೆ ಮಾಡುವುದನ್ನು ಬಿಟ್ಟು ಚಿಂತನೆ ಮಾಡಿ
ಚಿಂತೆ ಮಾಡುತ್ತಾ ಹೋದರೆ ಅದು ನಮ್ಮ ಬದುಕನ್ನು ಆವರಿಸಿ ಕತ್ತಲಿಗೆ ತಳ್ಳಿಬಿಡುತ್ತದೆ. ಚಿಂತೆ ಕುರಿತಂತೆ ಮಾತೊಂದಿದೆ. ಮನುಷ್ಯ ಸಾಯುತ್ತಾನೆ ಚಿಂತೆ ಸಾಯುವುದಿಲ್ಲ. ನಮ್ಮೆಲ್ಲರಿಗೂ ಕೆಲವು ವಿಚಾರಗಳು ಗೊತ್ತಿದೆ. ಹುಟ್ಟಿದ ಮನುಷ್ಯ ಸಾಯಲೇ ಬೇಕು. ಆದರೆ ಹುಟ್ಟು ಸಾವಿನ ನಡುವೆ ಸಮಸ್ಯೆ, ಕಷ್ಟ, ಸುಖ ಹೀಗೆ ಎಲ್ಲವೂ ಬರುತ್ತದೆ. ಅದನ್ನು ಅರಿತುಕೊಂಡು ಬದುಕುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು.
ನಮ್ಮ ಬದುಕನ್ನು ಒಳ್ಳೆಯ ಮಾರ್ಗದಲ್ಲಿ ಕಟ್ಟಿಕೊಳ್ಳಲು ನಮಗೆ ಬೇಕಾಗಿರುವುದು ಚಿಂತೆಯಲ್ಲ ಚಿಂತನೆ ಎಂಬುವುದನ್ನು ಒಳ್ಳೆಯ ವಿಚಾರಗಳ ಬಗ್ಗೆ ಚಿಂತಿಸುವುದರಿಮದ ನಮ್ಮ ಮನಸ್ಸನ್ನು ಆಗಾಗ್ಗೆ ಕಾಡುವ ಚಿಂತೆಯಿಂದ ಕಾಪಾಡಿಕೊಳ್ಳಬಹುದು. ಇಷ್ಟಕ್ಕೂ ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರನ್ನೂ ಚಿಂತೆ ಕಾಡದಿರದು. ಹಾಗೆಂದು ಬರೀ ಚಿಂತೆಯಲ್ಲೇ ಕಾಲ ಕಳೆಯುವಂತಿಲ್ಲ.
ಚಿಂತೆ ಮಾಡಿದರೆ ಮನುಷ್ಯ ಚಿತೆಯಾಗುತ್ತಾನೆ
ಚಿಂತೆ ಮಾಡುತ್ತಾ ಹೋದರೆ ಮನುಷ್ಯ ಚಿತೆಯಾಗಬೇಕಾಗುತ್ತದೆ. ಆದ್ದರಿಂದ ಚಿಂತೆಯಿಂದ ಹೊರಬರಬೇಕಾದರೆ ಭಗವಂತನನ್ನು ಕುರಿತ ಚಿಂತನೆ ಮಾಡುವುದು ಉತ್ತಮ. ಭಗವದ್ ವಿಷಯಗಳಲ್ಲಿ ನಾವು ಮಗ್ನರಾದಷ್ಟು ನಾವು ನಮ್ಮ ಮನಸ್ಸಿನಲ್ಲಿರುವ ಚಿಂತೆಗಳನ್ನು ದೂರ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಯಾವುದೇ ಕೆಲಸವಿಲ್ಲದೆ ಸುಮ್ಮನೆ ಕುಳಿತಾಗ ನಮ್ಮನ್ನು ಚಿಂತೆ ಕಾಡುತ್ತದೆ.

ನಮ್ಮೊಂದಿಗಿದ್ದವರು, ನಮಗಿಂತ ಚಿಕ್ಕವರು, ನಮಗಿಂತ ಎತ್ತರಕ್ಕೆ ಬೆಳೆದಿದ್ದಾರೆ. ನಮಗಿಂತಲೂ ಶ್ರೀಮಂತರಾಗಿದ್ದಾರೆ. ನಾನು ಮಾತ್ರ ಹೀಗೆಯೇ ಇದ್ದೇನೆ ಎನ್ನುತ್ತಾ ತಮ್ಮನ್ನೇ ತಾವೇ ಹೀಯಾಳಿಸಿಕೊಳ್ಳುತ್ತಾ ತಮ್ಮ ಶಕ್ತಿ ಸಾಮರ್ಥ್ಯವನ್ನು ಕುಗ್ಗಿಸಿಕೊಳ್ಳುತ್ತಾ ಚಿಂತೆ ಮಾಡುವವರು ಇದ್ದಾರೆ. ನಮಗಿಂತ ನಾವು ಸುಖವಾಗಿದ್ದೇವೆ. ದೇವರು ಇಷ್ಟರ ಮಟ್ಟಿಗೆ ನಮಗೆ ಒಳ್ಳೆಯ ಬದುಕನ್ನು ನೀಡಿದ್ದಾನಲ್ಲ ಎಂದು ಸಂತೋಷಪಡುವುದನ್ನು ಕಲಿಯಬೇಕು.
ಬೇರೆಯವರೊಂದಿಗೆ ತಾಳೆ ಹಾಕಬೇಡಿ
ನಮ್ಮ ಬದುಕನ್ನು ಬೇರೆಯವರ ಬದುಕಿನೊಂದಿಗೆ ತಾಳೆ ಹಾಕಿ ನೋಡುವುದನ್ನು ಮೊದಲು ಬಿಡಬೇಕು. ಒಂದು ವೇಳೆ ಹಾಗೆ ಮಾಡಿದರೂ ಬೇರೆ ವ್ಯಕ್ತಿಗಳ ಬದುಕಿನ ಒಳ್ಳೆತನಗಳನ್ನು ನಮ್ಮೊಂದಿಗೆ ಹೋಲಿಸುತ್ತಾ ಅವರ ಆದರ್ಶಗಳನ್ನು ಪಾಲಿಸುವಂತಾಗಬೇಕು. ಆದರೆ ಅದು ನಮ್ಮಿಂದ ಸಾಧ್ಯವೇ? ನಾವು ಬೇರೆಯವರ ಒಳ್ಳೆತನಗಳನ್ನು ಪಾಲಿಸುವುದಿಲ್ಲ ಬದಲಾಗಿ ಅವರ ಮನೆಯಲ್ಲಿರುವ ಐಷಾರಾಮಿ ವಸ್ತುಗಳಿಗೆ ಪೈಪೋಟಿ ನೀಡುತ್ತೇವೆ. ಅವರಲ್ಲಿರುವ ವಸ್ತು ನಮ್ಮಲ್ಲಿಲ್ಲವಲ್ಲ ಎಂದು ಚಿಂತೆ ಮಾಡುತ್ತೇವೆ. ಇಂಥ ಕೆಟ್ಟ ಪ್ರವೃತ್ತಿ ಕೂಡ ನಮ್ಮನ್ನು ವೃಥಾ ಚಿಂತೆಗೆ ದೂಡುತ್ತದೆ.
ಕೆಲವರಿಗೆ ಚಿಂತೆ ಮಾಡುವುದೇ ಒಂದು ಕಾಯಿಲೆ. ಏಕೆಂದರೆ ಅವರು ಬೇಡವಾದ ವಿಚಾರಕ್ಕೆಲ್ಲ ಚಿಂತೆ ಮಾಡುತ್ತಿರುತ್ತಾರೆ. ಅದರಿಂದಲೇ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಾರೆ. ಇವತ್ತು ಹೀಗಿದೆ. ನಾಳೆ ಇನ್ನು ಹೇಗಿದೆಯೋ ಗೊತ್ತಿಲ್ಲ. ಏಕೆಂದರೆ ಅದು ಬಂದಿಲ್ಲ. ಆದರೆ ಬಂದೇ ಬರುತ್ತೆ. ಇವತ್ತು ಹೇಗೆ ಕಳೆದಿದ್ದೇವೆಯೋ ಹಾಗೆಯೇ ನಾಳೆ ಬರಲಿರುವ ದಿನವನ್ನು ಎದುರಿಸಿದರಾಯಿತು. ನಾಳೆ ಹಾಗೆ ಆಗಬಹುದು... ಹೀಗೆ ಆಗಬಹುದು ಎಂದು ಚಿಂತಿಸುತ್ತಾ ಇವತ್ತಿನ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುವುದು ಮೂರ್ಖತನವಾಗುತ್ತದೆ.
ಮನಸ್ಸನ್ನು ಭಗವಂತನತ್ತ ತಿರುಗಿಸಬೇಕು
ಈ ಪ್ರಪಂಚದಲ್ಲಿ ಜನ್ಮವೆತ್ತ ನಾವೆಲ್ಲರೂ ಸಾಯಲೇ ಬೇಕು. ಆ ಸತ್ಯ ನಮಗೂ ಗೊತ್ತಿದೆ. ನಮ್ಮ ಸಂಸಾರದ ಜವಾಬ್ದಾರಿ ಹೊತ್ತ ವ್ಯಕ್ತಿ ಅಥವಾ ನಾವು ಅತೀ ಹೆಚ್ಚು ಪ್ರೀತಿಸುವ ಜೀವ ನಮ್ಮನ್ನು ಬಿಟ್ಟು ಹೋದರೆ ನಮ್ಮ ಬದುಕೇ ಮುಗಿದು ಹೋಯತೆಂಬ ಭಾವ ನಮ್ಮನ್ನು ಕಾಡುತ್ತದೆ. ಹಾಗೆಂದು ಅವರ ಚಿಂತೆಯಲ್ಲೇ ಕಾಲ ಕಳೆದರೆ ನಮ್ಮನ್ನು ಆಶ್ರಯಿಸಿದವರ ಪಾಡೇನು? ಎಲ್ಲವನ್ನು ಎದುರಿಸಿ ನಿಲ್ಲುವ ಶಕ್ತಿಯನ್ನು ನಾವು ತಂದುಕೊಳ್ಳಬೇಕು.
ಬೇಡ, ಬೇಡ ಎಂದರೂ ನಮ್ಮ ಮನಸ್ಸನ್ನು ಆವರಿಸಿ ಬರುವ ಚಿಂತೆಯನ್ನು ದೂರ ಮಾಡಬೇಕೆಂದರೆ ಮನಸ್ಸನ್ನು ಭಗವಂತನತ್ತ ತಿರುಗಿಸಬೇಕು ಹೀಗೆ ಸದಾ ದೇವರ ಧ್ಯಾನದಲ್ಲಿ ತೊಡಗುವುದರಿಂದ ನಮ್ಮ ಮನಸ್ಸಿನಲ್ಲಿ ಆವರಿಸಿದ ಚಿಂತೆ ಸದ್ದಲ್ಲದೆ ಮಾಯವಾಗುತ್ತದೆ. ನಮ್ಮನ್ನು ಚಿಂತೆ ಆವರಿಸುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ಮನಸ್ಸನ್ನು ಒಳ್ಳೆಯ ಚಿಂತನೆಯತ್ತ ಹರಿಸಬೇಕು. ಇದು ಒಂದು ರೀತಿಯ ತಂತ್ರ ಎಂದರೂ ತಪ್ಪಾಗಲಾರದು. ಏಕೆಂದರೆ ಭಗವಂತನ ಕುರಿತು ಮತ್ರೋಚ್ಛಾರಣೆಯನ್ನು ಮಾಡುವುದರಿಂದ ನಮ್ಮಲ್ಲಿ ಜಾಗೃತವಾಗುವ ಉದಾತ್ತ ಭಾವವು ನಮ್ಮನ್ನು ಆಗಾಗ್ಗೆ ದಾಳಿ ಮಾಡಿ ಕೊಲ್ಲುವ ಚಿಂತೆಯಿಂದ ಪಾರು ಮಾಡಬಲ್ಲದು ಎಂಬುದಾಗಿ ಆಧ್ಯಾತ್ಮಿಕ ಚಿಂತಕರು ಸಲಹೆ ನೀಡಿದ್ದಾರೆ.
ಬುದ್ಧನ ಉಪದೇಶವೇನು?
ಭಗವಾನ್ ಬುದ್ಧ ಹೇಳುತ್ತಾನೆ ಮನಸ್ಸಿನಲ್ಲಿ ಹುಟ್ಟಿದ ಚಿಂತನೆಯನ್ನು ದೂರ ಓಡಿಸಬೇಕಾದರೆ ಮನಸ್ಸಿನ ಸ್ತರಗಳನ್ನು ಮತ್ತೆ ಮತ್ತೆ ಪರಿಶೀಲನೆಗೆ ಒಳಪಡಿಸಬೇಕು. ಹಾಗೆಯೇ ಕೆಲಸಕ್ಕೆ ಬಾರದ ಚಿಂತನೆಗಳನ್ನು ಮನಸ್ಸಿನಿಂದ ಕಿತ್ತುಹಾಕಿ ಒಳ್ಳೆಯದನ್ನು ಮಾತ್ರ ತುಂಬಿಕೊಳ್ಳಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ನಾವು ಚಿಂತೆಯಿಂದ ದೂರವಾಗ ಬೇಕಾದರೆ ಇದ್ದುದರಲ್ಲಿ ಖುಷಿಯಾಗಿ ಇರುವುದನ್ನು ಕಲಿಯಬೇಕು ಅಷ್ಟೆ.












Click it and Unblock the Notifications